ಮಹಾಮಳೆ: ಮುಂಬೈ ವಿಮಾನ ನಿಲ್ದಾಣ ಬಂದ್; ಇತರ ಬೆಳವಣಿಗೆ
ಮುಂಬೈ ಮಹಾಮಳೆಗೆ ಛತ್ರಪತಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಟುವಟಿಕೆ ಸ್ಥಗಿತ. ಮಳೆಯಿಂದಾಗಿ, ನಿಲ್ದಾಣದ ಎರಡೂ ರನ್ ವೇ ಗಳಲ್ಲಿ ನೀರು ತುಂಬಿದ್ದರಿಂದ ವಿಮಾನ ಸಂಚಾರ ಇಲ್ಲ.
ಮುಂಬೈ, ಸೆಪ್ಟೆಂಬರ್ 20: ಶಾಲಾ ಕಾಲೇಜುಗಳು ಬಂದ್. ಟ್ರಾಫಿಕ್ ಗಣನೀಯ ಮಟ್ಟದಲ್ಲಿ ಕುಸಿತ. ಜನ ಜೀವನ ಅಸ್ತವ್ಯಸ್ತ. ಬಾಗಿಲು ಮುಚ್ಚಿದ ಅಂಗಡಿ ಮುಂಗಟ್ಟುಗಳು..... ಇದೆಲ್ಲವೂ ಮುಂಬೈನಲ್ಲಿಅಗಾಧವಾಗಿ ಸುರಿಯುತ್ತಿರುವ ಮಳೆ ಉಂಟು ಮಾಡಿರುವ ತಲ್ಲಣ.
ಮುಂಬೈನಲ್ಲಿ ಮತ್ತೆ ಮಹಾ ಮಳೆ, ಬುಧವಾರ ಶಾಲೆ-ಕಾಲೇಜು ರಜಾ
ಇದಕ್ಕೆ ಮತ್ತಷ್ಟು ಸೇರ್ಪಡೆ ಎಂಬಂತೆ, ಅತಿಯಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ನಿಲ್ದಾಣದ ಎರಡೂ ರನ್ ವೇಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ರನ್ ವೇಗಳಲ್ಲಿ ಹೇರಳವಾಗಿ ನೀರು ನಿಂತಿರುವುದರಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈ ಬರಬೇಕಿದ್ದ ವಿಮಾನಗಳನ್ನು ಗೋವಾ, ಬೆಂಗಳೂರು, ದೆಹಲಿ ಹಾಗೂ ಹೈದರಾಬಾದ್ ಗೆ ತೆರಳುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಂಗಳವಾರ (ಸೆ. 19) ರಾತ್ರಿ, ಸ್ಪೈಸ್ ಜೆಟ್ ವಿಮಾನ ಸಂಸ್ಥೆಗೆ ಸೇರಿದ ವಿಮಾನವೊಂದು ಮಳೆ ಸುರಿಯುತ್ತಿದ್ದ ವೇಳೆಯೇ ರನ್ ವೇ ಮೇಲೆ ಬಂದಿಳಿದಾಗ, ಅದು ನಿಯಂತ್ರಣ ತಪ್ಪಿ ರನ್ ವೇಯಿಂದ ಹೊರಗೆ ಹೋಗಿ ಮಣ್ಣಿನ ನೆಲದಲ್ಲಿ ನಿಂತಿದ್ದು ವಿಮಾನ ನಿಲ್ದಾಣದ ಅಧಿಕಾರಿಗಳನ್ನು ದಿಗ್ಭ್ರಾಂತರನ್ನಾಗಿಸಿತು. ಹೀಗಾಗಿಯೇ, ರನ್ ವೇಗಳನ್ನು ಉಪಯೋಗಿಸದಿರಲು ನಿರ್ಧರಿಸಲಾಗಿದೆ.
ಏತನ್ಮಧ್ಯೆ, ಮುಂಬೈನಲ್ಲಿ ಮುಂದಿನ 24 ಗಂಟೆವರೆಗೂ ಭಾರೀ ಮಳೆಯಾಗುವುದಾಗಿ ಹವಾಮಾನ ಇಲಾಖೆ ಸೂಚಿಸಿದ್ದು, ಇದು ಜನರ ಜೀವನನ್ನು ಮತ್ತಷ್ಟು ಅಸ್ತವ್ಯಸ್ತಗೊಳಿಸಲಿದೆ ಎಂದು ಅಂದಾಜಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಸಾರ್ವಜನಿಕರು ತಮ್ಮ ರಕ್ಷಣೆಗೆ ಆದ್ಯತೆ ಕೊಟ್ಟುಕೊಳ್ಳಬೇಕೆಂದು ಮುಂಬೈ ಪೊಲೀಸರು ಮನವಿ ಮಾಡಿದ್ದಾರೆ. ಹೇರಳ ಮಳೆಯಿಂದಾಗಿ, ಬುಧವಾರ (ಸೆ. 2) ಮಧ್ಯಾಹ್ನ 12:03ಕ್ಕೆ ಹಾಗೂ ಸಂಜೆ 6:04 ಸುಮಾರಿಗೆ ಮೇಘಸ್ಫೋಟದಂಥ ಮಳೆ ಬರುವ ನಿರೀಕ್ಷೆಯಿದ್ದು ಈ ಬಗ್ಗೆ ಎಚ್ಚರದಿಂದಿರಲು ಮನವಿ ಮಾಡಿದ್ದಾರೆ.