'ಧ್ವಜಕ್ಕಿಂತ ಮೊದಲು ನಾಡಿನ ಸಮಸ್ಯೆ ಬಗೆಹರಿಸಿ' ಮಂಗಳೂರಿಗರ ಒತ್ತಾಯ
ಮಂಗಳೂರು, ಜುಲೈ 21: ಅಧಿಕೃತ ನಾಡಧ್ವಜ ಹೊಂದುವ ವಿಚಾರವಾಗಿ ಈಗಾಗಲೇ ಪರ ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಧ್ವಜದ ವಿನ್ಯಾಸಗೊಳಿಸಿ ಮತ್ತು ಅದಕ್ಕಿರುವ ಕಾನೂನು ಮಾನ್ಯತೆಗಳ ಬಗ್ಗೆ ವರದಿ ನೀಡುವಂತೆ ಒಂಭತ್ತು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ.
ಈ ಮಧ್ಯೆ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ಮಂಗಳೂರು, ಕೊಡಗು ಜಿಲ್ಲೆಗಳಿಂದ ಪ್ರತ್ಯೇಕ ರಾಜ್ಯದ ಕೂಗು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಕನ್ನಡಕಟ್ಟೆ ಮಂಗಳೂರು ಇದರ ಸ್ಥಾಪಕ ಅಧ್ಯಕ್ಷ ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು ಹಾಗೂ ಜನಸಾಮಾನ್ಯರ ಅಭಿಪ್ರಾಯಗಳು ನಿಮ್ಮ ಮುಂದೆ.
ಮೊದಲು ರಾಜ್ಯದ ಸಮಸ್ಯೆ ಬಗೆಹರಿಸಿ
"ಕನ್ನಡ ಧ್ವಜ, ನಾಡು-ನುಡಿಯಲ್ಲಿ ಯಾವುದೇ ರಾಜಿ ಇಲ್ಲ. ನಮ್ಮ ರಾಜ್ಯದಲ್ಲಿ ಈಗಾಗಲೇ ಮಹಾದಾಯಿ, ಕಾವೇರಿ, ಹೀಗೆ ಹತ್ತು ಹಲವು ಹಲವಾರು ಸಮಸ್ಯೆಗಳಿವೆ. ಇದನ್ನು ಮೊದಲು ಎಲ್ಲರೂ ಕುಳಿತು ಬಗೆಹರಿಸುವ ಬದಲು ಧ್ವಜಕ್ಕಾಗಿ ಇಷ್ಟೆಲ್ಲಾ ರಾದ್ದಾಂತ ಮಾಡುವುದು ಸರಿಯಲ್ಲ," ಎನ್ನುತ್ತಾರೆ ಕನ್ನಡಕಟ್ಟೆ ಮಂಗಳೂರು ಇದರ ಸ್ಥಾಪಕ ಅಧ್ಯಕ್ಷ ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು.
ರಾಜಕೀಯ ತರುವುದು ದುರಾದೃಷ್ಟ
"ಹಾಗೆಂದು ನಾಡ ಧ್ವಜ ಬೇಡ ಎಂದಲ್ಲ. ಧ್ವಜ ಪಡೆಯುವುದು ದೊಡ್ಡ ವಿಷಯವಲ್ಲ. ಅದರ ಪಾವಿತ್ರ್ಯತೆಗೆ ಯಾವುದೇ ರೀತಿಯಲ್ಲಿ ಧಕ್ಕೆ ತರುವಂತಹ ಕೆಲಸವನ್ನು ಕನ್ನಡಿಗರಾಗಿ ಮಾಡಬಾರದು. ಜೊತೆಗೆ ರಾಷ್ಟ್ರಧ್ವಜದ ಜೊತೆಗೆ ಪೈಪೋಟಿ ನಡೆಸುವಂತ ಹಂತಕ್ಕೆ ಹೋಗಬಾರದು. ನಾಡಧ್ವಜ ಎಂಬುವುದು ನಾಡು-ನುಡಿಯ ವಿಚಾರ ಇದರಲ್ಲಿ ರಾಜಕೀಯ ತರುವುದು ದುರಾದೃಷ್ಟಕರ," ಎನ್ನುವುದು ಕುಲಾಲರ ಅಭಿಪ್ರಾಯ.
ಧ್ವಜದಿಂದ ಭಾಷಾಭಿಮಾನ ಹುಟ್ಟುವುದಿಲ್ಲ
"ಈಗಾಗಲೇ ಕನ್ನಡಪರ ಹೋರಾಟ ಬಣಗಳ ರೂಪದಲ್ಲಿ ಒಡೆದು ಹೋಳಾಗಿದೆ. ಈ ವಿಷಯ ಕನ್ನಡ ಹೆಸರಲ್ಲಿ ಇನ್ನಷ್ಟು ಸುಲಿಗೆಗೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ. ಇಂದು ರಾಜ್ಯಕ್ಕೆ ಕನ್ನಡ ಧ್ವಜ ಬೇಕು ಎನ್ನುವಾಗ ನಾಳೆ ಕೊಡಗು, ತುಳುನಾಡಿಗೂ ಧ್ವಜ ಕೇಳುತ್ತಾರೆ. ಕೇವಲ ಒಂದು ಧ್ವಜದಿಂದ ಭಾಷಾಭಿಮಾನ ಹುಟ್ಟುವುದಿಲ್ಲ ಬದಲಿಗೆ ಹುಟ್ಟಿನಿಂದಲೇ ರಕ್ತಗತವಾಗಿರಬೇಕು ಎಂಬುವುದು ನಮ್ಮ ಅಭಿಪ್ರಾಯ," ಎನ್ನುತ್ತಾರೆ ಅಣ್ಣಯ್ಯ ಕುಲಾಲ್.
ಕನ್ನಡದ ಬಾವುಟ ಕೇವಲ ಬಣ್ಣದ ಬಾವುಟವಲ್ಲ
"ಕನ್ನಡದ ಬಾವುಟ ಕೇವಲ ಬಣ್ಣದ ಬಾವುಟವಲ್ಲ. ಅದು ಕನ್ನಡಿಗರ ಭಾವೈಕ್ಯತೆಯ ಸಂಕೇತ. ನಮ್ಮ ಹಿರಿಯರು ಮಾಡಿಕೊಟ್ಟ ಹಳದಿ ಕೆಂಪು ಧ್ವಜ ನಮ್ಮೆಲ್ಲ ಕನ್ನಡಿಗರ ಏಕತೆಯ ಸಂಕೇತವೂ ಹೌದು. ಈಗ ಅದಕ್ಕೆಂದೇ ವಿಶಿಷ್ಟ ಸ್ಥಾನ ಕೇಳುವುದರಲ್ಲಿ ತಪ್ಪೇನೂ ಇಲ್ಲ. ನಮ್ಮ ಕನ್ನಡ ಮತ್ತು ಕರ್ನಾಟಕಕ್ಕೆ ಒಂದು ಧ್ವಜ ಇದ್ದರೆ ತಪ್ಪಲ್ಲ," ಎಂಬುದು ಮಂಗಳೂರಿನ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅನಿಲ್ ದಾಸ್ ಅವರ ಅಭಿಪ್ರಾಯ.
ಧ್ವಜದಿಂದ ಏನೂ ಆಗುವುದಿಲ್ಲ
"ಧ್ವಜ ಒಂದು ಸಂಕೇತ ಅಷ್ಟೇ, ಇದರಿಂದ ಭಾಷಾಭಿಮಾನ ಹುಟ್ಟುವುದಿಲ್ಲ. ಭಾಷಾಭಿಮಾನ ಎನ್ನುವುದು ನಮ್ಮ ದಿನನಿತ್ಯದ ಜೀವನದಲ್ಲಿ ಇರಬೇಕು. ರಾಷ್ಟ್ರಧ್ವಜವನ್ನು ಸ್ವಾತಂತ್ರ್ಯ, ಗಣರಾಜ್ಯೋತ್ಸವ ದಿನ ಸರ್ಕಾರಿ ಕಛೇರಿಗಳಲ್ಲಿ ನೆನಪು ಮಾಡಿಕೊಳ್ಳುವ ಈ ಕಾಲದಲ್ಲಿ, ನಾಡಧ್ವಜವು ಅದೇ ಸಾಲಿಗೆ ಸೇರಬಹುದು," ಎನ್ನುತ್ತಾರೆ ಆರ್ ಜೆ ಎರೋಲ್.
"ಅದರ ಬದಲು ಕನ್ನಡ ಶಾಲೆಗಳಿಗೆ ಹೆಚ್ಚಿನ ಆದ್ಯತೆ ನೀಡಿ. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವವರಿಗೆ ಉದ್ಯೋಗದಲ್ಲಿ ಮೊದಲ ಅವಕಾಶ ನೀಡಿ. ಉಳಿದ ರಾಜ್ಯದಲ್ಲಿರುವಂತೆ ನಾಡಭಾಷೆಗೆ ಮೊದಲ ಮಹತ್ವ ನೀಡಿ. ಇದರಿಂದ ಕನ್ನಡ ಉಳಿಯುತ್ತದೆ ಹೊರತು ಕೇವಲ ಒಂದು ಧ್ವಜದಿಂದಲ್ಲ" ಎನ್ನುತ್ತಾರೆ ಅವರು.
ಧ್ವಜ ಬೇಕು ಅದು ನಮ್ಮ ಸಂಕೇತ
"ನಮ್ಮ ದೇಶ, ಧರ್ಮವನ್ನು ಗುರುತಿಸಿಕೊಳ್ಳಲು ಹೇಗೆ ಒಂದು ಧ್ವಜ ಇದೆಯೋ ಅದೇ ರೀತಿ ನಾಡಿಗೂ ಒಂದು ಧ್ವಜ ನೀಡಿ. ಇದರಿಂದ ನಾವು ಕನ್ನಡಿಗರು ಅಂತ ಗುರುತಿಸಿಕೊಳ್ಳಬಹುದು. ಇದು ಈಗ ಆಗಬೇಕಾದುದಲ್ಲ. ಈ ಹಿಂದೆಯೇ ಆಗಬೇಕಾಗಿರುವ ವಿಷಯ. ಈಗಲಾದರೂ ಆಗಿದೆಯಲ್ಲ ಅದಕ್ಕೆ ಖುಷಿಪಡುವುದು ಬಿಟ್ಟು ಯಾಕೆ ವಿರೋಧ ಮಾಡುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ. ಇದಕ್ಕೆ ನಾವು ಪ್ರಾದೇಶಿಕ ಪಕ್ಷ ಅಂತ ಕರೆಸಿಕೊಳ್ಳುವ ಜೆಡಿಎಸ್ ಸಹ ಬೆಂಬಲ ವ್ಯಕ್ತಪಡಿಸುತ್ತಿಲ್ಲ ಎಂಬುವುದು ವಿಪರ್ಯಾಸದ ಸಂಗತಿ" ಎನ್ನುತ್ತಾರೆ ಅಶೋಕ್ ಎಸ್.ಎನ್.
ತುಳು ಭಾಷೆಗೂ ಮಾನ್ಯತೆ ನೀಡಿ
"ಕನ್ನಡ ನಮ್ಮ ನಾಡ ಭಾಷೆ. ಅದಕ್ಕೂ ಮೊದಲು ತುಳು ನಮ್ಮ ಮನೆ ಭಾಷೆ. ಇಂದಿಗೂ ಅದಕ್ಕೂ ಸಂವಿಧಾನಿಕ ಮಾನ್ಯತೆ ನೀಡುವತ್ತ ಸರಕಾರ ಗಮನ ಹರಿಸಿಲ್ಲ. ಈ ಬಗ್ಗೆ ಜಿಲ್ಲೆಯ ಸಂಸದರು, ಸಚಿವರು, ಶಾಸಕರುಗಳು ಪ್ರಯತ್ನ ನಡೆಸಬೇಕು. ಇದು ತುಳುವಿನ ಅಳಿವು ಉಳಿವಿನ ಪ್ರಶ್ನೆ. ಕನ್ನಡಕ್ಕೆ ಧ್ವಜಕ್ಕೆ ಮಾನ್ಯತೆ ನೀಡಿ ಅದರ ಜೊತೆ ಪ್ರಾದೇಶಿಕ ಭಾಷೆಗಳಾದ ಕೊಡವ, ತುಳು, ಕೊಂಕಣಿಗೂ ಆದ್ಯತೆ ನೀಡುವತ್ತ ಗಮನ ಹರಿಸಬೇಕು" ಎನ್ನುತ್ತಾರೆ ವೃತ್ತಿಯಿಂದ ವ್ಯಾಪಾರಿಯಾಗಿರುವ ಉಮೇಶ್.