ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೀಡಾಗಿದ್ದ ಮಂಗಳೂರು ಯುವಕರು ವಾಪಸ್
ಮಂಗಳೂರು, ಮೇ 27: ಸೌದಿ ಅರೇಬಿಯಾಕ್ಕೆ ತೆರಳಿ ಸಂಕಷ್ಟಕ್ಕೀಡಾಗಿದ್ದ ಕರಾವಳಿಯ ಇಬ್ಬರು ಯುವಕರನ್ನು ರಕ್ಷಿಸಿ ತಾಯ್ನಾಡಿಗೆ ಮರಳಿಸುವಲ್ಲಿ ಇಂಡಿಯನ್ ಸೋಶಿಯಲ್ ಫೋರಂ (ಐಎಸ್ ಎಫ್) ಯಶಸ್ವಿಯಾಗಿದೆ.
ಗಂಜಿಮಠದ ನಿವಾಸಿ ದಾಮೋದರ್ (31) ಮತ್ತು ಮುಲ್ಕಿ ಕೊಲ್ನಾಡ್ ನ ನಿವಾಸಿ ಪುನೀತ್ (25) ಐಎಸ್ ಎಫ್ ನೆರವಿನಿಂದ ಶನಿವಾರ ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಪುನೀತ್ರ ತಂದೆ ಜಯರಾಜ್, ತಾಯಿ ಮಂಜುಳಾ, ದಾಮೋದರ್ ಅವರ ಸಂಬಂಧಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಸೌದಿಗೆ ತೆರಳಿ ಮೋಸಕ್ಕೊಳಗಾಗಿ ತೀವ್ರವಾಗಿ ನೊಂದಿದ್ದ ನನಗೆ ಅಬ್ದುಲ್ ಜಬ್ಬಾರ್ ಧೈರ್ಯ ತುಂಬಿದರು ಎಂದು ಮಗನನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಪುನೀತ್ರ ತಾಯಿ ಮಂಜುಳಾ ತಿಳಿಸಿದ್ದಾರೆ.
ನನ್ನ ಮಗನನ್ನು ಸುರಕ್ಷಿತವಾಗಿ ಊರಿಗೆ ಮರಳುವಂತೆ ಮಾಡಿರುವ ಐಎಸ್ ಎಫ್ ತಂಡದ ಸದಸ್ಯರನ್ನು ನಾನು ವಂದಿಸುತ್ತೇನೆ. ನನ್ನ ಮಗನ ಸಂಕಷ್ಟಕ್ಕೆ ಕೂಡಲೇ ಸ್ಪಂದಿಸಿ ನ್ಯಾಯ ಸಿಗುವವರೆಗೆ ಹೋರಾಟ ನಡೆಸಿದ ತಂಡದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ ಪುನೀತ್ರ ತಾಯಿ ಮಂಜುಳಾ.