ಸಂಸ್ಕೃತಿ, ಪರಂಪರೆ ಸಾರಿದ ತುಳುವರೆ ಪರ್ಬ-2014
ಮಂಗಳೂರು, ಡಿ. 15: ನಗರದ ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ 'ವಿಶ್ವ ತುಳುವರೆ ಪರ್ಬ'ದ ಸಮಾರೋಪದಲ್ಲಿ ನಡೆದ ನಾಟಕ ಪ್ರದರ್ಶನಗಳು ಗಮನ ಸೆಳೆದವು ಮತ್ತು ಗಣ್ಯರಿಂದ ಶ್ಲಾಘಿಸಲ್ಪಟ್ಟವು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಸುರತ್ಕಲ್ ಬಂಟರ ಸಂಘದ ಕಲಾವಿದರಿಂದ ಪ್ರದರ್ಶನಗೊಂಡ ತುಳುನಾಡ್ದ ಪೊರ್ಲುತಿರ್ಲ್' ಪ್ರಹಸನ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರಿಂದ ಪ್ರಶಂಸೆಗೆ ಒಳಪಟ್ಟಿತು.[ಜಗತ್ತಿನೆಲ್ಲಡೆ ತುಳು ಭಾಷಾ ಸೊಗಡು ಬಿತ್ತಿದ ನಾಟಕಗಳು]
ಪೇಜಾವರ ಶ್ರೀಗಳು ಮಾತನಾಡಿ, ಇದನ್ನು ನೋಡೊದರೆ ನನಗೆ 80 ವರ್ಷಗಳ ಹಿಂದಿನ ನೆನಪಾಗುತ್ತದೆ. ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ವೇದಿಕೆಗಳಲ್ಲಿ ಪ್ರದರ್ಶಿಸುವ ಮೂಲಕ ನಮ್ಮತನ ಏನು ಎಂಬುದು ತಿಳಿಯುತ್ತದೆ ಎಂದರು.
ಡಾ. ವಿರೇಂದ್ರ ಹೆಗ್ಗಡೆ ಮಾತನಾಡಿ, ಎರಡು ಗಂಟೆಯಲ್ಲಿ ಮಾತನಾಡುವ ವಿಚಾರಗಳನ್ನು ಸುರತ್ಕಲ್ ಬಂಟರ ಸಂಘದವರು 40 ನಿಮಿಷದಲ್ಲಿ ಪ್ರದರ್ಶನದ ಮೂಲಕ ತೋರಿಸಿಕೊಟ್ಟರು ಎಂದು ಕಲಾವಿದರನ್ನು ಕೊಂಡಾಡಿದರು.
ಪರಶುರಾಮನ ಕೊಡಲಿ ಎಸೆಯುವ ಸನ್ನಿವೇಶದಿಂದ ಹಿಡಿದು ತುಳುನಾಡಿನ ವೀರ ಪುರುಷರನ್ನು ಸ್ಮರಿಸುವ ಮೂಲಕ ಈ ಪ್ರಾತ್ಯಕ್ಷಿಕೆ ಜನಮೆಚ್ಚುಗೆ ಪಡೆಯಿತು. ಕೃಷಿ ಕಾಯಕ, ತುಡರ್ಪರ್ಬ(ದೀಪಾವಳಿ)ನಾಗರಾಧನೆ, ಕುರಲ್ ಪರ್ಬ(ಕದಿರು ಕಟ್ಟುವ ಹಬ್ಬ) ಕೆಡ್ಡಸ, ದೈವಾರಾಧನೆ, ಯಕ್ಷಗಾನದ ಮೂಲಕ ದೇವಿ ಮಹಾತ್ಮೆ, ಗೋಪೂಜೆ, ಕೊಜಂಬು, ಕರ್ಪತ್ತನವು ಎಲ್ಲವೂ ವೇದಿಕೆಯಲ್ಲಿ ಪ್ರದರ್ಶನಗೊಂಡವು.[3ನೇ ಭಾಷೆಯಾಗಿ ತುಳು: ವಿದ್ಯಾರ್ಥಿಗಳ ಮೊದಲ ಪ್ರಯತ್ನ]
ಕೋಟಿ ಚೆನ್ನಯರು, ಕಾಂತಾಬಾರೆ, ಬೂದಾಬಾರೆ, ದೇವುಪೂಂಜೆ, ಗಂಡನ ಮನೆಯವರ ವಿರುದ್ಧ ಸಿಡಿದೆದ್ದು ತೊಟ್ಟಿಲ ಮಗುವಿನೊಂದಿಗೆ ಹೊರಟ ಕೆಚ್ಚೆದೆಯ ಸತ್ಯಾನಾಪುರದ ಸಿರಿ, ಅಪ್ರತಿಮ ಸಾಹಸಿಗ ಅಗೋಳಿಮಂಜಣ್ಣ, ಉಳ್ಳಾಲ ವೀರರಾಣಿಅಬ್ಬಕ್ಕನಂತಹ ತುಳುನಾಡಿನ ವೀರರನ್ನು ಸ್ಮರಿಸುವ ಮೂಲಕ ಈ ಪ್ರಾತ್ಯಕ್ಷಿಕೆ ನೆರದ ಪ್ರೇಕ್ಷಕರಿಂದ ಪ್ರಶಂಸೆಗೊಳಪಟ್ಟಿತು.
ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಮೋಹನ್ ಕೊಪ್ಪಳ ಸಂಯೋಜನೆಯಲ್ಲಿ ನವೀನ್ ಶೆಟ್ಟಿ ಅಳಕೆ ನಿರ್ದೇಶನ ನೀಡಿದ್ದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಶೆಟ್ಟಿ, ಉಪಾಧ್ಯಕ್ಷ ಸುಧಾಕರ ಪೂಂಜ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಲೀಲಾಧರ ಶೆಟ್ಟಿ ನೇತೃತ್ವದಲ್ಲಿ ತಂಡ ಭಾಗವಹಿಸಿತು. ರಾಜೇಶ್ವರಿ ಡಿ.ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.