ದಾವೂದ್ ಸಹೋದರ ಬಿರಿಯಾನಿ ತಿನ್ನೋವರೆಗೂ ಕಾದಿದ್ದ ಪೊಲೀಸರು!
ಮುಂಬೈ, ಸೆಪ್ಟೆಂಬರ್ 20: ಊಟ ಮಾಡ್ತಾ ಇದಾರೆ ಅಂದ್ರೆ ಯಮನೂ ಕಾಯ್ತಾನೆ ಎಂಬ ಮಾತಿದೆ. ಇನ್ನು, ಪೊಲೀಸರು ಕಾಯ್ದರೆ ತಪ್ಪೇನು ಎಂದು ಕೇಳುವಂಥ ಪ್ರಕರಣವಿದು.
ಥಾಣೆಯಲ್ಲಿ ದಾವೂದ್ ಇಬ್ರಾಹೀಂ ಸಹೋದರನ ಬಂಧನ
ಸೆ. 18ರ ರಾತ್ರಿ ಮಹಾರಾಷ್ಟ್ರದ ಥಾಣೆಯಲ್ಲಿ ಭೂಗತ ಲೋಕದ ದೊರೆ ದಾವೂದ್ ಇಬ್ರಾಹೀಂ ಸಹೋದರ ಇಕ್ಬಾಲ್ ಕಸ್ಕರ್ ನನ್ನು ಮುಂಬೈ ಪೊಲೀಸರು ಸೆರೆ ಹಿಡಿದಿದ್ದು ಈಗಾಗಲೇ ಜಗಜ್ಜಾಹೀರಾಗಿದೆ. ಆದರೆ, ಆತನ ಬಂಧನದ ವೇಳೆ ಆಟ ಊಟ ಮಾಡುತ್ತಿದ್ದರಿಂದ ಪೊಲೀಸರೇ ಆತನ ಬಂಧನಕ್ಕಾಗಿ ಕಾಯ್ದಿದ್ದಾರೆಂದು ಮುಂಬೈ ಪೊಲೀಸರೇ ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ, ಮುಂಬೈ ಮಧ್ಯಭಾಗದಲ್ಲಿರುವ ದಾವೂದ್ ನ ದಿವಂಗತ ಸಹೋದರಿ ಹಸೀನಾ ಪಾರ್ಕರ್ ಅವರ ನಿವಾಸದಲ್ಲೇ ಕಸ್ಕರ್ ಇರುವುದನ್ನು ಪತ್ತೆ ಹಚ್ಚಿದ್ದ ಪೊಲೀಸರು ಆತನನ್ನು ಬಂಧಿಸಲು ರಾತ್ರಿ ಸಮಯವನ್ನೇ ಆಯ್ಕೆ ಮಾಡಿಕೊಂಡಿದ್ದರು. ಬಹುದಿನಗಳ ಹಿಂದೆಯೇ ಆತನ ಚಲನವಲನಗಳನ್ನು ಅಧ್ಯಯನ ಮಾಡಿದ್ದ ಪೊಲೀಸರು, ಅದರ ಅನುಸಾರ, ರಾತ್ರಿ ಆತ ಮಲಗಲು ತೆರಳುವ ವೇಳೆಯಲ್ಲೇ ಆತನನ್ನು ಬಂಧಿಸಬೇಕೆಂದು ನಿರ್ಧರಿಸಿದ್ದರು.
ಮುನ್ನಚ್ಚರಿಕೆ ಕ್ರಮವಾಗಿ ಖಾಸಗಿ ವಾಹನಗಳನ್ನು ಬುಕ್ ಮಾಡಿಕೊಂಡಿದ್ದ ಪೊಲೀಸರು, ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಆತನ ಮನೆಗೆ ರಾತ್ರಿ 9:15ರ ಸುಮಾರಿಗೆ ಲಗ್ಗೆಯಿಟ್ಟರು.
ಇಂಗ್ಲೆಂಡ್ ನಲ್ಲಿ ದಾವೂದ್ ಆಸ್ತಿ ವಶ: ಸ್ವಾಗತಿಸಿದ ಟ್ವಿಟ್ಟಿಗರು
ಮನೆಯೊಳಗೆ ನುಗ್ಗಿದ ಕೂಡಲೇ ಗುಂಡಿನ ಚಕಮಕಿ ಆರಂಭವಾಗಬಹುದು ಎಂದು ನಿರೀಕ್ಷಿಸಿದ್ದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಮನೆಯಲ್ಲಿ ಕಸ್ಕರ್ ಹಾಗೂ ಆತನ ಕೆಲ ಸಹಚರರು ರಾತ್ರಿ ಭೋಜನದಲ್ಲಿ ನಿರತರಾಗಿದ್ದರು. ಅವರ ಪಿಸ್ತೂಲುಗಳು ಅವರ ಜೇಬುಗಳಲ್ಲಿ ತಣ್ಣಗೆ ಮಲಗಿದ್ದವು.
ಬಿರಿಯಾನಿ ತಿನ್ನುತ್ತಾ ಕುಳಿತಿದ್ದ ಅವರೆಲ್ಲರೂ, ಹಿಂದಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ, ಬಾಲಿವುಡ್ ಹಿರಿಯ ನಟ ನಡೆಸಿಕೊಡುವ 'ಕೌನ್ ಬನೇಗಾ ಕರೋಡ್ ಪತಿ' ಕಾರ್ಯಕ್ರಮ ವೀಕ್ಷಣೆಯಲ್ಲಿ ತಲ್ಲೀನರಾಗಿದ್ದರು. ಹಾಗಾಗಿಯೇ, ಅವರು ಪೊಲೀಸರ ಬರುವಿಕೆಯನ್ನು ಗಮನಿಸಲು ಸಾಧ್ಯವಾಗಿಲ್ಲ.
ಅದಿರಲಿ, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹಿಡಿದು ಒಳನುಗ್ಗಿದ ಪೊಲೀಸರಿಗೆ ಆತನ ಭೋಜನಕ್ಕೆ ಭಂಗ ತರಲು ಇಷ್ಟವಾಗಲಿಲ್ಲ. ಹಾಗಾಗಿ, ಕಸ್ಕರ್ ಸೇರಿದಂತೆ ಆತನ ಜತೆಯಲ್ಲಿ ಊಟ ಮಾಡುತ್ತಿದ್ದವರಿಗೆ ಭೋಜನ ಮುಗಿಸಲು ಸೂಚಿಸಿ, ಸಹಚರರ ಬಂಧನವಾದ ನಂತರವಷ್ಟೇ ಕಸ್ಕರ್ ನನ್ನು ಬಂಧಿಸಿದ್ದಾರೆ.