'ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ ಅಂಟಿಸಿದರೆ ಶಿಕ್ಷಾರ್ಹ ಅಪರಾಧ'
ಮೈಸೂರು, ಫೆಬ್ರವರಿ 20 : ನಗರಗಳನ್ನು ಪೋಸ್ಟರ್ ಮುಕ್ತ ಮಾಡುವ ಉದ್ದೇಶದಿಂದ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಮೈ ಇಂಡಿಯಾ ಪೋಸ್ಟರ್ ಫ್ರೀ ಇಂಡಿಯಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ನಗರಾಭಿವೃದ್ಧಿ ಹಾಗೂ ಸ್ವಚ್ಛಭಾರತ ಅಭಿಯಾನದ ಕರ್ನಲ್ ಶಿವರಾಜ್ ಕುಮಾರ್ ತಿಳಿಸಿದರು.
ಸೋಮವಾರ ಮಹಾನಗರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ ಅಂಟಿಸುವುದು, ಗೋಡೆಗಳ ಮೇಲೆ ಚಿತ್ರಗಳನ್ನು ಬರೆಯುವುದರಿಂದ ನಗರದ ಅಂದ ಹಾಳಾಗುತ್ತದೆ.
ಅಲ್ಲದೆ, ಇದು ಶಿಕ್ಷಾರ್ಹ ಅಪರಾಧವಾಗಿದ್ದು ಒಂದು ವರ್ಷದವರೆಗೂ ಶಿಕ್ಷೆ ವಿಧಿಸಬಹುದು ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಅಧಿಕಾರಿಗಳಿಗೆ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಹೇಳಿದರು.
ಸಾರ್ವಜನಿಕರು ಅಧಿಕಾರಿಗಳೊಂದಿಗೆ ಕೈಜೋಡಿಸಿ ನಗರದ ಅಂದವನ್ನು ಹೆಚ್ಚಿಸುವ ಕೆಲಸ ಮಾಡಬೇಕು. ಪೋಸ್ಟರ್ ಗಳು, ಪ್ಲೆಕ್ಸ್ ಗಳನ್ನು ಅಂಟಿಸುವುದರಿಂದ ಉಂಟಾಗುವ ದುಷ್ಪರಿಣಾಮದ ಅರಿವನ್ನು ಸಾರ್ವಜನಿಕರಲ್ಲಿ ಮೂಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಬಳಿಕ ಮಾತನಾಡಿದ ಮೇಯರ್ ಎಂ.ಜೆ.ರವಿಕುಮಾರ್, ಮೈಸೂರು ಸತತ ಎರಡು ಬಾರಿ ದೇಶದ ನಂ.1 ಸ್ವಚ್ಛ ನಗರಿ ಬಿರುದಿಗೆ ಪಾತ್ರವಾಗಿದೆ. ಮೂರನೇ ಬಾರಿಯೂ ದೊರೆಯುವ ನಿರೀಕ್ಷೆ ಇದೆ.
ನಗರದಲ್ಲಿ ಎಲ್ಲೆಂದರಲ್ಲಿ ಪ್ಲೆಕ್ಸ್, ಪೋಸ್ಟರ್ ಗಳನ್ನು ಅಂಟಿಸುವುದರಿಂದ ನಗರದ ಅಂದ ಹಾಳಾಗುವುದಲ್ಲದೆ ಸ್ವಚ್ಛತೆಯೂ ಹಾಳಾಗುತ್ತದೆ ಎಂದರು.
ಪೋಸ್ಟರ್ ಗಳನ್ನು ಅಂಟಿಸಿದಲ್ಲಿ ಕ್ರಿಮಿನಲ್ ದೂರು ದಾಖಲಿಸಿ, ಸಾವಿರ ರೂ.ದಂಡ ಅಥವಾ 6ತಿಂಗಳು ಜೈಲುವಾಸ ಶಿಕ್ಷೆ ನೀಡಲಾಗುವುದು.
ಚಲನಚಿತ್ರಗಳ ಪೋಸ್ಟರ್ ಗಳನ್ನು ಅಂಟಿಸಲು ನಗರದ ಯಾವುದಾದರೊಂದು ಭಾಗದಲ್ಲಿ ಸ್ಥಳವನ್ನು ಗುರುತಿಸಿ ಅಲ್ಲಿ ಅಂಟಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.