ವಿನಾಯಕ ಬಾಳಿಗ ಹತ್ಯೆ, ನರೇಶ್ ಶೆಣೈಗೆ ಜಾಮೀನು
ಬೆಂಗಳೂರು, ಸೆಪ್ಟೆಂಬರ್ 15 : ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣದ ಆರೋಪಿ ನರೇಶ್ ಶೆಣೈಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದೆ. ಜೂನ್ 26ರಂದು ಉಡುಪಿಯಲ್ಲಿ ನರೇಶ್ ಶೆಣೈ ಬಂಧಿಸಲಾಗಿತ್ತು.
ಗುರುವಾರ ಕರ್ನಾಟಕ ಹೈಕೋರ್ಟ್ ನರೇಶ್ ಶೆಣೈಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಮಂಗಳೂರಿನ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಆಗಸ್ಟ್ 9ರಂದು ನರೇಶ್ ಶೆಣೈ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಆದ್ದರಿಂದ, ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.[ನರೇಶ್ ಶೆಣೈ ಜಾಮೀನು ಅರ್ಜಿ ವಜಾ]
2 ಲಕ್ಷ ರೂ.ಗಳ ಬಾಂಡ್, ಇಬ್ಬರ ಶ್ಯೂರಿಟಿ ಆಧಾರದ ಮೇಲೆ ಜಾಮೀನು ನೀಡಲಾಗಿದೆ. ಸಾಕ್ಷಿಗಳನ್ನು ನಾಶ ಮಾಡಬಾರದು ಎಂದು ಷರತ್ತು ವಿಧಿಸಿದೆ.[ಬಾಳಿಗ ಹತ್ಯೆ : 770 ಪುಟಗಳ ಚಾರ್ಜ್ ಶೀಟ್]
2016ರ ಮಾರ್ಚ್ 21ರಂದು ಮಂಗಳೂರಿನ ಕೊಡಿಯಾಲ್ ಬೈಲ್ ಬಳಿ ಆರ್ಟಿಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗ ಅವರ ಹತ್ಯೆ ನಡೆದಿತ್ತು. ಹತ್ಯೆಯ ಪ್ರಮುಖ ಆರೋಪಿ ನರೇಶ್ ಶೆಣೈ ಮೂರು ತಿಂಗಳಿನಿಂದ ತಲೆ ಮರೆಸಿಕೊಂಡಿದ್ದರು. ಜೂನ್ 26ರಂದು ಅವರನ್ನು ಬಂಧಿಸಲಾಗಿತ್ತು.
ಆಘಾತಕಾರಿ ತೀರ್ಪು : ಒನ್ ಇಂಡಿಯಾ ಕನ್ನಡ ಜೊತೆ ಮಾತನಡಿದ ಡಿವೈಎಫ್ಐ ಅಧ್ಯಕ್ಷ ಮುನೀರ್ ಕಟಿಪಾಲ ಅವರು,'ನರೇಶ್ ಶೆಣೈ ಅವರಿಗೆ ಜಾಮೀನು ಸಿಕ್ಕಿದ್ದು ನಿಜಕ್ಕೂ ಆಘಾತಕಾರಿ. ಇದರಲ್ಲಿ ಗೃಹ ಇಲಾಖೆಯ ವೈಫಲ್ಯ ಕಂಡು ಬರುತ್ತಿದೆ' ಎಂದು ಹೇಳಿದರು.