ಮೈಸೂರು ಶಿಕ್ಷಕಿ ಸಾವು - ಆತ್ಮಹತ್ಯೆಯೋ, ಕೊಲೆಯೋ?
ಮೈಸೂರು, ಜನವರಿ,16: ಶಿಕ್ಷಕಿಯೊಬ್ಬಳು ಗಂಡನ ಕಿರುಕುಳಕ್ಕೆ ಬೇಸತ್ತು ಡೆತ್ನೋಟ್ ಬರೆದಿಟ್ಟು ಶಾರದಾದೇವಿ ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯದು ಆತ್ಮಹತ್ಯೆಯೋ, ಕೊಲೆಯೋ ಎಂಬ ಗೊಂದಲಗಳು ತಲೆದೋರಿದೆ.
ಶಾರದಾದೇವಿ ನಗರದ ನಿವಾಸಿ, ಮಹದೇವಪುರ ಸರ್ಕಾರಿ ಶಾಲಾ ಶಿಕ್ಷಕಿ ಮೀನಾಕ್ಷಮ್ಮ(44) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆಯ ಪತಿ ಈಶ್ವರಪ್ಪ ಕುವೆಂಪುನಗರ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಹೆಂಡತಿ ಮೀನಾಕ್ಷಮ್ಮನ ಮೇಲೆ ಸಂಶಯಪಡುವುದಲ್ಲದೆ, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದನು.[ಮೈಸೂರಲ್ಲಿ ಬಹುರೂಪಿ ನಾಟಕೋತ್ಸವ]
ಹೆಂಡತಿ ಮೀನಾಕ್ಷಮ್ಮನ ಪ್ರತಿ ಹೆಜ್ಜೆಯನ್ನು ಅನುಮಾನದಿಂದಲೇ ನೋಡುತ್ತಿದ್ದ ಈಶ್ವರಪ್ಪ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಾ ಮಾನಸಿಕ ರೋಗಿಯಂತೆ ವರ್ತಿಸುತ್ತಿದ್ದನು. ಈ ದಂಪತಿಗಳಿಗೆ 2 ಹೆಣ್ಣು ಮಕ್ಕಳಿದ್ದು, ಮಕ್ಕಳ ಮುಖ ನೋಡಿ ಆತ ನೀಡುತ್ತಿದ್ದ ಹಿಂಸೆಯನ್ನು ಮೀನಾಕ್ಷಮ್ಮ ಸಹಿಸಿಕೊಂಡು ಬಂದಿದ್ದಳು. ಒಮ್ಮೆ ಈಶ್ವರಪ್ಪನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿ ರಾಜೀ ಸಂಧಾನ ನಡೆಸಲಾಗಿತ್ತು. ಆದರೆ ಈಶ್ವರಪ್ಪ ಮಾತ್ರ ಚಾಳಿ ಮುಂದುವರೆಸಿದ್ದನು.[ಹುಣಸೂರಿನ ಮೂರು ರಸ್ತೆಗಳಲ್ಲಿ ಮೆರವಣಿಗೆ ಬಂದ್]
ಇದೀಗ ಡೆತ್ನೋಟ್ ಬರೆದಿಟ್ಟು ಮೀನಾಕ್ಷಮ್ಮ ನೇಣಿಗೆ ಶರಣಾಗಿದ್ದಾಳೆ. ಆದರೆ ಮೀನಾಕ್ಷಮ್ಮನ ಕುಟುಂಬಸ್ಥರು ಆಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ ಗಂಡ ಈಶ್ವರಪ್ಪ ಕೊಲೆಗೈದು ನೇಣು ಹಾಕಿದ್ದಾನೆ ಎಂದು ದೂರು ನೀಡಿದ್ದಾರೆ. ಈ ಸಂಬಂಧ ಸರಸ್ವತಿಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಮಂಜುಳಾ ಮಾನಸ ಭೇಟಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರ ತನಿಖೆಯಿಂದ ನಿಜಾಂಶ ಹೊರ ಬರಬೇಕಿದೆ.