ವಿದ್ಯುತ್ ಕಳ್ಳತನದ ಬಗ್ಗೆ ಮೆಸ್ಕಾಂ ಮೌನವೇಕೆ?
ಮಂಗಳೂರು, ನವೆಂಬರ್ 14 : ವಿದ್ಯುತ್ ಕೊರತೆಯ ನೆಪ ಹೇಳಿ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಪ್ರತಿನಿತ್ಯ ಲೋಡ್ ಶೆಡ್ಡಿಂಗ್ ಮಾಡುತ್ತಿದೆ. ಆದರೆ, ಈ ಎರಡೂ ಜಿಲ್ಲೆಗಳಲ್ಲಿನ ವಿದ್ಯುತ್ ಕಳ್ಳತನ ಪ್ರಕರಣದ ಬಗ್ಗೆ ಮೆಸ್ಕಾಂ ಮೌನವಹಿಸಿದೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವಿದ್ಯುತ್ ಕಳ್ಳತನದ ಪ್ರಕರಣಗಳು ಹೆಚ್ಚುತ್ತಲೇ ಇವೆ. 2010-15ರ ನಡುವೆ ಎರಡು ಜಿಲ್ಲೆಯಲ್ಲಿ 517 ವಿದ್ಯುತ್ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಆದರೆ, ಯಾವುದೇ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. [2016ರ ಜನವರಿಯಿಂದ ಲೋಡ್ ಶೆಡ್ಡಿಂಗ್ ಇಲ್ಲ]
ಇನ್ನು ಮೆಸ್ಕಾಂ ವ್ಯಾಪ್ತಿಯಲ್ಲಿನ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ 1,372 ವಿದ್ಯುತ್ ಕಳ್ಳತನ ಪ್ರಕರಣಗಳು ದಾಖಲಾಗಿದೆ. ಪ್ರಕರಣಗಳಲ್ಲಿ ಯಾರಿಗೂ ಶಿಕ್ಷೆಯಾಗದ ಕಾರಣ ವಿದ್ಯುತ್ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. [ಕರ್ನಾಟಕದಲ್ಲಿ ವಿದ್ಯುತ್ ಕೊರತೆ : ಶಾಶ್ವತ ಪರಿಹಾರಗಳು]
ಕಳ್ಳತನಕ್ಕೆ ಶಿಕ್ಷೆ ಏನು? : ಮೊದಲ ಬಾರಿಗೆ ವಿದ್ಯುತ್ ಕಳ್ಳತನ ಪತ್ತೆಯಾದ ಪ್ರಕರಣಗಳಿಗೆ ಮೂರು ಪಟ್ಟು ದಂಡ ಹಾಗೂ ಇದು ಪುನರಾವರ್ತನೆಯಾದಲ್ಲಿ ಆರು ಪಟ್ಟು ದಂಡ ಹಾಗೂ ಐದು ವರ್ಷ ಜೈಲುಶಿಕ್ಷೆ ವಿಧಿಸಲಾಗುತ್ತದೆ ಎಂದು ಮೆಸ್ಕಾಂ ತಾಂತ್ರಿಕ ವಿಭಾಗದ ನಿರ್ದೇಶಕ ರಾಮಕೃಷ್ಣ ಅವರು ಮಾಹಿತಿ ನೀಡಿದ್ದಾರೆ. [ವಿದ್ಯುತ್ ಸಮಸ್ಯೆ ಏಕೆ, ನಿವಾರಣೆ ಹೇಗೆ?]
ವಿದ್ಯುತ್ ಕಳ್ಳತನ ಪತ್ತೆ ಹಚ್ಚಿ ದಂಡ ವಿಧಿಸಲು ಜಾಗ್ರತ ದಳ ಪೊಲೀಸರು ಕಾರ್ಯಾಚರಣೆ ನಡೆಸುತ್ತಾರೆ . ಇವರು ಒಂದೆಡೆ ದಂಡ ಹೇರಿದರೆ ಮತ್ತೊಂದೆಡೆ ವಿದ್ಯುತ್ ಕಳ್ಳತನ ಸರಾಗವಾಗಿ ನಡೆಯುತ್ತದೆ. ಇದರಲ್ಲಿ ಮೆಸ್ಕಾಂ ಅಧಿಕಾರಿಗಳ ಭ್ರಷ್ಟಾಚಾರವೂ ಅಡಗಿದೆ ಎಂಬ ಆರೋಪವೂ ಇದೆ.
ಅಚ್ಚರಿಯ ವಿಷಯವೆಂದರೆ ಜಿಲ್ಲೆಯಲ್ಲಿ ಲೋಡ್ ಶೆಡ್ಡಿಂಗ್ ಜಾರಿಯಲ್ಲಿದ್ದರೂ ಕೆಲವು ಪ್ರತಿಷ್ಠತ ಪ್ರದೇಶಗಳಲ್ಲಿ ನಿರಂತರವಾಗಿ ವಿದ್ಯುತ್ ಪೂರೈಕೆಯಾಗುತ್ತಿದೆ ಮತ್ತು ವಿದ್ಯುತ್ ಕೃತಕ ಅಭಾವ ಸೃಷ್ಠಿಸಿ ಸರ್ಕಾರವೇ, ಪ್ರಸ್ತಾವಿತ ಉಷ್ಣ ವಿದ್ಯುತ್ ಸ್ಥಾವರಗಳ ಯೋಜನೆ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.