ದುಶ್ಚಟಗಳಿಗೆ ಬಲಿಯಾದ ಮಗನನ್ನು ಕೊಲೆಗೈದ ತಂದೆ!
ಮೈಸೂರು,ಫೆಬ್ರವರಿ,24: ಜನ್ಮಕೊಟ್ಟ ಅಪ್ಪನೇ ಮಗನನ್ನು ಕೊಂದಿದ್ದಾನೆ ಎಂದರೆ ಮಗನ ಹಿಂಸೆ, ಕೆಟ್ಟ ವರ್ತನೆ ಅಪ್ಪನ ಮನಸ್ಸನ್ನು ಎಷ್ಟರ ಮಟ್ಟಿಗೆ ರೋಸುವಂತೆ ಮಾಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಹೌದು ಇಂತಹದೊಂದು ಘಟನೆ ಮೈಸೂರಿನ ಕುವೆಂಪು ನಗರದಲ್ಲಿ ನಡೆದಿದೆ.
ಕುಡಿತ ಸೇರಿದಂತೆ ಹಲವು ಕೆಟ್ಟ ಚಟಗಳಿಗೆ ಬಲಿಯಾಗಿದ್ದ ಮಗ ದೇವರಾಜ್ (32) ನನ್ನು ತಂದೆ ಕೃಷ್ಣಪ್ಪ(64) ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದಿದ್ದಾನೆ. ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಕೃಷ್ಣಪ್ಪನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.[ಇಬ್ಬರು ಮಕ್ಕಳ ಬಾಳಿಗೆ ಬೆಳಕಾದ ವಿಜಯಪುರದ 'ಜ್ಯೋತಿ']
ಘಟನೆಯ ವಿವರ:
ಯಾವುದೇ ಕೆಲಸ ಮಾಡದ ದೇವರಾಜ್ ಪ್ರತಿದಿನ ಏನಾದರೊಂದು ಕಿರಿಕ್ ಮಾಡಿಕೊಂಡು ಮನೆಗೆ ಬರುತ್ತಿದ್ದನು. ಅಲ್ಲದೇ ಹಣ ಕೊಡುವಂತೆ ಅಪ್ಪನನ್ನು ಪೀಡಿಸುತ್ತಿದ್ದನು. ಈ ನಡುವೆ ದೇವರಾಜ್ ಮದುವೆ ಮಾಡುವಂತೆ ತಂದೆಯನ್ನು ಕೇಳಿದ್ದಾನೆ.
ತಂದೆ ಕೃಷ್ಣಪ್ಪ ಮೊದಲು ಬದುಕುವುದನ್ನು ಕಲಿ. ಸಂಪಾದನೆ ಇಲ್ಲ, ಜೊತೆಗೆ ಇಲ್ಲದ ದುರಾಭ್ಯಾಸಗಳನ್ನು ಕಲಿತಿದ್ದೀಯಾ. ನಿನಗೆ ಮದುವೆ ಮಾಡೋದು ಹೇಗೆ? ಒಳ್ಳೆಯವನಾಗು ಆಗ ಮದುವೆ ಮಾಡುತ್ತೇನೆ ಎಂದು ಕೃಷ್ಣಪ್ಪ ಬುದ್ದಿವಾದ ಹೇಳಿದ್ದರು. ಆದರೆ ಅವರ ಮಾತಿಗೆ ಸೊಪ್ಪು ಹಾಕದ ದೇವರಾಜ್ ತಂದೆ ವಿರುದ್ದವೇ ತಿರುಗಿ ಬಿದ್ದಿದ್ದನು.[ಮಕ್ಕಳನ್ನು ಕೊಂದು ಮೋರಿಗೆ ಶವ ಎಸೆದ ಪಾಪಿ ತಂದೆ]
ದೇವರಾಜ್ ಕುಡಿದ ಮತ್ತಿನಲ್ಲೇ ಕೋಣೆಯಲ್ಲಿ ಮಲಗಿದ್ದನು. ಮಗನ ಮೇಲೆ ಆಕ್ರೋಶಗೊಂಡಿದ್ದ ತಂದೆ ಕೃಷ್ಣಪ್ಪ ಮನೆಯಲ್ಲಿದ್ದ ಸೀಮೆಎಣ್ಣೆಯನ್ನು ಆತನ ಮೇಲೆ ಸುರಿದು ಬೆಂಕಿ ಹಚ್ಚಿ ಕೋಣೆಯ ಬಾಗಿಲು ಹಾಕಿದ್ದಾರೆ. ಇದರಿಂದ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿದ ದೇವರಾಜ್ ಸಾವನ್ನಪ್ಪಿದ್ದಾನೆ.