ಸಾವಿತ್ರಿ ಪ್ರವಾಹದಲ್ಲಿ ಕೊಚ್ಚಿಹೋದ 2 ಬಸ್ ಅವಶೇಷ ಪತ್ತೆ
ಮುಂಬೈ, ಆಗಸ್ಟ್ 11 : ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಹಾಡ್ ಬಳಿ ಮಹಾರಾಷ್ಟ್ರ-ಗೋವಾ ಹೆದ್ದಾರಿ ಸೇತುವೆ ಕೊಚ್ಚಿಹೋದ ಪರಿಣಾಮ ನಾಪತ್ತೆಯಾಗಿದ್ದ ಎರಡು ಬಸ್ಸಿನ ಅವಶೇಷಗಳನ್ನು ಬುಧವಾರ ಪತ್ತೆಮಾಡಲಾಗಿದೆ.
ನೌಕಾ ಪಡೆ ಬಸ್ಸಿನ ಅವಶೇಷಗಳನ್ನು ನದಿಯ ಆಳದಲ್ಲಿ ಪತ್ತೆ ಮಾಡಿದೆ. ಆದರೆ ಕಣ್ಮರೆಯಾಗಿದ್ದ ಅಷ್ಟೂ ಜನರ ಶವ ಪತ್ತೆಯಾಗಿಲ್ಲ. ನದಿಯಲ್ಲಿ ಶೋಧ ಕಾರ್ಯ ಇನ್ನು ಮುಂದುವರಿದಿದೆ.[ಸಾವಿತ್ರಿ ಪ್ರವಾಹದಲ್ಲಿ ಕೊಚ್ಚಿಹೋದ ಸೇತುವೆಯ ಚಿತ್ರಗಳು]
ಕಳೆದ ಬುಧವಾರ(ಆಗಸ್ಟ್ 3) ಮುಂಜಾನೆ 2 ಗಂಟೆ ಸುಮಾರಿಗೆ ಮುಂಬೈ-ಗೋವಾ ಹೆದ್ದಾರಿಯಲ್ಲಿ ಸಾವಿತ್ರಿ ನದಿಗೆ ಅಡ್ಡವಾಗಿದ್ದ ಬ್ರಿಟಿಷರ ಕಾಲದ ಸೇತುವೆ ಭಾರೀ ಪ್ರವಾಹಕ್ಕೆ ಸಿಕ್ಕಿ ಕೊಚ್ಚಿ ಹೋಗಿತ್ತು. ನಿರಂತರ ಎಂಟು ದಿನಗಳ ಶೋಧ ಕಾರ್ಯದ ನಂತರ ಬಸ್ಸಿನ ಅವಶೇಷಗಳು ದೊರೆತಿವೆ.[ಕೊಚ್ಚಿ ಹೋದ ಬ್ರಿಟಿಷರ ಕಾಲದ ಸೇತುವೆ]
ಅವಘಡದಲ್ಲಿ ಪ್ರಾಣ ಕಳೆದುಕೊಂಡ 26 ಮೃತ ದೇಹಗಳನ್ನು ಮೇಲಕ್ಕೆತ್ತಲಾಗಿದೆ. ಉಳಿದ 14 ಮಂದಿಯ ಶವಕ್ಕಾಗಿ ಶೋಧ ಮುಂದುವರಿಸಲಾಗಿದೆ.
ಸೇತುವೆ ಕುಸಿದಲ್ಲಿಂದ ಸುಮಾರು 170ರಿಂದ 200 ಮೀಟರ್ ದೂರದಲ್ಲಿಯೇ ಬಸ್ ಗಳ ಅವಶೇಷ ಪತ್ತೆಯಾಗಿದೆ. ಈಗ ಧಾರಾಕಾರ ಮಳೆ ಕಡಿಮೆಯಾಗಿದ್ದು ಹೆಲಿಕಾಪ್ಟರ್ ಗಳನ್ನು ಬಳಕೆ ಮಾಡಿಕೊಂಡು ಶೋಧ ಕಾರ್ಯ ನಡೆಸಲಾಗುತ್ತಿದೆ.