ದೇಶಕ್ಕಾಗಿ ಹೋರಾಡಿ ಸತ್ತರೆ ವೀರ ಸ್ವರ್ಗ: ಫಯಾಜ್ ಖಾನ್
ಮಂಗಳೂರು,ಜನವರಿ,06 : ಬಂದೂಕು ಹಿಡಿದುಕೊಂಡು, ಸುಸೈಡ್ ಬಾಂಬರ್ ಆಗಿ ಸತ್ತರೆ ಸ್ವರ್ಗ ಸಿಗುವುದಿಲ್ಲ. ದೇಶಕ್ಕಾಗಿ ಹೋರಾಡಿ ಹುತಾತ್ಮನಾದರೆ ಮಾತ್ರ ವೀರ ಸ್ವರ್ಗ ಎಂದು ಮುಸ್ಲಿಂ ರಾಷ್ಟ್ರೀಯ ಮಂಚ್ ನ ಕಾರ್ಯನಿರ್ವಾಹಕ ಸಮಿತಿಯ ಸದಸ್ಯ ಮೊಹಮ್ಮದ್ ಫಯಾಜ್ ಖಾನ್ ಹೇಳಿದರು.
ಯುವ ಬ್ರಿಗೇಡ್ ಮಂಗಳೂರಲ್ಲಿ ಆಯೋಜಿಸಿದ್ದ 'ವಸುದೈವ ಕುಟುಂಬಕಮ್-ಕೂಡಿ ಬಾಳೋಣ' ಕಾರ್ಯಕ್ರಮದಲ್ಲಿ ಮೊಹಮ್ಮದ್ ಫಯಾಜ್ ಖಾನ್ ಪ್ರಮುಖ ಭಾಷಣಕಾರರಾಗಿ ಮಾತನಾಡಿದರು. ಜನನಿ, ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲು. ಹೃದಯ ವೈಶಾಲ್ಯತೆ ಇದ್ದರೆ ಈ ನೆಲದಲ್ಲಿಯೇ ನಮಗೆ ಸ್ವರ್ಗವೂ ದೊರೆಯುತ್ತದೆ. ಭಾರತ ಎಲ್ಲಾ ಭಾಷೆ, ಧರ್ಮ, ಸಂಸ್ಕೃತಿ ಹಾಗೂ ಎಲ್ಲಾ ಜನಾಂಗದ ಜನರನ್ನು ಸ್ವೀಕರಿಸಿ ಎಲ್ಲರನ್ನೂ ಒಟ್ಟುಗೂಡಿಸಿದ ಹೆಗ್ಗಳಿಕೆ ಹೊಂದಿದ ದೇಶ ಎಂದು ಅಭಿಮಾನ ವ್ಯಕ್ತಪಡಿಸಿದರು.[ಆತ್ಮಶುದ್ಧಿ, ತ್ಯಾಗದ ದ್ಯೋತಕ ಜೈನರ ಪರ್ಯೂಷಣ ಪರ್ವ]
ಭಾರತ ಪ್ರತಿಯೊಬ್ಬ ಪ್ರಜೆಗೂ ತಮ್ಮ ತಮ್ಮ ದೇವರ ಆರಾಧನೆಗೆ ಮುಕ್ತ ಅವಕಾಶ ನೀಡಿದೆ. ಈ ಎಲ್ಲಾ ಅಭಿವ್ಯಕ್ತ ಸ್ವಾತಂತ್ರ್ಯದ ನಡುವೆಯೂ ಯಾವ ವ್ಯಕ್ತಿಗೆ ಈ ದೇಶದಲ್ಲಿ ಅತೃಪ್ತಿ, ಅಸಹಿಷ್ಣುತೆ ಕಾಣುತ್ತದೆಯೋ ಅದು ಆ ವ್ಯಕ್ತಿಯ ದೌರ್ಭಾಗ್ಯವೇ ಹೊರತು ಇದಕ್ಕೆ ದೇಶ ಕಾರಣವಾಗದು ಎಂದು ಸ್ಪಷ್ಟನೆ ನೀಡಿದರು.[ಕ್ರಿಶ್ಚಿಯನ್ ರ ಆರಾಧ್ಯ ದೈವ ಏಸುವನ್ನು ಶಿಲುಬೆಗೆ ಏರಿಸಿರಲಿಲ್ಲವಂತೆ!]
ಹೈದ್ರೋಸ್ ಹಾಜಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ನ ಮುಖ್ಯಸ್ಥ ಹಾಜಿ ಬಿ. ಅಬ್ದುಲ್ ರಝಾಕ್, ಪ್ರಗತಿಪರ ಕೃಷಿಕ ಅಹ್ಮದ್ ಮುಸ್ತಫಾ ಗೋಳ್ತಮಜಲು, ಯುವ ಬ್ರಿಗೇಡ್ ನ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ, ರಾಜ್ಯ ಸಂಚಾಲಕ ನಿತ್ಯಾನಂದ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.