ಧ್ವನಿಮತದ ಮೂಲಕ ವಿಶ್ವಾಸ ಗೆದ್ದ ದೇವೇಂದ್ರ
ಮುಂಬೈ,ನ.12: ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಪ್ರಪ್ರಥಮ ಬಿಜೆಪಿಯ ಅಲ್ಪಮತದ ಸರ್ಕಾರ ಬುಧವಾರ ಅಗ್ನಿಪರೀಕ್ಷೆಯಲ್ಲಿ ಪಾಸ್ ಆಗಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಧ್ವನಿಮತದ ಮೂಲಕ ದೇವೇಂದ್ರ ಅವರು ಬಹುಮತ ಸಾಬೀತು ಪಡಿಸಿದ್ದಾರೆ. ಶಿವಸೇನಾ ಶಾಸಕರು ಬಿಜೆಪಿ ವಿರುದ್ಧ ಮತ ಚಲಾಯಿಸಿದರೆ, ಎನ್ ಸಿಪಿ ಬೆಂಬಲದಿಂದ ಬಿಜೆಪಿ ಸರ್ಕಾರ ಉಳಿದುಕೊಂಡಿದೆ.
ಶಿವಸೇನೆ ವಿಶ್ವಾಸಮತದ ವಿರುದ್ಧ ಮತ ಚಲಾಯಿಸಿದರೂ ಒಟ್ಟಾರೆ 63 ಸದಸ್ಯ ಬಲದಲ್ಲಿ 41 ಶಾಸಕರನ್ನು ಹೊಂದಿರುವ ಎನ್ ಸಿಪಿ ಬೇಷರತ್ ಬಾಹ್ಯ ಬೆಂಬಲದೊಂದಿಗೆ ಬಿಜೆಪಿ ವಿಶ್ವಾಸಮತ ಗೆದ್ದುಕೊಂಡಿದೆ. [ದೇವೇಂದ್ರ ಫಡ್ನವೀಸ್ ವ್ಯಕ್ತಿಚಿತ್ರ]
ಒಟ್ಟು 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ 144 ಮ್ಯಾಜಿಕ್ ಸಂಖ್ಯೆ ದಾಟಲು ಏಕೈಕ ದೊಡ್ಡ ಪಕ್ಷವಾಗಿರುವ ಬಿಜೆಪಿಗೆ 12 ಸದಸ್ಯರ ಕೊರತೆ ಇತ್ತು. (124 ಶಾಸಕರನ್ನು ಹೊಂದಿದೆ) ಪಕ್ಷೇತರರು ಹಾಗೂ ಸಣ್ಣಪುಟ್ಟ ಪಕ್ಷಗಳ ಶಾಸಕರು ಸೇರಿ 138 ಸದಸ್ಯರನ್ನು ಹೊಂದಿಸಿಕೊಂಡಿತ್ತು.
ಅದರೆ ಸರಳ ಬಹುಮತಕ್ಕೆ ಇನ್ನು 6 ಶಾಸಕರು ಬೇಕಿತ್ತು. ಬಿಜೆಪಿ ಜೊತೆ ಕಿತ್ತಾಟ ಮುಂದುವರೆಸಿರುವ ಶಿವಸೇನಾ ವಿಪಕ್ಷ ಸ್ಥಾನದಲ್ಲಿ ಕುಳಿತು ಬಿಜೆಪಿ ವಿರುದ್ಧ ತಿರುಗಿ ಬಿದ್ದಿತ್ತು. ಶಿವಸೇನೆಯ ಏಕನಾಥ್ ಖಾಡ್ಸೆ ವಿಪಕ್ಷನಾಯಕರಾಗಿದ್ದರೆ, ಔರಂಗಾಬಾದ್ ಶಾಸಕ ಹರಿಭಾವ್ ಬಾಗ್ಡೆ ಅವರಿಗೆ ಸ್ಪೀಕರ್ ಸ್ಥಾನ ಲಭಿಸಿದೆ.[ನರೇಂದ್ರನ ಅನುಸರಿಸಿದ ದೇವೇಂದ್ರನಿಗೆ ಆಪತ್ತು!]
ನಾಗಪುರ ಮೂಲದ 44ರ ಹರೆಯದ ದೇವೇಂದ್ರ ಫಡ್ನವೀಸ್ ಅವರು ಅ.31ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅಂದಿನಿಂದ ಶಿವಸೇನೆ ಜೊತೆ ತೆರೆಮರೆಯಲ್ಲಿ ಮೈತ್ರಿ ಕಸರತ್ತು ನಡೆದಿತ್ತು. ಸರ್ಕಾರಕ್ಕೆ ಬೆಂಬಲ ನೀಡುವ ಕುರಿತಂತೆ ಸ್ಪಷ್ಟ ನಿರ್ಧಾರ ಪ್ರಕಟಿಸಿದ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ವಿಧಾನಸಬೆ ಅಧಿವೇಶನ ಆರಂಭವಾಗುತ್ತಿದ್ದಂತೆ ವಿಪಕ್ಷ ಸ್ಥಾನದಲ್ಲಿ ಕೂರುವ ಮೂಲಕ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದರು.
ಹೀಗಾಗಿ ವಿಶ್ವಾಸಮತ ಯಾಚನೆ ಕುತೂಹಲ ಮೂಡಿಸಿತ್ತು. ಶಿವಸೇನೆ ಎಲ್ಲಾ ಶಾಸಕರಿಗೂ ವಿಪ್ ನೀಡಿ ವಿಶ್ವಾಸ ಮತದ ವಿರುದ್ಧ ಮತ ಚಲಾಯಿಸುವಂತೆ ಸೂಚಿಸಿತ್ತು.ಕಾಂಗ್ರೆಸ್ ಗೈರು ಹಾಜರಾಗುವ ನಿರ್ಧಾರ ಮಾಡಿತ್ತು, ಶರದ್ ಪವಾರ್ ಅವರ ಎನ್ ಸಿಪಿ ತಟಸ್ಥವಾಗಿ ಉಳಿಯುವ ನಿರ್ಧಾರ ಕೈಗೊಂಡಿತ್ತು. [ಬಿಜೆಪಿ, ಶಿವಸೇನೆ; ಬಾಗುವವರಾರು?]
ಆದರೆ, ಬಿಜೆಪಿ ತನ್ನ ಅಭ್ಯರ್ಥಿಯನ್ನು ಸ್ಪೀಕರ್ ಸ್ಥಾನದಲ್ಲಿ ಕೂರಿಸುತ್ತಿದ್ದಂತೆ ದೇವೇಂದ್ರ ಅವರು ಬಹುಮತ ಗೆಲ್ಲುವ ಕುರುಹು ಸಿಕ್ಕಿತ್ತು. ಕೊನೆಗೆ ಎಸ್ ಸಿಪಿ ಬಾಹ್ಯ ಬೆಂಬಲದಿಂದ ಬಿಜೆಪಿ ಜಯದ ನಗೆ ಬೀರಿದೆ. ಅದರೆ, ಆಟ ಇನ್ನೂ ಬಾಕಿ ಇದ್ದು, ಸರ್ಕಾರದ ಮೇಲೆ ಎನ್ ಸಿಪಿ ಯಾವ ರೀತಿ ಹಿಡಿತ ಸಾಧಿಸುತ್ತದೆ ಎಂಬುದನ್ನು ಕಾದು ನೋಡಬೇಕು. ಎನ್ ಸಿಪಿ ಪಕ್ಷ ಸ್ಥಾಪನೆಗೊಂಡಾಗಿನಿಂದಲೂ ಅಧಿಕಾರ ನಡೆಸುವ ಅವಕಾಶ ಪಡೆದುಕೊಂಡೇ ಬಂದಿರುವುದು ವಿಶೇಷ.