'ನೋಟು ನಿಷೇಧ ಮಾಡಿದ ಮೋದಿಯಿಂದ 3 ಲಕ್ಷ ಕೋಟಿ ನಷ್ಟ'
ಮೈಸೂರು, ಜೂನ್ 11: ಪ್ರಧಾನಿ ಮೋದಿ ಘೋಷಿಸಿದ ನೋಟು ಅಮಾನ್ಯದ ನಿರ್ಧಾರದಿಂದ ದೇಶದ ಜಿಡಿಪಿ ಗಣನೀಯವಾಗಿ ಕುಸಿತ ಕಂಡಿದೆ. ಹಿಂದೆಂದು ಕಂಡರಿಯದ ಆರ್ಥಿಕ ಬಿಕ್ಕಟ್ಟು ಎದುರಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಕಾಳಪ್ಪ ಆರೋಪಿಸಿದರು.
ಇಲ್ಲಿನ ಜಲದರ್ಶಿನಿಯಲ್ಲಿ ಮಾತನಾಡಿದ ಅವರು, ಯುಪಿಎ ಸರಕಾರದ ಅವಧಿಯಲ್ಲಿ ಜಿಡಿಪಿ ದರ ಉತ್ತಮವಾಗಿತ್ತು. 6.7ರಷ್ಟಿದ್ದ ಜಿಡಿಪಿ ಬಿಜೆಪಿ ಸರಕಾರ ರಚನೆಯಾದ ಮೇಲೆ 8ಕ್ಕೆ ಏರಿಕೆಯಾಯಿತು ಎಂದು ಹೇಳುತ್ತಾರೆ. ಆದರೆ ಅವರು ಜಿಡಿಪಿಯನ್ನು ನಿರ್ಧರಿಸುವ ರೀತಿಯಲ್ಲಿ ನೋಡಿದರೆ ಯುಪಿಎ ಸರ್ಕಾರದ ಅವಧಿಯಲ್ಲಿ 8.5ರಷ್ಟಿದ್ದ ಜಿಡಿಪಿ ಅಧಿಕಾರ ಹಸ್ತಾಂತರಿಸುವ ಅವಧಿಯಲ್ಲಿ 10.9ಕ್ಕೆ ಏರಿಕೆಯಾಗಿತ್ತು ಎಂದರು.
ಜಿಡಿಪಿ ಕುಸಿತ, ವಿಪಕ್ಷಗಳಿಂದ ಕೇಂದ್ರ ಸರಕಾರಕ್ಕೆ ತರಾಟೆ
ನೋಟು ಅಮಾನ್ಯ ನಿರ್ಧಾರದ ಸಂದರ್ಭದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಜಿಡಿಪಿ 1ರಿಂದ 2ರಷ್ಟು ಕುಸಿತ ಕಾಣುತ್ತದೆ ಎಂದು ಹೇಳಿದ್ದರು. ಅವರ ಮಾತು ಇದೀಗ ನಿಜವಾಗಿದೆ. 1 ಅಂಶ ಜಿಡಿಪಿ 1.5 ಲಕ್ಷ ಕೋಟಿಗೆ ಸಮವಾಗಿದ್ದು, 2ರಷ್ಟು ಜಿಡಿಪಿ ಕುಸಿತದಿಂದ ಸುಮಾರು 3 ಲಕ್ಷ ಕೋಟಿ ನಷ್ಟವಾಗಿದೆ ಎಂದು ಹೇಳಿದರು.
2 ಕೋಟಿ ಉದ್ಯೋಗ ಸೃಷ್ಟಿ ಭರವಸೆ
ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೇರುವ ವೇಳೆ ಪ್ರತಿವರ್ಷ ಸುಮಾರು 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೀಗ ಇರುವ ಉದ್ಯೋಗಗಳನ್ನೇ ಇವರಿಂದ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂಬಾನಿ ಟಿಲಿಕಾಂ ಸೆಕ್ಟರ್ ನಲ್ಲಿ ಸುಮಾರು 40 ಸಾವಿರದಿಂದ 1 ಲಕ್ಷ ಉದ್ಯೋಗ ಕಡಿತಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ ಎಂದರು.
ಐಟಿ ವಲಯದಲ್ಲಿ ಒಂದೂವರೆ ಲಕ್ಷ ಉದ್ಯೋಗಿಗಳಿಗೆ ಸಂಕಷ್ಟ
ಐಟಿ ಸೆಕ್ಟರ್ ನಲ್ಲಿ ಒಂದೂವರೆ ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಸಣ್ಣ ಸಣ್ಣ ಉದ್ಯಮಗಳು ಮುಚ್ಚುತ್ತಿವೆ. ವ್ಯಾಪಾರ ವಹಿವಾಟು ಕುಸಿತ ಕಾಣುತ್ತಿದೆ. ವಿಶ್ವದ ಬೃಹತ್ ಆರ್ಥಿಕತೆ ಹೊಂದಿದ ರಾಷ್ಟ್ರಗಳಲ್ಲಿ 4ನೇ ಸ್ಥಾನದಲ್ಲಿದ್ದ ಭಾರತ ಇಂದು ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಪ್ರಧಾನಿ ಮೋದಿಗೆ ಯಾರು ಕೊಟ್ಟ ಸಲಹೆ
ಪ್ರಧಾನಿ ನರೇಂದ್ರ ಮೋದಿಯವರು ಯಾರ ಸಲಹೆ ಪಡೆದು ನೋಟು ಅಮಾನ್ಯದ ನಿರ್ಧಾರ ಮಾಡಿದರು ಎಂಬುದನ್ನು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು.
ಇದೀಗ ಬಿಜೆಪಿಯವರದು ಮಿಷನ್ ಫಿಫ್ಟಿ
ಇಷ್ಟು ದಿನ 150 ಸ್ಥಾನಗಳನ್ನು ಗೆಲ್ಲುತ್ತೇನೆ ಎಂದು ಹೇಳುತ್ತಿದ್ದ ಬಿ.ಎಸ್.ಯಡಿಯೂರಪ್ಪ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ ನೋಡಿ ತಮ್ಮ ಗುರಿ ಬದಲಿಸಿದ್ದಾರೆ. ಬಿಜೆಪಿ ಹೈಕಮಾಂಡ್ ವಾಸ್ತವಕ್ಕೆ ಹತ್ತಿರವಾದ ಗುರಿ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದ್ದರಿಂದ ಮಿಷನ್ 150 ಬದಲಿಗೆ ಮಿಷನ್ 50 ಗುರಿ ಇಟ್ಟುಕೊಂಡಿದ್ದಾರೆ ಎಂದು ಹೇಳಿದರು.