ಮಾಲಕಿಯ ರಕ್ಷಿಸಲು ಹೋಗಿ ಪ್ರಾಣ ನೀಗಿಕೊಂಡ ನಾಯಿ
"ಲಕ್ಕಿ ಬರೀ ನಾಯಿಯಾಗಿರಲಿಲ್ಲ. ನನಗೆ ತಂದೆ ತಾಯಿ ಯಾರೂ ಇಲ್ಲ. ಅದು ನನ್ನ ಮನೆಯ ಸದಸ್ಯನಂತೆ ಇತ್ತು. ಈಗ ನಾನು ನನ್ನ ಕುಟುಂಬದ ಸದಸ್ಯನನ್ನು ಕಳೆದುಕೊಂಡಿದ್ದೇನೆ. ನನಗೆ ನ್ಯಾಯ ದೊರಕಿಸಿಕೊಡಿ" ಎಂದು ಯುವತಿ ಕೇಳುತ್ತಿದ್ದಾಳೆ.
ಮುಂಬೈ, ಏಪ್ರಿಲ್ 15 : ಇದು ಎರಡು ಮುದ್ದಿನ ನಾಯಿಗಳ ಮನಮಿಡಿಯುವ ಕಥೆ. ಒಂದು ಘಟನೆಯಲ್ಲಿ ತನ್ನ ಮಾಲಿಕನ ಜೀವ ಉಳಿಸಲು ಹೋಗಿ ಸಾಕುನಾಯಿ ಸಾವನ್ನಪ್ಪಿದರೆ ಮತ್ತೊಂದು ಘಟನೆಯಲ್ಲಿ ಪೊಲೀಸ್ ಶ್ವಾನ ವಿಷಹಾವು ಕಚ್ಚಿಸಿಕೊಂಡು ಆಸ್ಪತ್ರೆ ಸೇರಿದೆ.
ನಾಯಿ ಮನುಜನ ಅತ್ಯಂತ ನಂಬಿಗಸ್ತ ಪ್ರಾಣಿಗಳಲ್ಲಿ ಅಗ್ರಸ್ಥಾನ ಪಡೆಯುವಂಥದ್ದು. ತನ್ನ ಪ್ರಾಣ ಹೋದರೂ ಸರಿ ತನ್ನನ್ನು ನಂಬಿದವರನ್ನು ನಾಯಿ ಎಂದೂ ಕೈಬಿಡುವುದಿಲ್ಲ ಎಂಬುದು ಮುಂಬೈನಲ್ಲಿ ನಡೆದ ಘಟನೆಯೊಂದರಲ್ಲಿ ಸಾಬೀತಾಗಿದೆ.[ಮಂಗಳೂರು: ಸಾಕು ನಾಯಿಗಳಿಗೆ 'ಡಾಗ್ ಲೈಸೆನ್ಸ್' ಕಡ್ಡಾಯ!]
ಆ ಸಾಕುನಾಯಿಯ ಹೆಸರು ಲಕ್ಕಿ. ತನ್ನನ್ನು ಸಾಕಿದವರನ್ನು ಅತಿಯಾಗಿ ಹಚ್ಚಿಕೊಂಡಿತ್ತು. ಆ ನಾಯಿಯನ್ನು ಆ ಯುವತಿ ಕೂಡ ಅಷ್ಟೇ ಪ್ರೀತಿಯಿಂದ ತನ್ನ ಕುಟುಂಬದ ಸದಸ್ಯನಂತೆ ನೋಡಿಕೊಳ್ಳುತ್ತಿದ್ದಳು. ಆದರೆ, ಆ ದುರ್ಘಟನೆಯೊಂದು ನಾಯಿಯ ಪ್ರಾಣವನ್ನು ತೆಗೆದುಕೊಂಡಿದೆ. [ನಾಯಿಗಾಗಿ ಮದುವೆ ಮುರಿದುಕೊಂಡ ಬೆಂಗಳೂರು ಹುಡುಗಿ]
ವೆಂಕಟೇಶ್ ದೇವೇಂದ್ರ ಎಂಬಾತ ಆ ನಾಯಿಯನ್ನು ಸಾಕಿದ ಯುವತಿಯನ್ನು ಪ್ರೀತಿಸುತ್ತಿದ್ದ. ಇಬ್ಬರ ನಡುವೆ ಏನೋ ಜಗಳ ನಡೆದಿದೆ. ಆತನಿಂದ ತಪ್ಪಿಸಿಕೊಳ್ಳಲೆಂದು ಆ ಯುವತಿ ಪಕ್ಕದ ಮನೆ ಹೊಕ್ಕಿದ್ದಾಳೆ. ಚಾಕು ಹಿಡಿದು ಅಲ್ಲಿಗೇ ನುಗ್ಗಿದ ವೆಂಕಟೇಶ್ ಆಕೆಯನ್ನು ಕೊಲ್ಲಲು ಯತ್ನಿಸಿದ್ದಾನೆ.
ಇದನ್ನು ಗಮನಿಸುತ್ತಿದ್ದ ಲಕ್ಕಿ, ಯುವತಿಯನ್ನು ರಕ್ಷಿಸುವ ಉದ್ದೇಶದಿಂದ ಅವರಿಬ್ಬರ ನಡುವೆ ಬಂದಿದೆ. ಆಗ, ಯುವತಿಯ ಬದಲು ಚಾಕು ಲಕ್ಕಿಯನ್ನು ಹೊಕ್ಕಿದ್ದರಿಂದ ನಾಯಿ ದುರಂತ ಸಾವು ಕಂಡಿದೆ. ಈ ಘಟನೆ ನಡೆದಿದ್ದು ಮುಂಬೈನ ಸಿಯನ್ ಕೋಳಿವಾಡದಲ್ಲಿ.[ಬೀದಿನಾಯಿಗಳನ್ನು ಸಾಕಿ ನೆರೆಹೊರೆಯವರಿಗೆ ತೊಂದರೆಯಿತ್ತ ಮಹಾತಾಯಿ]
ಈಗ ಆ ಯುವತಿ, "ಲಕ್ಕಿ ಬರೀ ನಾಯಿಯಾಗಿರಲಿಲ್ಲ. ನನಗೆ ತಂದೆ ತಾಯಿ ಯಾರೂ ಇಲ್ಲ. ಅದು ನನ್ನ ಮನೆಯ ಸದಸ್ಯನಂತೆ ಇತ್ತು. ಈಗ ನಾನು ನನ್ನ ಕುಟುಂಬದ ಸದಸ್ಯನನ್ನು ಕಳೆದುಕೊಂಡಿದ್ದೇನೆ. ನನಗೆ ನ್ಯಾಯ ದೊರಕಿಸಿಕೊಡಿ" ಎಂದು ಯುವತಿ ಕೇಳುತ್ತಿದ್ದಾಳೆ. ನಾಯಿಯನ್ನು ಕೊಂದ ವೆಂಕಟೇಶ್ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಸಿಆರ್ಪಿಎಫ್ ನಾಯಿಗೆ ಕಚ್ಚಿದ ಹಾವು : ಸಿಆರ್ಪಿಎಫ್ಗೆ ಸೇರಿದ ನಾಯಿ ಕ್ರೊಕೆಟ್, ಸುಧಾರಿತ ಬಾಂಬ್ ಪತ್ತೆಯ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ವಿಷಕಾರಕ ಹಾವು ಕಚ್ಚಿದೆ. ಈ ಘಟನೆ ಛತ್ತೀಸ್ಘಡದಲ್ಲಿ ಶನಿವಾರ ನಡೆದಿದ್ದು, ನಾಯಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ವಿಷ ಇಳಿಯುವ ಚುಚ್ಚುಮದ್ದನ್ನು ನೀಡಲಾಗಿದ್ದು, ಅದರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. [ಮೃತ ಯೋಧರ ಕುಟುಂಬಗಳಿಗೆ 1 ಕೋಟಿ ರು. ದಾನ ನೀಡಿದ ಅಕ್ಷಯ್]