ಕಣ್ಮನಸೆಳೆದ ಮೈಸೂರಿನ ಬನ್ನೂರು ಬಂಡೀ ಉತ್ಸವ
ಮೈಸೂರು, ಫೆಬ್ರವರಿ,23: ಹೇಮಾದ್ರಂಭ ದೇವಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಬನ್ನೂರಿನಲ್ಲಿ ಸೋಮವಾರ ನಡೆದ ರೋಮಾಂಚನಕಾರಿ 'ಬಂಡಿ ಉತ್ಸವ' ನೆರೆದಿದ್ದವರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಹುಣ್ಣಿಮೆ ದಿನದಂದು ರತ್ನಮಹಲ್ ಮುಂಭಾಗದಲ್ಲಿ ನಡೆದ ಈ ಬಂಡಿ ಉತ್ಸವದಲ್ಲಿ ದೇವಿಗೆ ವಿಶೇಷ ಪೂಜೆ-ಪುನಸ್ಕಾರಗಳು ವಿಜೃಂಭಣೆಯಿಂದ ಜರುಗಿದವು. ಈ ವೈಭವದಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ಬಂದ ಸಾವಿರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.[10ನೇ ಮಹಾಕುಂಭಮೇಳದಿಂದ ಕಳೆಗಟ್ಟಿದ ಟಿ. ನರಸೀಪುರ]
ರಂಗೋಲಿಯಿಂದ ಸಿಂಗಾರಗೊಂಡಿದ್ದ ರಸ್ತೆಯಲ್ಲಿ ದೇವಿಯ ಮೆರವಣಿಗೆ ನಡೆಯಿತು. ಈ ಸಂದರ್ಭ ಮಾರ್ಗದುದ್ದಕ್ಕೂ ಭಕ್ತರು ಎಳನೀರನ್ನು ಸಮರ್ಪಿಸಿ ದೇವಿಗೆ ಕಾಸು ಹಾಗೂ ಹೂವಿನ ಸುರಿಳೆಗೈದರು.
ದೇವಿ ತೋಪಿನಲ್ಲಿ ದೇವಿಯು ಬರುವ ಮುನ್ನವೇ ಕಾವೇರಿ ಮಡುವಿನ ಸಮೀಪದಲ್ಲಿ ಕಾದಿದ್ದ ಸಾವಿರಾರು ಜನರು ದೇವಿಯ ದರ್ಶನವಾಗುತ್ತಿದ್ದಂತೆ ದೇವಿಗೆ ಜೈಕಾರ ಹಾಕಿದರು. ಈ ಸಂದರ್ಭದಲ್ಲಿ ನೈವೇದ್ಯಕ್ಕಾಗಿ ಅನ್ನವನ್ನು ಸಿದ್ದಪಡಿಸಲು ಅಗ್ಗಿಷ್ಟಿಕೆಯನ್ನು ಸಿದ್ದಪಡಿಸಿಕೊಂಡರು. ನಂತರ ಕಾವೇರಿ ಮಡುವಿನಲ್ಲಿ ದೇವಿಗೆ ಅವಭೃತ ಸ್ನಾನವಾಯಿತು.[ಅಂದದೂರು ಮೈಸೂರಿಗೆ ಸ್ವಚ್ಛನಗರಿ ಪಟ್ಟ ದಕ್ಕಿದ್ದು ಹೇಗೆ?]
ದೇವಿ ತೋಪಿನಲ್ಲಿ ದೇವಿಗೆ ಅವಭೃತ ಸ್ನಾನವಾದ ನಂತರ ಮಹಿಳೆಯರು ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು. ಅವಭೃತ ಸ್ನಾನವಾಗುತ್ತಿದ್ದಂತೆ ಅನ್ನಸಂತರ್ಪಣೆಯ ಕಾರ್ಯವು ನಡೆಯಿತು.[ಭಾರತದ ಅತ್ಯಂತ ಸ್ವಚ್ಛ ನಗರ ಪಟ್ಟಿಯಲ್ಲಿ ಮೈಸೂರು ನಂ.1]
ಸಂಜೆ ದೇವಿ ತೋಪಿನಿಂದ ದೇವಿಯು ಬಂದ ನಂತರ ರತ್ನಮಹಲ್ ಬಳಿಯಿರುವ ಮಂಟಪದಲ್ಲಿ ಪ್ರತಿಷ್ಟಾಪಿಸಲಾಯಿತು. ಭಕ್ತರು ದೇವಿಯ ದರ್ಶನ ಪಡೆದ ನಂತರ ವಿಜೃಂಭಣೆಯ ಉತ್ಸವದೊಂದಿಗೆ ದೇವಿಯನ್ನು ಸ್ವಸ್ಥಾನಕ್ಕೆ ಸೇರಿಸಲಾಯಿತು.