ಬಿಸಿಲ ಬೇಗೆಯ ನಡುವೆ ಮಂಗಳೂರಲ್ಲಿ ಶುರುವಾಯಿತೇ ನೀರಿನ ದಂಧೆ ?
ಮಂಗಳೂರು, ಎಪ್ರಿಲ್ 1: ಮಂಗಳೂರು ಮತ್ತು ಬಂಟ್ವಾಳ ತಾಲೂಕನ್ನ ರಾಜ್ಯ ಸರ್ಕಾರ ಬರಪೀಡಿತ ತಾಲೂಕು ಎಂದು ಘೋಷಿಸಿದೆ. ಇದೇ ಬೆನ್ನಲ್ಲೇ ತುಂಬೆ ಹೊಸ ವೆಂಟೆಡ್ ಡ್ಯಾಂ ಮತ್ತು ಶಂಭೂರು ಎ.ಎಂ.ಆರ್. ಡ್ಯಾಂನಲ್ಲಿ ನೀರಿನ ಅಭಾವವಿದೆ ಎಂದು ಹೇಳಲಾಗಿತ್ತು. ಆದರೆ ಈ ಡ್ಯಾಂ ನಲ್ಲಿ ನೀರಿದೆ. ಧಾರಾಳವಾಗಿ ನೀರಿದ್ದರೂ ಮಂಗಳೂರು ನಗರದಲ್ಲಿ ಕೃತಕ ನೀರಿನ ಅಭಾವ ಸೃಷ್ಟಿಸಿ ಟ್ಯಾಂಕರ್ ಮಾಫಿಯಾದ ಮೂಲಕ ಹಣ ಗಳಿಸುವ ದಂಧೆಗೆ ಮನಪಾ ಆಡಳಿತ ಮತ್ತು ಅಧಿಕಾರಿಗಳು ನೆರವು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸದ್ಯದ ಸ್ಥಿತಿ ಹೇಗಿದೆ ?: ತುಂಬೆ ಡ್ಯಾಂನಲ್ಲಿ ಧಾರಾಳವಾಗಿ ಕುಡಿಯುವ ನೀರಿದ್ದರೂ ಮಂಗಳೂರಿಗೆ ಎರಡು ದಿನಗಳಿಗೊಮ್ಮೆ ನೀರು ಪೂರೈಸಬೇಕೆಂದು ಮಂಗಳೂರು ಮಹಾನಗರ ಪಾಲಿಕೆ ಹೇಳಿದೆ. ಈ ಆದೇಶದಿಂದ ಮಂಗಳೂರಿನಲ್ಲಿ ಕೃತಕ ನೀರಿನ ಅಭಾವ ಉಂಟಾಗಿದೆ. ಇದನ್ನೇ ಲಾಭವನ್ನಾಗಿಸಿರುವ ಟ್ಯಾಂಕರ್ ಮಾಲಕರು ತುಂಬೆ ಡ್ಯಾಂನಲ್ಲಿ ನೀರಿಲ್ಲ ಎಂಬ ಸುಳ್ಳನ್ನ ಹಬ್ಬಿಸಿ ಹೊಟೇಲ್, ಫ್ಲ್ಯಾಟ್, ಲಾಡ್ಜ್, ನಿರ್ಮಾಣ ಕೆಲಸಕ್ಕೆ ದುಪ್ಪಟ್ಟು ಹಣಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ತುಂಬೆ ವೆಂಟೆಡ್ ಡ್ಯಾಂನಲ್ಲಿ 5 ಮೀಟರ್ ನೀರಿದೆ. ಶಂಭೂರು ಎ.ಎಂ.ಆರ್. ಡ್ಯಾಂನಲ್ಲಿ 17.90 ಮೀಟರ್ ನೀರು ಇದೆ. ಪ್ರಸ್ತುತ ಎರಡೂ ಡ್ಯಾಂನಲ್ಲಿ ಸುಮಾರು 3 ರಿಂದ 4 ತಿಂಗಳಿಗೆ ಸಾಕಾಗಬಹುದಾದಷ್ಟು ನೀರಿದೆ.
ಹೊಸ ಡ್ಯಾಂನಲ್ಲಿ 5 ಮೀಟರ್ ನೀರಿದೆ. ಡ್ಯಾಂನಲ್ಲಿ ಧಾರಾಳ ನೀರಿದ್ದರೂ ಎರಡು ದಿನಗಳಿಗೊಮ್ಮೆ ನೀರು ಪೂರೈಸುವ ಮೂಲಕ ಕುಡಿಯುವ ನೀರು ಪೂರೈಸುವ ಟ್ಯಾಂಕರ್ ಮಾಫಿಯಾಕ್ಕೆ ನೆರವಾಗಲು ಮನಪಾ ಮಂಗಳೂರಿಗೆ ಎರಡು ದಿನಗಳಿಗೊಮ್ಮೆ ನೀರು ಪೂರೈಸುವ ನಿರ್ಧಾರವನ್ನು ಮನಪಾ ತೆಗೆದುಕೊಂಡಿರುವುದು ಯಾಕೆ..? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.