ಫೆ.3 ರಿಂದ ಮೈಸೂರು ಮೃಗಾಲಯ ಪ್ರವೇಶ ಮುಕ್ತ
ಮೈಸೂರು, ಫೆಬ್ರವರಿ 2 : ಹಕ್ಕಿಜ್ವರ ಸೋಂಕು ಹರಡುವಿಕೆ ಭೀತಿಯಿಂದ ಜನವರಿ 4 ರಿಂದ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿದ್ದ ಮೈಸೂರು ಚಾಮರಾಜೇಂದ್ರ ಮೃಗಾಲಯವು ಫೆ.3 ರಿಂದ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪಕ್ಷಿಗಳ ರಕ್ತ, ಹಿಕ್ಕೆ ಮಾದರಿಯನ್ನು ಶೇಖರಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಎರಡು ಹಂತದ ಪರೀಕ್ಷೆಯಲ್ಲೂ ಮೃಗಾಲಯದ ಪಕ್ಷಿಗಳಿಗೆ ಸೋಂಕು ತಗುಲದಿರುವುದು ಧೃಡಪಟ್ಟಿದ್ದು, ಪಕ್ಷಿಗಳ ಮಾದರಿ ವರದಿ ನೆಗೆಟೀವ್ ಆಗಿ ಬಂದಿದೆ.[ಮೈಸೂರು ಮೃಗಾಲಯ ಸೋಂಕು ಮುಕ್ತ: ಕೆಲವೇ ದಿನದಲ್ಲಿ ಪ್ರವೇಶ]
ಕೇಂದ್ರ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿಯಂತೆ ಪಶುಸಂಗೋಪನಾ ಇಲಾಖೆ ಅನುಮತಿಯ ಮೇರೆಗೆ ಮೃಗಾಲಯವನ್ನು ಫೆ.3ರಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗುತ್ತಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕಮಲಾ ತಿಳಿಸಿದ್ದಾರೆ.
ನಿನ್ನೆ(ಫೆ.1) ಸಂಜೆ ಮೃಗಾಲಯದಲ್ಲಿ 2 ವರ್ಷದ ಗಂಡು ಹುಲಿಯೊಂದು ಮೃತಪಟ್ಟಿರುವ ಘಟನೆ ನಡೆದಿದೆ. ಗಂಟಲಲ್ಲಿ ಆಹಾರ ಸಿಕ್ಕಿಹಾಕಿಕೊಂಡು, ಶ್ವಾಸ ನಾಳವು ಮುಚ್ಚಿದಂತಾಗಿ ಉಸಿರಾಡಲು ಸಾಧ್ಯಯವಾಗದೇ ಸತ್ತಿದೆ ಎಂಬ ಮಾಹಿತಿ ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕಮಲಾ ಹೇಳಿದ್ದಾರೆ.