ಮುಂಬೈ ಮೇಯರ್ ಗಾದಿಗೆ ಬಿಜೆಪಿ-ಶಿವಸೇನೆ ಮಧ್ಯೆ ಬಿಗ್ ಫೈಟ್
ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಮೇಯರ್ ಗಾದಿಗೆ ಬಿಜೆಪಿ ಮತ್ತು ಶಿವಸೇನೆ ಮಧ್ಯೆ ಬಿಗ್ ಫೈಟ್ ಆರಂಭವಾಗಿದೆ. ಎರಡೂ ಪಕ್ಷಗಳಿಗೆ ಬಹುಮತಕ್ಕೆ ಬೇಕಾದ ಸ್ಥಾನಗಳ ಕೊರತೆ ಇದ್ದು ರಾಜಕೀಯ ಲೆಕ್ಕಾಚಾರಗಳು ಗರಿಗೆದರಿವೆ.
ಮುಂಬೈ, ಫೆಬ್ರವರಿ 24: ದೇಶದ ಶ್ರೀಮಂತ ಮಹಾನಗರ ಪಾಲಿಗೆ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಮೇಯರ್ ಗಾದಿಗೆ ಬಿಜೆಪಿ ಮತ್ತು ಶಿವಸೇನೆ ಮಧ್ಯೆ ಬಿಗ್ ಫೈಟ್ ಆರಂಭವಾಗಿದೆ. ಎರಡೂ ಪಕ್ಷಗಳಿಗೆ ಬಹುಮತಕ್ಕೆ ಬೇಕಾದಷ್ಟು ಸೀಟುಗಳನ್ನು ಗೆಲ್ಲಲು ಸಾಧ್ಯವಾಗದ ಹಿನ್ನಲೆಯಲ್ಲಿ ರಾಜಕೀಯ ಲೆಕ್ಕಾಚಾರಗಳು ಗರಿಗೆದರಿದ್ದು ಉಳಿದವರಿಗೆ ಗಾಳ ಹಾಕುವ ಕೆಲಸಗಳು ಚಾಲ್ತಿಗೆ ಬಂದಿವೆ.
227 ಸದಸ್ಯ ಬಲದ ಬಿಎಂಸಿಯಲ್ಲಿ ಸರಳ ಬಹುಮತದಿಂದ ಆಳ್ವಿಕೆ ಮಾಡಲು 114 ಸೀಟುಗಳು ಬೇಕು. ಆದರೆ ಕಳೆದ 20 ವರ್ಷಗಳಿಂದ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಮುಂಬೈನಲ್ಲಿ ಅಧಿಪತ್ಯ ಸ್ಥಾಪಿಸಿದ್ದ ಶಿವಸೇನೆಗೆ ಗೆಲ್ಲಲು ಈ ಚುನಾಚಣೆಯಲ್ಲಿ ಸಾಧ್ಯವಾಗಿದ್ದು 84 ಸೀಟುಗಳನ್ನು ಮಾತ್ರ. ಹೀಗಾಗಿ ಬಹುಮತಕ್ಕೆ ಇನ್ನೂ 30 ಸೀಟುಗಳ ಕೊರತೆ ಇದೆ. ಇನ್ನೊಂದೆಡೆ 82 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಬಿಜೆಪಿಯೂ ಮೇಯರ್ ಗಾದಿಗೆ ಪ್ರತಿಸ್ಫರ್ಧಿಯಾಗಿ ಹುಟ್ಟಿಕೊಂಡಿದೆ.[ಬಿಎಂಸಿಯಲ್ಲಿ ದೋಸ್ತಿಗಳ ತಿಕ್ಕಾಟ, ಪುಣೆ ಬಿಜೆಪಿ ವಶಕ್ಕೆ]
ಸರಳ ಬಹುಮತ ಕಷ್ಟ
ಬಿಎಂಸಿಯಲ್ಲಿ ಕಾಂಗ್ರೆಸ್ 31, ಎನ್.ಸಿ.ಪಿ 9 ಹಾಗೂ ಎಂಎನ್ಎಸ್ 7 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಹೀಗಿರುವಾಗ ಬಹುಮತಕ್ಕೆ ಬೇಕಾದಷ್ಟು ಸ್ಥಾನಗಳನ್ನು ಹೊಂದಿಸಲು ಬಿಜೆಪಿ ಅಥವಾ ಶಿವಸೇನೆ ಕಾಂಗ್ರೆಸ್ ಜತೆ ಕೈಜೋಡಿಸಬೇಕಾಗುತ್ತದೆ. ಆದರೆ ಕಾಂಗ್ರೆಸ್ ಜತೆ ಇದು ಸಾಧ್ಯವಿಲ್ಲದ ಮಾತು.[ಪೊಲೀಸರನ್ನು ಅಣಕಿಸಲು ಹೋಗಿ ತಿರುಗೇಟು ತಿಂದ ಲೇಖಕಿ]
ಶಿವಸೇನೆಗೆ ಸಣ್ಣ ಅವಕಾಶ
ಶಿವಸೇನೆ ಮಾತ್ರ ಬಿಎಂಸಿಯ ಮುಂದಿನ ಮೇಯರ್ ನಮ್ಮ ಪಕ್ಷದವರೇ ಎಂದು ಹೇಳಿದ್ದರೆ, ಬಿಜೆಪಿ ಮೇಯರ್ ಹುದ್ದೆಗೇರುವ ಕನಸು ಕಾಣುತ್ತಿದೆ.
ಒಂದೊಮ್ಮೆ ಬಿಜೆಪಿ, ಕಾಂಗ್ರೆಸ್ ಮತ್ತು ಶಿವಸೇನೆಯನ್ನು ಹೊರತು ಪಡಿಸಿ ಉಳಿದ ಎಲ್ಲರನ್ನೂ ಒಟ್ಟು ಗೂಡಿಸಿದರೂ 113 ಸಂಖ್ಯೆಯನ್ನಷ್ಟೆ ತಲುಪಲಿದೆ. ಇದರಿಂದಲೂ ಬಿಎಂಸಿಯಲ್ಲಿ ಆಳ್ವಿಕೆ ಮಾಡಲು ಸಾಧ್ಯವಿಲ್ಲ. ಆದರೆ ಶಿವಸೇನೆಗೆ ಈ ಅವಕಾಶ ಇದೆ. ಮೇಯರ್ ಹುದ್ದೆ ಗೆಲ್ಲಲು ಎನ್.ಸಿ.ಪಿ, ಎಂಎನ್ಎಸ್ ಹಾಗೂ ಇತರರ ಬೆಂಬಲವನ್ನು ಅದು ಪಡೆಯಬೇಕಾಗಿದೆ.
ಬಿಜೆಪಿ-ಶಿವಸೇನೆ ಹೊಂದಾಣಿಕೆ?
ಇದನ್ನು ಹೊರತುಪಡಿಸಿದರೆ ಬಿಜೆಪಿ ಮತ್ತು ಶಿವಸೇನೆ ಇಬ್ಬರೂ ಮೈತ್ರಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈಗಾಗಲೇ ಈ ಕುರಿತು ಪ್ರತಿಕ್ರಿಯೆ ಬಿಜೆಪಿ ನಾಯಕ ಚಂದ್ರಕಾಂತ್ ಪಾಟೀಲ್, ಬಿಜೆಪಿ ಮತ್ತು ಶಿವಸೇನೆ ತಮ್ಮ ನಡುವಿನ ಭಿನ್ನಾಭಿಪ್ರಾಯ ಬದಿಗೊತ್ತಿ ಮತ್ತೆ ಒಂದಾಗಲು ಇದು ಸೂಕ್ತ ಸಮಯ ಎಂದು ಹೇಳಿದ್ದಾರೆ.
ನಾಯಕರ ನಡೆ ಏನು?
ಆದರೆ ಈ ಕುರಿತು ಬಿಜೆಪಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಯಾವುದೇ ಹೇಳಿಕೆ ನೀಡಿಲ್ಲ. ಮೂಲಗಳ ಪ್ರಕಾರ ಎರಡೂ ಪಕ್ಷಗಳ ನಡುವೆ ಮೈತ್ರಿ ನಡೆದರೂ, ಕನಿಷ್ಠ ಷರತ್ತುಗಳ ಮೂಲಕ ಮೈತ್ರಿ ನಡೆಯುವ ಸಾಧ್ಯತೆ ಇದೆ.
ಶಿವಸೇನೆಗೆ ಮೇಯರ್ ಪಟ್ಟ
ಮೇಯರ್ ಹುದ್ದೆಯನ್ನು ಶಿವಸೇನೆಗೆ ಬಿಟ್ಟುಕೊಟ್ಟು, ಉಳಿದ ಸ್ಥಾಯಿ ಸಮಿತಿ ಅಧ್ಯಕ್ಷ ಹುದ್ದೆಗಳನ್ನು ಬಿಜೆಪಿ ತನ್ನ ಕೈಯಲ್ಲೇ ಇಟ್ಟುಕೊಳ್ಳಬಹುದು. ಇನ್ನು ಬಿಜೆಪಿ, ಶಿವಸೇನೆ ಬಿಟ್ಟು ಉಳಿದ ಯಾವ ಪಕ್ಷಗಳೂ ಬಿಎಂಸಿ ಆಳ್ವಿಕೆ ಮಾಡುವ ಯಾವ ಸಾಧ್ಯತೆಗಳೂ ಇಲ್ಲ. ಹೀಗಾಗಿ ಬಿಜೆಪಿ ಮತ್ತು ಶಿವಸೇನೆ ನಡೆ ಕುತೂಹಲ ಹುಟ್ಟಿಸಿದೆ. ರಾಜ್ಯದಲ್ಲಿ ಪರಸ್ಪರ ಕೆಸರೆರೆಚಾಟ ನಡೆಸುವ ಉಭಯ ಪಕ್ಷಗಳು ಬಿಎಂಸಿಯಲ್ಲಿ ಏನು ಮಾಡಲಿವೆ ಕಾದು ನೋಡಬೇಕಿದೆ.