ಮಂಗಳೂರು: ಅಲೋಶಿಯಸ್ ಕಾಲೇಜು ರಸ್ತೆ ಮರುನಾಮಕರಣಕ್ಕೆ ಭಾರೀ ವಿರೋಧ
ಮಂಗಳೂರು, ಜೂನ್ 30: ಮಂಗಳೂರು ನಗರದ ಲೈಟ್ ಹೌಸ್ ರಸ್ತೆಗೆ ಅಲೋಶಿಯಸ್ ಕಾಲೇಜು ರಸ್ತೆ ಎಂಬುದಾಗಿ ನಾಮಕರಣ ಮಾಡಬೇಕು ಎಂದು ಆಗ್ರಹಿಸಿ ಜೂಲೈ 2 ರಂದು ಬೃಹತ್ ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಲಾಗಿದೆ.
ಕಾಲೇಜು ಪರ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಪ್ರಿನ್ಸಿಪಾಲರು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ನಗರ ಪಾಲಿಕೆ ಅಸ್ತಿತ್ವಕ್ಕೆ ಬರುವ ಮುನ್ನವೇ ಅಂದರೆ 40 ವರ್ಷಗಳ ಹಿಂದೆಯೇ ಈ ನಾಮಕರಣ ಮಾಡಲಾಗಿತ್ತು. 100 ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಸಂಸ್ಥೆಯನ್ನು ಹಾದು ಹೋಗುವ ರಸ್ತೆಗೆ ಅದೇ ಸಂಸ್ಥೆಯ ಹೆಸರಿಡುವುದು ಸಮಂಜಸವೇ ಆಗಿದೆ ಎಂದು ಪ್ರಿನ್ಸಿಪಾಲರು ಹೇಳಿದ್ದಾರೆ.
ಆದರೆ, ಇದರ ನಡುವೆ ರಸ್ತೆಗೆ ಸುಂದರ ರಾಮ ಶೆಟ್ಟಿ ರಸ್ತೆ ಎಂದು ನಾಮಕರಣ ಮಾಡಲು ಜುಲೈ 2 ರಂದು ಬೆಳಗ್ಗೆ 10 ಗಂಟೆಗೆ ವಿಜಯ ಬ್ಯಾಂಕ್ ನ ಪ್ರಾದೇಶಿಕ ಕಚೇರಿ ಎದುರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಅಧ್ಯಕ್ಷ ಮುಲ್ಕಿ ಕರುಣಾಕರ ತಿಳಿಸಿದ್ದಾರೆ.
'ಒನ್ಇಂಡಿಯಾ' ಕನ್ನಡ ಜೊತೆಗೆ ಮಾತನಾಡಿದ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಮೋಹನ್, "ವಿಜಯ ಬ್ಯಾಂಕ್ ನೌಕರರ ಸಂಘಟನೆ ಈ ರಸ್ತೆಗೆ ಮುಲ್ಕಿ ಸುಂದರರಾಮ್ ಶೆಟ್ಟಿ ರಸ್ತೆ ಎಂಬುದಾಗಿ ನಾಮಕರಣ ಮಾಡುವ ನಿರ್ಧಾರದಿಂದ ಹಿಂದೆ ಸರಿಯದೇ ಇರುವುದು ಬೇಸರದ ಸಂಗತಿ. ಸುಂದರರಾಮ್ ಶೆಟ್ಟಿ ಅವರ ವ್ಯಕ್ತಿತ್ವ ಅವರು ಬ್ಯಾಂಕ್ ರಾಷ್ಟ್ರೀಕರಣಗೊಂಡ ಬಳಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾಡಿದ ಸಾಧನೆಯ ಬಗ್ಗೆ ಯಾವುದೇ ಆಕ್ಷೇಪವಿಲ್ಲ," ಎಂದರು.