100 ಅಡಿ ಮಹದೇಶ್ವರ ಪ್ರತಿಮೆ ನಿರ್ಮಾಣ, ಆನ್ ಲೈನ್ ಸೇವೆ ಚಾಲನೆ ಶೀಘ್ರ
ಮೈಸೂರು, ಆಗಸ್ಟ್ 30: ಚಾಮರಾಜನಗರ ಜಿಲ್ಲೆಯ ಮಲೈ ಮಹದೇಶ್ವರಸ್ವಾಮಿ ಪ್ರಾಧಿಕಾರದ ದೀಪದ ಗಿರಿ ಒಡ್ಡಿನಲ್ಲಿ ಸುಮಾರು 100 ಅಡಿ ಎತ್ತರದ ಮಲೈ ಮಹದೇಶ್ವರ ಸ್ವಾಮಿ ಪ್ರತಿಮೆ ನಿರ್ಮಿಸಲು ತೀರ್ಮಾನಿಸಲಾಗಿದೆ.
ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಸಚಿವ ಹಾಗೂ ಮಲೈ ಮಹದೇಶ್ವರಸ್ವಾಮಿ ಪ್ರಾಧಿಕಾರದ ಉಪಾಧ್ಯಕ್ಷ ಎಚ್.ಎಸ್. ಮಹದೇವ ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.[ಶಾಲೆಯಲ್ಲೇ ಮಗಳಿಗೆ ಜನ್ಮವಿತ್ತ 5ನೇ ತರಗತಿ ಬಾಲಕಿ!]
43 ಎಕರೆ ಪ್ರದೇಶ: ಸಭೆಯಲ್ಲಿ ಮಾತನಾಡಿದ ಸಹಕಾರ ಸಚಿವರು, ಪ್ರತಿಮೆ ನಿರ್ಮಾಣಕ್ಕಾಗಿ 43 ಎಕರೆ ವಿಸ್ತೀರ್ಣದ ಪ್ರದೇಶ ಗುರುತಿಸಲಾಗಿದೆ. 20 ಎಕರೆ ಕಂದಾಯ ಇಲಾಖೆಯ ವ್ಯಾಪ್ತಿಯದಾಗಿದ್ದು, 10 ಎಕರೆ ಒತ್ತುವರಿಯಿದೆ. ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಉಳಿದ 13 ಎಕರೆಯಲ್ಲಿ ಇರುವವರಿಗೆ ಪರ್ಯಾಯವಾಗಿ ಜಮೀನು ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ಪ್ರತಿಮೆಯನ್ನು ಸಿಮೆಂಟ್ ಕಾಂಕ್ರೀಟ್ ಬಳಸಿ ನಿರ್ಮಿಸಲಾಗುವುದು. ಇದಕ್ಕೆ 21 ಕೋಟಿ ರು. ವೆಚ್ಚವಾಗಲಿದೆ. ಇದಕ್ಕೆ ಭಕ್ತಾಧಿಗಳಿಂದ ದೇಣಿಗೆ ಸಂಗ್ರಹಿಸಲಾಗುವುದು. ಪ್ರತಿಮೆ ನಿರ್ಮಾಣಕ್ಕಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಮೆ ನಿರ್ಮಿಸಿರುವವರಿಂದ ಆಸಕ್ತಿ ವ್ಯಕ್ತಪಡಿಸಲು ತಿಳಿಸಲಾಗುವುದು ಎಂದರು.
ಉದ್ಯಾನ, ನೀರಿನ ಕಾರಂಜಿ: ಪ್ರತಿಮೆ ನಿರ್ಮಾಣದ ಸ್ಥಳದಲ್ಲಿ ಉದ್ಯಾನವನ, ನೀರಿನ ಕಾರಂಜಿ, ಬಯಲು ರಂಗಮಂದಿರ ನಿರ್ಮಿಸಲು ಸಹ ಯೋಜಿಸಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಕಂಸಾಳೆ, ಮಂಟೇಸ್ವಾಮಿ, ಗುರುಭಜನೆ ಮುಂತಾದ ಜನಪದ ಕಲೆಗಳನ್ನು ಉತ್ತೇಜಿಸಿ ಪೋಷಿಸಿ ಬೆಳೆಸುವ ದೃಷ್ಟಿಯಿಂದ ಪ್ರಾಧಿಕಾರದ ವತಿಯಿಂದ 3 ಎಕರೆ ಜಮೀನನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡಲಾಗಿತ್ತು ಎಂದು ಹೇಳಿದರು.[ಬಂಡೀಪುರದಲ್ಲಿ ಹುಲಿ ಹತ್ಯೆ: ಒಬ್ಬನ ಬಂಧನ]
ಇಲಾಖೆಯವರು ಜನಪದ ವಿಶ್ವವಿದ್ಯಾನಿಲಯಕ್ಕೆ ಸ್ಥಳ ನೀಡಿದ್ದಾರೆ. ಆದರೆ ಇಲ್ಲಿ ಯಾವುದೇ ಕೆಲಸದ ಪ್ರಗತಿಯಾಗಿಲ್ಲ. ಪ್ರಾಧಿಕಾರವು ಈ ಸ್ಥಳವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಾಪಸ್ ಪಡೆದು, ಜಾನಪದ ವಿ.ವಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು, ಜನಪದ ಕಲೆ ಬೆಳೆಸುವ ಕೆಲಸ ಮಾಡಲಿದೆ ಎಂದರು.
50 ಕೋಟಿ ರು. ವೆಚ್ಚ: 50 ಕೋಟಿ ರು. ವೆಚ್ಚದಲ್ಲಿ ಪ್ರಾಧಿಕಾರದಿಂದ ಒಳ ಚರಂಡಿ ಕಾಮಗಾರಿ, ತಿರುಪತಿಯ ರೀತಿಯಲ್ಲಿ ಅಂತರಗಂಗೆ, ವಸತಿ ಸಮೂಹ ಹಾಗೂ ಪ್ರಾಧಿಕಾರದ ನೌಕರರಿಗೆ ವಸತಿಗೃಹ ನಿರ್ಮಾಣದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಸೆಪ್ಟೆಂಬರ್ ನಲ್ಲಿ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.[ಇರುವುದೊಂದೇ ಬೋರ್ ವೆಲ್: ಬಿಂದಿಗೆ ನೀರಿಗೂ ಜಗಳ, ಹೊಡೆದಾಟ]
ಮಲೈ ಮಹಾದೇಶ್ವರ ಪ್ರಾಧಿಕಾರದ ವ್ಯಾಪ್ತಿಯಲ್ಲಿ 176 ಎಕರೆ ಭೂಮಿಯಿದ್ದು, ಮುಂದಿನ ದಿನಗಳಲ್ಲಿ ಪ್ರಾಧಿಕಾರದ ಅಭಿವೃದ್ಧಿ ಹಾಗೂ ಭಕ್ತಾಧಿಗಳಿಗೆ ಮೂಲವ್ಯವಸ್ಥೆ ಒದಗಿಸಲು ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಿಕೊಳ್ಳಲಾಗಿದೆ. ಅದರ ಅನ್ವಯ ಪ್ರಾಧಿಕಾರಕ್ಕೆ ಬರುವ ಹಣದಿಂದ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
56 ಕೋಟಿ ಆದಾಯ: ಮಲೈ ಮಹದೇಶ್ವರ ದೇವಸ್ಥಾನಕ್ಕೆ ವರ್ಷದಲ್ಲಿ 15 ರಿಂದ 20 ಲಕ್ಷ ಭಕ್ತಾಧಿಗಳು ಭೇಟಿ ನೀಡುತ್ತಾರೆ. ಪ್ರಾಧಿಕಾರದ ರಚನೆ ಮೊದಲು ದೇವಸ್ಥಾನದ ಆದಾಯ 42 ಕೋಟಿ ಇತ್ತು. ಪ್ರಾಧಿಕಾರದ ರಚನೆಯ ನಂತರ 2015-16 ನೇ ಸಾಲಿನಲ್ಲಿ 56 ಕೋಟಿ ಆಯಿತು. ಪ್ರಸಕ್ತ ಸಾಲಿನಲ್ಲಿ ಇನ್ನೂ ಹೆಚ್ಚಳವಾಗಲಿದೆ ಎಂದು ಹೇಳಿದರು.
ಚಾಮರಾಜನಗರ ಹೆಚ್ಚುವರಿ ಜಿಲ್ಲಾಧಿಕಾರಿ ಭಾರತಿ ಮಾತನಾಡಿ, ಮುಂದಿನ ತಿಂಗಳು ದೇವಸ್ಥಾನದ ಆನ್ ಲೈನ್ ಸೇವೆಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ದೂರದಿಂದ ಆಗಮಿಸುವ ಭಕ್ತರಿಗೆ ಅನುಕೂಲವಾಗಲಿದೆ. ದೇವಸ್ಥಾನ ಹಾಗೂ ಸುತ್ತಮುತ್ತಲು 13 ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇವುಗಳ ಮೂಲಕ ಒಂದು ಕಿಲೋಮೀಟರ್ ವ್ಯಾಪ್ತಿಯ ಸನ್ನಿವೇಶಗಳನ್ನು ಸೆರೆಹಿಡಿಯಬಹುದು ಎಂದು ತಿಳಿಸಿದರು.[ಗುಂಡ್ಲುಪೇಟೆಯಲ್ಲಿ ಎಗ್ಗಿಲ್ಲದೆ ಸಾಗಿದ ಕೇರಳ ಲಾಟರಿ ದಂಧೆ]
ಸಂಸದ ಆರ್.ಧ್ರುವನಾರಾಯಣ್, ವಿಧಾನಪರಿಷತ್ ಸದಸ್ಯ ಕೆ.ಟಿ ಶ್ರೀಕಂಠೇಗೌಡ, ಆರ್.ಧರ್ಮಸೇನ, ಶಾಸಕ ನರೇಂದ್ರ. ಸಾಲೂರು ಮಠದ ಸ್ವಾಮೀಜಿ, ಚಾಮರಾಜನಗರ ಜಿಲ್ಲಾಧಿಕಾರಿ ಡಿ.ರಾಮು ಸೇರಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.