63 ವರ್ಷದ ವೃದ್ಧನಿಗೆ ರೂ.57ಲಕ್ಷ ವಂಚಿಸಿ ಪರಾರಿ
ನಿಷೇಧಿತ ರೂ.500 ಹಾಗು 1000 ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಡುವುದಾಗಿ ಹೇಳಿ ವೃದ್ಧರೊಬ್ಬರನ್ನು ವಂಚಿಸಿ ಪರಾರಿಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈ, ನವೆಂಬರ್, 28: ರೂ. 57.50 ಲಕ್ಷ ಮೌಲ್ಯದ ನಿಷೇಧಿತ ಹಳೆ ನೋಟುಗಳನ್ನು ವಿನಿಮಯ ಮಾಡಿಕೊಡುವಂತೆ ಕೇಳಿದ 63 ವರ್ಷದ ಹಿರಿಯ ನಾಗರಿಕರೊಬ್ಬರಿಗೆ ದುಷ್ಕರ್ಮಿಗಳು ವಂಚಿಸಿ ಪರಾರಿಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮೀರಜ್ ಅಲಿ ಅಲಿಯಾಸ್ ಡ್ಯಾನಿ ಮತ್ತು ಅವನ ಮೂವರು ಸಹಚರರು ದಕ್ಷಿಣ ಮುಂಬೈ ನಿವಾಸಿ ಸಿರಾಜ್ ದಲಾಲ್ ಅವರನ್ನು ವಂಚಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
"ನಿಷೇಧಿತ ರೂ.500 ಹಾಗು 1000 ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಂಡು ಮನೆ ಖರೀದಿಸಲು ನಿರ್ಧರಿಸಿದ್ದೆ, ಇದಕ್ಕಾಗಿ ನನ್ನ ಸಂಬಂಧಿಕರೊಬ್ಬರ ಉದ್ಯೋಗಿಯಾದ ಅಲಿಯನ್ನು ನನ್ನ ಮಗನ ಜತೆ ನವೆಂಬರ್ 12 ರಂದು ಮುಸ್ತಫಾ ಬಜಾರ್ ನಲ್ಲಿ ಭೇಟಿಯಾಗಿದ್ದೆ" ಎಂದು ಸಿರಾಜ್ ದಲಾಲ್ ತಿಳಿಸಿದ್ದಾರೆ.
"ಅಂದು ಅಲಿಯೊಂದಿಗೆ ಇತರೆ ಮೂವರು ಯುವಕರು ಕಾರಿನಲ್ಲಿ ಬಂದಿದ್ದರು. ಅವರು ನಮ್ಮ ಸಂಬಧಿಕ ಜಾನಿ, ಮತ್ತು ಸುಫಿಯಾನ್ ಹಾಗು ಕಾರು ಚಾಲಕ ಆಗಿದ್ದರು" ಎಂದು ದಲಾಲ್ ಗುರುತಿಸಿದ್ದಾರೆ.
ಈ ನಾಲ್ಕು ಜನ "ನಿಷೇಧಿತ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಿಲ್ಲ, ಬೇಕಿದ್ದರೆ ಮನೆಕೊಂಡುಕೊಳ್ಳಲು ಸಹಾಯ ಮಾಡುವುದಾಗಿ" ತಿಳಿಸಿದ್ದರು ಎಂದು ದಲಾಲ್ ಪೊಲೀಸರ ಬಳಿ ತಿಳಿಸಿದ್ದಾರೆ.
"ಮಾನೆ ಮಾರುವವರು ಇಂದೇ ಹಣ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಅಲಿ ಹಣ ಕೊಡುವಂತೆ ನನ್ನನ್ನು ಒತ್ತಾಯಿಸಿದ, ಅಷ್ಟೇ ಅಲ್ಲದೆ ಹಣವನ್ನು ನಮ್ಮ ಕಾರಿನಲ್ಲಿ ಇಟ್ಟು ಮುಂದೆ ಇನ್ನೊಂದು ಕಾರನ್ನು ಪಾರ್ಕ್ ಮಾಡಲಾಗಿದೆ ಅಲ್ಲಿಗೆ ಹೋಗಿ ಕುಳಿತುಕೊಳ್ಳುವಂತೆ ಸೂಚಿಸಿದ" ಎಂದು ದಲಾಲ್ ತಿಳಿಸಿದ್ದಾರೆ.
ದಲಾಲ್ ಅವರು ಕಾರಿನಲ್ಲಿ ಹಣವಿಟ್ಟು ಅಲಿ ಸೂಚಿಸಿದ ಕಾರಿನೆಡೆಗೆ ಹೆಜ್ಜೆ ಹಾಕುತ್ತಿದ್ದಂತೆಯೇ ಅಲ್ಲಿಂದ ಕಾರು ಹೋಗಿಬಿಟ್ಟಿದೆ ಆತುರಗೊಂಡು ಅವರು ಹಿಂತಿರುಗಿ ಹಣವಿಟ್ಟ ಕಾರಿನೆಡೆಗೆ ದೌಡಾಯಿಸಲು ಮುಂದಾದಗ ಆ ಕಾರು ಸಹ ಯೂ ಟರ್ನ್ ತೆಗೆದುಕೊಂಡು ನಿಷ್ಕ್ರಮಿಸಿದೆ.
ನಂತರ ಎರಡು ದಿನ ಅವರನ್ನು ಸಂಪರ್ಕಿಸಲು ಮೊಬೈಲ್ ಫೋನ್ ಗೆ ಕರೆ ಮಾಡಿ ಪ್ರಯತ್ನಿಸಿದೆವು ಆದರೆ ಅವರು ಸಿಗಲಿಲ್ಲ ದಕ್ಷಿಣ ಮುಂಬೈನಲ್ಲಿರುವ ಅಲಿ ಮನೆಯನ್ನು ವಿಚಾರಿಸಿದೆವು ಅಲ್ಲೂ ಸಹ ಅವರ ಸುಳಿವು ಸಿಗಲಿಲ್ಲ ಎಂದು ದಲಾಲ್ ತಿಳಿಸಿದ್ದಾರೆ.
ಈ ಸಂಬಂಧ ಮುಂಬೈನ್ ಬೈಕುಲ್ಲಾ ಪೊಲೀಸ್ ಠಾಣೆಗೆ ದಲಾಲ್ ಅವರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ತನಿಖೆ ಆರಂಭಿಸಿದ್ದಾರೆ.
ಆರೋಪಿಗಳ ವಿರುದ್ಧ ಭಾರತ ದಂಡ ಸಂಹಿತೆ ಕಾಯ್ದೆ 420 ವಂಚನೆ ಆರೋಪ, ಮತ್ತು 34 ಉದ್ದೇಶಪೂರ್ವಕವಾಗಿ ಮೋಸ ಮಾಡಿರುವ ಕೇಸ್ ಗಳನ್ನು ದಾಖಲಿಸಲಾಗಿದೆ.