ನಿಂದಿಸಿದ ಮಾಜಿ ಪತ್ನಿಗೆ ಚಾಕುವಿನಿಂದ ಇರಿದ ಪತಿರಾಯ
ಮೈಸೂರು, ಡಿಸೆಂಬರ್, 03 : ಮಾಜಿ ಪತ್ನಿಯ ಮೂದಲಿಕೆ ಮಾತನ್ನು ಗಂಭೀರವಾಗಿ ತೆಗೆದುಕೊಂಡ ವ್ಯಕ್ತಿಯೊಬ್ಬ ಆಕೆ ಮೇಲೆ ಆಕ್ರೋಶಗೊಂಡು ಚಾಕುವಿನಿಂದ ಇರಿದು, ಬಳಿಕ ಆತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯಲ್ಲಿ ಬುಧವಾರ ನಡೆದಿದೆ.
ಎಚ್.ಡಿ.ಕೋಟೆ ನಿವಾಸಿ ಚಲುವನಾಯಕ ಅಲಿಯಾಸ್ ಗೋವಿಂದ (35) ಮಾಜಿ ಪತ್ನಿ ಮೇಲೆ ಹಲ್ಲೆ ನಡೆಸಿದ ಆರೋಪಿ. ಈತ ತನ್ನ ಮಾಜಿ ಪತ್ನಿ ನಂಜಮಣಿಗೆ ಚಾಕುವಿನಿಂದ ಚುಚ್ಚಿ ಗಾಯಗೊಳಿಸಿದ್ದು, ಈಕೆಯನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಸೇರಿಸಲಾಗಿದೆ.[ಹಳಸಿದ ಸಂಬಂಧಗಳು...ಅವಳ ಮೇಲೆ ಮಾರಣಾಂತಿಕ ಹಲ್ಲೆ]
ಚಲುವನಾಯಕ ಅಲಿಯಾಸ್ ಗೋವಿಂದ ಕಳೆದ 10 ವರ್ಷದ ಹಿಂದೆ ನಂಜಮಣಿ ಎಂಬಾಕೆಯನ್ನು ಮದುವೆಯಾಗಿದ್ದನು. 5 ವರ್ಷ ಸಂತೋಷವಾಗಿದ್ದ ಸಂಸಾರದಲ್ಲಿ ಬಿರುಕು ಮೂಡಿತ್ತು. ಆ ಸಂದರ್ಭದಲ್ಲಿ ಆಗಾಗ ಮನೆಗೆ ಬರುತ್ತಿದ್ದ ಪತಿಯ ಸ್ನೇಹಿತನನ್ನು ಪತ್ನಿ ನಂಜಮಣಿ ಪ್ರೀತಿಸಲು ಶುರುಮಾಡಿದಳು. ಬಳಿಕ ಮನೆಬಿಟ್ಟು ಹೋಗಿ ಆತನೊಂದಿಗೆ ಸಂಸಾರ ನಡೆಸುತ್ತಿದ್ದಳು.[ಪ್ರೀತಿ ನಿರಾಕರಿಸಿದವಳಿಗೆ ಚೂರಿ ಹಾಕಿದ ಭಗ್ನ ಪ್ರೇಮಿ]
ಪತ್ನಿ ಮನೆಬಿಟ್ಟು ಹೋದ ಬಳಿಕ ಗೋವಿಂದ ಮತ್ತೊಂದು ಮದುವೆಯಾಗಿದ್ದನು. ಆದರೆ ನಂಜಮಣಿ ಮಾತ್ರ ಗೋವಿಂದ ಎದುರು ಸಿಕ್ಕಾಗಲೆಲ್ಲಾ ನಿಂದಿಸುವುದು, ಮೂದಲಿಸುವುದನ್ನು ಮಾಡುತ್ತಿದ್ದಳು.
ಬುಧವಾರವೂ ಅದು ಪುನರಾವರ್ತನೆಗೊಂಡಿದ್ದು, ಕೋಪಗೊಂಡ ಗೋವಿಂದ ಅವಳಿಗೆ ಚಾಕುವಿನಿಂದ ಇರಿದಿದ್ದಾನೆ. ಈ ಕೃತ್ಯ ಎಸಗಿದ ಗೋವಿಂದ ಜೈಲು ಸೇರಬೇಕಾಗುತ್ತದೆ ಎಂದು ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚಾಕು ಇರಿತಕ್ಕೊಳಗಾದ ನಂಜಮಣಿಗೆ ಹೆಚ್.ಡಿ.ಕೋಟೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.