'ಐಎನ್ಎಸ್ ಕೋಲ್ಕತ್ತಾ ಜೊತೆ ಮೋದಿ' ಚಿತ್ರಗಳು
ಮುಂಬೈ, ಆ.16: 'ಬಲಿಷ್ಠ ರಕ್ಷಣಾ ವ್ಯವಸ್ಥೆ ಇದ್ದರೆ ಯಾವತ್ತೂ ಯುದ್ಧಗಳೇ ನಡೆಯುವುದಿಲ್ಲ. ರಕ್ಷಣಾ ಸಿಬ್ಬಂದಿಗೆ ಯಾವುದೇ ರೀತಿಯ ಸಾಧನ, ಸಲಕರಣೆಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಐಎನ್ಎಸ್ ಕೋಲ್ಕತ್ತ ದೇಶಕ್ಕೆ ಅರ್ಪಿಸಿದ ನಂತರ ಹೇಳಿದರು.
ಈ ಬೃಹತ್ ಕ್ಷಿಪಣಿ ವಿಧ್ವಂಸಕ ಐಎನ್ಎಸ್ ಕೋಲ್ಕತಾ ಸಮರ ನೌಕೆ ಬಗ್ಗೆ ಮೋದಿ ಅವರಿಗೆ ಹೆಮ್ಮೆ ಮೂಡಲು ಇದು ಸ್ವದೇಶಿ ನಿರ್ಮಿತ ಎಂಬುದೇ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ರಕ್ಷಣಾ ಸಚಿವ ಅರುಣ್ ಜೈಟ್ಲಿ, ಸಾರಿಗೆ ಸಚಿವ ನಿತಿನ್ಗಡ್ಕರಿ ಮತ್ತಿತರ ಅಧಿಕಾರಿಗಳೊಂದಿಗೆ ಉಪಸ್ಥಿತರಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಹಾಗೂ ಇತರರು ಆತ್ಮೀಯ ಸ್ವಾಗತ ನೀಡಿ ಬರಮಾಡಿಕೊಂಡರು. [ಕೆಂಪುಕೋಟೆ ಮೇಲೆ ಮೋದಿ ಹೇಳಿದ್ದೇನು?]
ಮುಂಬೈನ ಕಡಲ ತೀರದ ನೌಕಾ ನೆಲೆಯಲ್ಲಿ ಭಾರತೀಯ ನೌಕಾಪಡೆಗೆ ಸಮರ್ಪಣೆಗೊಂಡಿರುವ ಸಮರ ನೌಕೆ ಜೊತೆ ಮೋದಿ ಹಾಗೂ ಇತರೆ ಗಣ್ಯರಿರುವ ಚಿತ್ರ ಸರಣಿ ನಿಮ್ಮ ಮುಂದಿದೆ...
ಸಮರ ಸಾರುವ ಶಕ್ತಿ ಯಾವ ರಾಷ್ಟ್ರಕ್ಕೂ ಇಲ್ಲ
ನಮ್ಮ ಭಾರತದ ವಿರುದ್ಧ ಸಮರ ಸಾರುವ ಶಕ್ತಿ ಯಾವ ರಾಷ್ಟ್ರಕ್ಕೂ ಇಲ್ಲ. ಐಎನ್ಎಸ್ ಕೋಲ್ಕತಾ ಕ್ಷಿಪಣಿ ವಿಧ್ವಂಸಕ ಸಮರ ನೌಕೆ ನಮ್ಮ ರಕ್ಷಣಾ ಸಾಮರ್ಥ್ಯವನ್ನು ಸಾಬೀತುಗೊಳಿಸಿದೆ. ಹಾಗಾಗಿ ಭಾರತವನ್ನು ಎದುರಿಸುವ ಶಕ್ತಿ ಯಾವ ರಾಷ್ಟ್ರಗಳಿಗೂ ಇಲ್ಲ ಎಂದು ಹೇಳಿದ ನರೇಂದ್ರ ಮೋದಿ, ನೌಕಾ ಪಡೆಯ ಸಿಬ್ಬಂದಿಯ ಸೇವೆಯನ್ನು ಪ್ರಶಂಸಿಸಿದರು.
ದೇಶದ ಅತಿದೊಡ್ಡ ಸಮರ ನೌಕೆ ಐಎನ್ಎಸ್ ಕೋಲ್ಕತ್ತಾ
6800 ಟನ್ ತೂಕದ ಐಎನ್ಎಸ್ ಕೋಲ್ಕತಾ ಕ್ಷಿಪಣಿ ವಿಧ್ವಂಸಕ ಸಮರ ನೌಕೆ ಅತ್ಯಂತ ದೊಡ್ಡದು. ಕ್ರಮವಾಗಿ ಐಎನ್ಎಸ್ ಕೊಚ್ಚಿನ್, ಐಎನ್ಎಸ್ ಚೆನ್ನೈ ನಂತರ ಇದೀಗ ಐಎನ್ಎಸ್ ಕೋಲ್ಕತಾ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿದೆ.
ನಿಧಾನಗತಿ ನಿರ್ಮಾಣದ ಬಗ್ಗೆ ಆಕ್ಷೇಪವೂ ಇದೆ
ಐಎನ್ಎಸ್ ಕೋಲ್ಕತ ಕ್ಷಿಪಣಿ ವಿಧ್ವಂಸಕದ ನಿರ್ಮಾಣ ಕಾರ್ಯ ಆರಂಭವಾಗಿದ್ದು, 2003ರಲ್ಲಿ. ಭಾರೀ ನಿಧಾನಗತಿಯಲ್ಲಿ ಕೆಲಸ ನಡೆದು 11 ವರ್ಷಗಳ ನಂತರ ನೌಕೆ ಕಡಲಿಗಿಳಿದಿದೆ.
ಐಎನ್ ಎಸ್ ಕೋಲ್ಕತ್ತಾ ನಿರ್ಮಾಣ
ನೌಕಾ ವಿನ್ಯಾಸ ಸಂಸ್ಥೆ ವಿನ್ಯಾಸಗೊಳಿಸಿದ್ದ ಈ ಸಮರ ನೌಕೆಯನ್ನು ನಿರ್ಮಿಸಿದ್ದು, ಮುಂಬೈನ ಮಜ್ಗಾಂವ್ ಡಾಕ್ಯಾರ್ಡ್ ಲಿಮಿಟೆಡ್ ಕಂಪೆನಿ ಹಡಗನ್ನು ನಿರ್ಮಿಸಿದೆ.
ಜಲಸೇನಾ ಸಿಬ್ಬಂದಿಗಳು
ಪ್ರಧಾನಿ ಮೋದಿ ಅವರ ಜೊತೆಗೆ ಅಡ್ಮಿರಲ್ ಆರ್ ಕೆ ಧವನ್, ಮುಖ್ಯ ಜಲಸೇನಾ ಸಿಬ್ಬಂದಿಗಳು INS Kolkata (D63) ಧ್ವಜ ವಂದನೆ ನೀಡಿದರು.
ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಗಣ್ಯಾತಿಗಣ್ಯರು
ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ರಕ್ಷಣಾ ಸಚಿವ ಅರುಣ್ ಜೈಟ್ಲಿ, ಸಾರಿಗೆ ಸಚಿವ ನಿತಿನ್ಗಡ್ಕರಿ ಮತ್ತಿತರ ಅಧಿಕಾರಿಗಳೊಂದಿಗೆ ಉಪಸ್ಥಿತರಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಹಾಗೂ ಇತರರು ಆತ್ಮೀಯ ಸ್ವಾಗತ ನೀಡಿ ಬರಮಾಡಿಕೊಂಡರು.