ಸಂಸದ ಕಟೇಲ್ ಪ್ರಚೋದನಕಾರಿ ಹೇಳಿಕೆ ಖಂಡಿಸಿ ಪ್ರತಿಭಟನೆ
ಮಂಗಳೂರು, ಜನವರಿ. 03 : ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೇಲ್ ಪ್ರಚೋದನಕಾರಿ ಹೇಳಿಕೆಗೆ ಜಿಲ್ಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಯೂತ್ ಕಾಂಗ್ರೆಸ್ ಸೇರಿದಂತೆ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ(ಡಿವೈಎಫ್ಐ) ಸಂಘಟನೆ ಕಟೇಲ್ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದವು.
ಕಾರ್ತಿಕ್ ರಾಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ . ಅವರ ವಿರುದ್ಧ ಸೂಕ್ತ ಕ್ರಮ ಕೈ ಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಯುವ ಕಾಂಗ್ರೆಸ್ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಯಿತು.[ದಕ್ಷಿಣ ಕನ್ನಡಕ್ಕೆ ಬೆಂಕಿ ಹಚ್ಚುತ್ತೇವೆ: ಸಂಸದ ಕಟೀಲ್]
ಒಂದು ಕಡೆ ನೇತ್ರಾವತಿ ನದಿ ತಿರುವು ವಿಚಾರದಲ್ಲಿ ಜಿಲ್ಲೆಯ ಜನತೆಗಾಗಿ ಹೋರಾಟ ನಡೆಸುವುದಾಗಿ ಹೇಳುವ ನಳಿನ್ ಕುಮಾರ್ ಇನ್ನೊಂದು ಕಡೆ ಬೆಂಕಿ ಹಚ್ಚುವ ಮಾತನಾಡುತ್ತಿದ್ದಾರೆ.
ಒಂದು ವೇಳೆ ಬಿಜೆಪಿ ಈ ರೀತಿ ಬೆಂಕಿ ಹಚ್ಚುವ ಕೆಲಸಕ್ಕಿಳಿದರೆ ಕಾಂಗ್ರೆಸ್ ಅದನ್ನು ಶಮನ ಮಾಡಲು ಸಿದ್ಧವಿದೆ. ಕೊಣಾಜೆಯ ಕಾರ್ತಿಕ್ ರಾಜ ಅಮಾಯಕ. ಆತನ ಕೊಲೆ ಪ್ರಕರಣದ ಬಗ್ಗೆ ನಿಷ್ಪಕ್ಷವಾದ ತನಿಖೆಯಾಗಬೇಕೆನ್ನುವುದು ನಮ್ಮ ಆಗ್ರಹವಾಗಿದೆ. ಈ ಬಗ್ಗೆ ಸಚಿವರು ಭರವಸೆ ನೀಡಿದ್ದಾರೆ ಎಂದು ಮಿಥುನ್ ರೈ ತಿಳಿಸಿದರು.[ವಿವಾದಾತ್ಮಕ ಹೇಳಿಕೆ, ಸಂಸದ ನಳೀನ್ ಕುಮಾರ್ ವಿರುದ್ಧ ದೂರು]
ಡಿವೈಎಫ್ಐ ಪ್ರತಿಭಟನೆ: ಕಾರ್ತಿಕ್ ರಾಜ್ ಕೊಲೆ ಆರೋಪಿಗಳನ್ನು ಬಂಧಿಸದೇ ಇದ್ದರೆ ಜಿಲ್ಲೆಗೇ ಬೆಂಕಿ ಇಡುತ್ತೇನೆಂದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮತೀಯ ರಾಜಕೀಯ ಮಾಡುತ್ತಿದ್ದು, ತನ್ನ ಸ್ವಂತ ಜಿಲ್ಲೆಯನ್ನೇ ಬೆಂಕಿಯಿಡಲು ಹೊರಟ ಸಂಸದರು ಮಾನಸಿಕ ಅಸ್ವಸ್ಥರು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.
ಜಿಲ್ಲೆ ಎಂದಾಕ್ಷಣ ಎಲ್ಲರೂ ಕೂಡಿ ಬಾಳುವ ಮನೆ ಇದ್ದಂತೆ.ಅಕಸ್ಮಾತ್ ತಪ್ಪುಗಳು ನಡೆದಲ್ಲಿ ಅದರ ವಿರುದ್ಧ ನ್ಯಾಯಸಮ್ಮತ ಹೋರಾಟ ನಡೆಸಬೇಕೇ ಹೊರತು ಜವಬ್ದಾರಿಯುತ ಚುನಾಯಿತ ಸಂಸದರು ಬೆಂಕಿ ಹಚ್ಚುವಂತಹ ಉದ್ರೇಕಕಾರಿ ಹೇಳಿಕೆಗಳು ನೀಡುವುದು ಸರಿಯಲ್ಲ.
.ನಿಮ್ಮದು ಬೆಂಕಿ ಹಾಕುವ ಇತಿಹಾಸವೇ ಆದಲ್ಲಿ ನೀವು ಹಾಕುವ ಬೆಂಕಿಯನ್ನು ನಂದಿಸಿದ ಇತಿಹಾಸ ನಮ್ಮದು. ನಮ್ಮ ಶಕ್ತಿ ಸಣ್ಣದಾದರೂ ನೀವು ಹಾಕುವ ಬೆಂಕಿ ಜಿಲ್ಲೆಯಾದ್ಯಂತ ವ್ಯಾಪಿಸದೇ ಇರುವ ಕೆಲಸವನ್ನು ನಾವು ಮಾಡುತ್ತೇವೆಂದು ಎಚ್ಚರಿಸಿದರು.
ಕಾರ್ತಿಕ್ ರಾಜ್ ಕೊಲೆಯನ್ನು ಸಿಐಡಿಗೆ ವಹಿಸುತ್ತೇವೆಂದು ಹೇಳುವ ಕಾಂಗ್ರೆಸ್ ನ ನಿಲುವನ್ನು ಡಿವೈಎಫ್ಐ ಪ್ರಬಲವಾಗಿ ವಿರೋಧಿಸುತ್ತದೆ. ಸಿಐಡಿಗೆ ವಹಿಸಿದ ಯಾವುದೇ ಕೇಸುಗಳು ಪರಿಣಾಮಕಾರಿಯಾಗಿಲ್ಲ. ಬದಲಾಗಿ ಕೊಲೆ ತನಿಖೆಯನ್ನು ಉನ್ನತ ಮಟ್ಟದ ಅಧಿಕಾರಿಗಳ ತಂಡಕ್ಕೆ ವಹಿಸಬೇಕೆಂದು ಆಗ್ರಹಿಸಿದರು.