ಬೆಂಗಳೂರಲ್ಲಿ ಉಳ್ಳಾಲದ ಯುವಕ ಸಂಶಯಾಸ್ಪದ ಸಾವು
ಮಂಗಳೂರು, ಆಗಸ್ಟ್ 31 : ಉಳ್ಳಾಲದ ಯುವಕನೊಬ್ಬ ಬೆಂಗಳೂರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ಪುಡಿ ರೌಡಿಗಳಿಂದ ತಪ್ಪಿಸಿಕೊಳ್ಳಲು ಹೋಗಿ, ಯುವಕ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತಪಟ್ಟ ಯುವಕನನ್ನು ಅಕ್ಕರಕೆರೆ ಮಸೀದಿ ಬಳಿ ನಿವಾಸಿ ಅಬ್ದುಲ್ ಲತೀಫ್ ಪುತ್ರ ನಶಾಲ್ ಇಸ್ಮಾಯಿಲ್ (20) ಎಂದು ಗುರುತಿಸಲಾಗಿದೆ. ಸೋಮವಾರ ತಡರಾತ್ರಿ ವೇಳೆಗೆ ಈ ಘಟನೆ ನಡೆದಿದ್ದು, ಮಂಗಳವಾರ ಮುಂಜಾನೆ ಈ ವಿಚಾರ ಬೆಳಕಿಗೆ ಬಂದಿದೆ.[ಪರಪ್ಪನ ಅಗ್ರಹಾರ : ತರಕಾರಿ ವಾಹನದಲ್ಲಿ ಕೈದಿ ಪರಾರಿ!]
ನಶಾಲ್ ತಿಂಗಳ ಹಿಂದೆ ಮಂಗಳೂರಿನ ಪಿವಿಎಸ್ ನಲ್ಲಿರುವ ಸೈಬೀನ್ ಸಂಸ್ಥೆಯಲ್ಲಿ ಇಂಟೀರಿಯರ್ ಡಿಸೈನಿಂಗ್ ನಲ್ಲಿ ತರಬೇತಿ ಮುಗಿಸಿದ್ದರು. ಬಳಿಕ ಬೆಂಗಳೂರು ಮತ್ತು ಪುಣೆಯ ಕಂಪೆನಿಗಳಿಂದ ಕೆಲಸದ ಸಂದರ್ಶನಕ್ಕೆ ಕರೆ ಬಂದಿದ್ದ ಹಿನ್ನಲೆಯಲ್ಲಿ ಆಗಸ್ಟ್ 5 ರಂದು ಬೆಂಗಳೂರಿಗೆ ತೆರಳಿದ್ದರು.[ಉಬರ್ ಚಾಲಕನಿಂದ ಲಂಚ, ನಾಲ್ವರು ಪೊಲೀಸರ ಅಮಾನತು!]
ಎಚ್ಎಎಲ್ನ ಹಳೇ ವಿಮಾನ ನಿಲ್ದಾಣ ಸಮೀಪದ ಸ್ನೇಹಿತರಿದ್ದ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದರು. ಅಲ್ಲೇ ಸಮೀಪದ ನಿರ್ಮಾಣ ಹಂತದ ಕಟ್ಟಡದ ಕೆಳಭಾಗದಲ್ಲಿ ನಶಲ್ ಇಸ್ಮಾಯಿಲ್ ಎಂಬವರ ಮೃತದೇಹ ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ. ತಲೆಗೆ ಗಂಭೀರವಾದ ಗಾಯಗಳಾಗಿವೆ.
ಸ್ಥಳ ಪರಿಶೀಲನೆ ನಡೆಸಿದ ಎಚ್ಎಎಲ್ ಪೊಲೀಸರು ಗುರುತಿನ ಚೀಟಿ ಆಧಾರದಲ್ಲಿ ಉಳ್ಳಾಲದ ಮನೆಮಂದಿಯನ್ನು ಸಂಪರ್ಕಿಸಿದ್ದರು. ನಶಾಲ್ ಸಾವನ್ನಪ್ಪಿರುವುದಾಗಿ ಮಾಹಿತಿ ನೀಡಿದ್ದಾರೆ. ಕುಟುಂಬದವರು ಮಂಗಳವಾರ ಸಂಜೆ ಬೆಂಗಳೂರಿಗೆ ತೆರಳಿದರು.
ತಪ್ಪಿಸಿಕೊಳ್ಳಲು ಹೋಗಿ ಸಾವು : ನಶಾಲ್ ಉಳಿದುಕೊಂಡಿದ್ದ ರೂಮಿನಲ್ಲಿದ್ದ ಸ್ನೇಹಿತರಿಗೂ ಹಾಗೂ ಬೆಂಗಳೂರಿನ ಯುವಕರ ತಂಡವೊಂದರ ಮಧ್ಯೆ ವೈಷಮ್ಯವಿತ್ತು. ಸೋಮವಾರ ಸಂಜೆ ವೇಳೆ ನಶಾಲ್ ಹಾಗೂ ಆತನ ಸ್ನೇಹಿತರು ಬಾಡಿಗೆ ಮನೆ ಸಮೀಪದ ನಿರ್ಮಾಣ ಹಂತದ ಕಟ್ಟಡದ ಮೇಲ್ಮಹಡಿಯಲ್ಲಿ ಕುಳಿತಿದ್ದರು.
ಆಗ ಅಲ್ಲಿಗೆ ಬಂದ ಇನ್ನೊಂದು ತಂಡದ ಯುವಕನ ಜತೆಗೆ ನಶಾಲ್ ಸ್ನೇಹಿತರು ಜಗಳಕ್ಕಿಳಿದರು. ಅವರ ನಡುವೆ ಮಾತಿನ ಚಕಮಕಿ ನಡೆದು, ಯುವಕ ತನ್ನ ತಂಡದ ಸದಸ್ಯರಿಗೆ ಫೋನ್ ಮಾಡಿ ಸ್ಥಳಕ್ಕೆ ಬರುವಂತೆ ತಿಳಿಸಿದ್ದ. ಇದರಿಂದ ಗಾಬರಿಗೊಂಡ ನಶಾಲ್ ಹಾಗೂ ಸ್ನೇಹಿತರು ಸ್ಥಳದಿಂದ ಪರಾರಿಯಾಗಲು ಕಟ್ಟಡದ ಮೇಲಿನಿಂದ ಕೆಳಗೆ ಇಳಿಯಲು ಪೈಪ್ ಲೈನ್ ನನ್ನು ಆಶ್ರಯಿಸಿದ್ದರು.
ನಶಾಲ್ ಪೈಪಿನ ಮೂಲಕ ಕೆಳಗಿಳಿಯುವ ಸಂದರ್ಭ ಪೈಪ್ ತುಂಡಾಗಿ ಕೆಳಗೆ ಬಿದ್ದು, ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮನೆಯಲ್ಲಿ ಶ್ರೀಮಂತಿಕೆಯಿದ್ದರೂ ಕೆಲಸದ ಅನುಭವಕ್ಕಾಗಿ ಹೆತ್ತವರು ಒಪ್ಪಿಗೆ ನೀಡದಿದ್ದರೂ ನಶಾಲ್ ಬೆಂಗಳೂರಿಗೆ ತೆರಳಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.