ಚಕ್ಕುಲಿ ಕದ್ದ ಚಿಣ್ಣರಿಗೆ ಚಪ್ಪಲಿ ಹಾರದ ಅಮಾನವೀಯ ಶಿಕ್ಷೆ ತರವೇ?
ಅಂಗಡಿಯೊಂದರಲ್ಲಿ ಚಕ್ಕುಲಿ ಕದ್ದ ಎಂಟು ಮತ್ತು ಒಂಬತ್ತು ವರ್ಷದ ಇಬ್ಬರು ಮಕ್ಕಳ ಕೇಶ ಮುಂಡನ ಮಾಡಿಸಿ, ಅವರಿಗೆ ಚಪ್ಪಲಿಹಾರ ಹಾಕಿ ಮೆರವಣಿಗೆ ಮಾಡಿದ ಅಮಾನವೀಯ ಘಟನೆ ಮುಂಬೈಯ ಉಲ್ಹಾಸ್ ನಗರ ಎಂಬಲ್ಲಿ ನಡೆದಿದೆ.
ಮುಂಬೈ, ಮೇ 22: ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ನಿರ್ಧರಿಸುವ ವಿವೇಚನಾ ಶಕ್ತಿ ಇಲ್ಲದ ಮಕ್ಕಳು ಕೆಲವೊಮ್ಮೆ ತಪ್ಪು ಮಾಡಿಯೇ ಮಾಡುತ್ತಾರೆ. ಆದರೆ ತಪ್ಪು ಮಾಡಿದ ಮಕ್ಕಳಿಗೆ ಮಾತಿನ ಪೆಟ್ಟುಕೊಡುವ ಬದಲು, ಅವಮಾನವಾಗುವಂಥ ಅಮಾನವೀಯ ಶಿಕ್ಷೆ ನೀಡುವುದು ಸರಿಯೇ? ಮುಂಬೈಯಲ್ಲಿ ನಡೆದ ಘಟನೆಯೊಂದು ಈ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಅಂಗಡಿಯೊಂದರಲ್ಲಿ ಚಕ್ಕುಲಿ ಕದ್ದ ಎಂಟು ಮತ್ತು ಒಂಬತ್ತು ವರ್ಷದ ಇಬ್ಬರು ಮಕ್ಕಳ ಕೇಶ ಮುಂಡನ ಮಾಡಿಸಿ, ಅವರಿಗೆ ಚಪ್ಪಲಿಹಾರ ಹಾಕಿ ಮೆರವಣಿಗೆ ಮಾಡಿದ ಅಮಾನವೀಯ ಘಟನೆ ಮುಂಬೈಯ ಉಲ್ಹಾಸ್ ನಗರ ಎಂಬಲ್ಲಿ ನಡೆದಿದೆ. ಆಟವಾಡುತ್ತಿದ್ದ ಇಬ್ಬರು ಮಕ್ಕಳಿಗೆ ಹತ್ತಿರದ ಅಂಗಡಿಯಲ್ಲಿ ಕಂಡ ಚಕ್ಕುಲಿ ಬಾಯಲ್ಲಿ ನೀರೂರಿಸಿದೆ. ಕಿಸೆಯಲ್ಲಿ ದುಡ್ಡಿಲ್ಲ! ಅಂಗಡಿಯಲ್ಲಿ ಯಾರೂ ಇಲ್ಲ ಎಂದುಕೊಂಡು ಚಕ್ಕುಲಿ ಕದ್ದು ಓಡಿದ ಮಕ್ಕಳನ್ನು ಅಂಗಡಿಯ ಮಾಲೀಕ ಮೆಹ್ಮೂದ್ ಪಠಾಣ್ (62) ನೋಡಿಬಿಟ್ಟಿದ್ದ. ತಕ್ಷಣವೇ ಘಟನೆಯನ್ನು ತಮ್ಮ ಮಕ್ಕಳಾದ ಸಲಿಮ್ ಮತ್ತು ಇರ್ಫಾನ್ ಗೆ ತಿಳಿಸ ಮಕ್ಕಳನ್ನು ಹಿಡಿದು ತಂದು ಶಿಕ್ಷೆ ನೀಡುವಂತೆ ಹೇಳಿದ್ದಾರೆ.[ಅಪ್ಪಾ, ನನ್ನ ಬದುಕಿಸಿಕೋ ಎಂದು ಆ ಪುಟಾಣಿ ಗೋಗರೆದರೂ...]
ಹುಡುಗಾಟಿಕೆಯಲ್ಲಿ ಕದ್ದ ಹತ್ತು ರೂಪಾಯಿಯ ಚಕ್ಕುಲಿಗೆ ಮಕ್ಕಳು ತೆತ್ತ ಅವಮಾನದ ಬೆಲೆ ಅಷ್ಟಿಷ್ಟಲ್ಲ! ಮಾಲೀಕನ ಮಕ್ಕಳು, ಈ ಇಬ್ಬರು ಮಕ್ಕಳ ತಲೆಯನ್ನು ಅರ್ಧ ಮುಂಡನ ಮಾಡಿ, ಅವರಿಗೆ ಚಪ್ಪಲಿ ಹಾರ ಹಾಕಿ, ಅವರಿಬ್ಬರನ್ನೂ ಚೆನ್ನಾಗಿ ಥಳಿಸಿದ್ದಲ್ಲದೆ, ಇವೆಲ್ಲ ಸಾಲದೆಂಬಂತೆ ಈ ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿದ್ದಾರೆ.
ಅವಮಾನ ತಾಳಲಾರದೆ ಅಳುತ್ತಿದ್ದ ಈ ಮಕ್ಕಳಲ್ಲಿ ಒಂದು ಮಗುವಿನ ತಾಯಿ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಮೆಹ್ಮೂದ್ ಪಠಾಣ್ ಮತ್ತವರ ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ.[ಮುಂಬೈ ಆಟೋಚಾಲಕನ ಕರುಳು ಕಿವುಚುವ ಕತೆಯಿದು!]
ಮಕ್ಕಳು ಮಾಡಿದ್ದು ಖಂಡಿತ ತಪ್ಪೇ, ಕಳ್ಳತನ ಅಪರಾಧ. ಆದರೆ ಮಕ್ಕಳಿಗೆ ಯಾವುದು ತಪ್ಪು, ಯಾವುದು ಸರಿ ಎಂಬುದೆಲ್ಲಿ ಗೊತ್ತಾಗುತ್ತದೆ? ಅದಕ್ಕಾಗಿ ಬೈದು, ಕಿವಿಹಿಂಡಿ ಬುದ್ಧಿ ಹೇಳಬಹುದಿತ್ತು. ಅಥವಾ ನನ್ನ ಬಳಿ ಹೇಳಿದ್ದರೆ ನಾನೇ ಅವರಿಗೆ ಸೂಕ್ತ ಶಿಕ್ಷೆ ನೀಡುತ್ತಿದ್ದೆ. ಅದನ್ನು ಬಿಟ್ಟು, ಚಿಕ್ಕ ಮಕ್ಕಳನ್ನು ಈ ಪರಿ ಅಮಾನವೀಯವಾಗಿ ನಡೆಸಿಕೊಳ್ಳೋದು ಸರೀನಾ ಎಂಬುದು ಆ ಮಕ್ಕಳಲ್ಲಿ ಒಬ್ಬರ ತಾಯಿಯ ಪ್ರಶ್ನೆ.
ಪಠಾಣ್ ಮತ್ತವರ ಮಕ್ಕಳ ವಿರುದ್ಧ ಭಾರತೀಯ ದಂಡ ಸಂಹಿತೆ 355 (ದೌರ್ಜನ್ಯ) 323 (ಹಿಂಸೆ) 500 (ಅವಮಾನ) ಮತ್ತು ಪೋಕ್ಸೋ(ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣಾ ಕಾಯಿದೆ) ಕಾಯಿದೆಯಡಿಯಲ್ಲಿ ದೂರು ದಾಖಲಿಸಲಾಗಿದೆ.
{promotion-urls}