ಯೋಧ ಏಕನಾಥ ಶೆಟ್ಟಿ ಸಮವಸ್ತ್ರ ಕುಟುಂಬಕ್ಕೆ ಹಸ್ತಾಂತರ
ಮಂಗಳೂರು, ಅಕ್ಟೋಬರ್, 28: ಗುರುವಾಯನಕರೆಯ ಯೋಧ ಏಕನಾಥ ಶೆಟ್ಟಿಯವರ ಸುಳಿವು ಸಿಗದಿರುವ ಹಿನ್ನಲೆಯಲ್ಲಿ ಅವರ ಸೇನಾ ಸಮವಸ್ತ್ರವನ್ನು ಸಕಲ ಸೇನಾ ಗೌರವಗಳೊಂದಿದೆ ಶುಕ್ರವಾರ (ಅ.28) ಬೆಳಿಗ್ಗೆ ಮಂಗಳೂರಿನ ಪೊಲೀಸ್ ಮೈದಾನಕ್ಕೆ ತರಲಾಯಿತು.
ಏಕನಾಥ್ ಶೆಟ್ಟಿಯವರು ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು, ಚೆನ್ನೈಯಿಂದ ಪೋರ್ಟ್ ಬ್ಲೇರ್ಗೆ ತೆರಳುತ್ತಿದ್ದ ವಾಯುಸೇನೆಯ ಎಎನ್- 32 ವಿಮಾನ ಜುಲೈ 22ರಂದು ನಾಪತ್ತೆಯಾಗಿತ್ತು. ಆ ವಿಮಾನದಲ್ಲಿ ಶೆಟ್ಟಿಯವರು ಕೂಡ ಇದ್ದರು.
ನಾಪತ್ತೆಯಾಗಿದ್ದ 29 ಸೈನಿಕರಲ್ಲಿ ಏಕನಾಥ ಶೆಟ್ಟಿ ಕೂಡಾ ಒಬ್ಬರಾಗಿದ್ದರು. ಸೇನೆ ವಿಮಾನಕ್ಕಾಗಿ ಸತತ ಹುಡುಕಾಟ ನಡೆಸುತ್ತಿತ್ತು. ಆದರೆ ಸಮುದ್ರದಲ್ಲಿ ಯೋಧರ ಮೃತದೇಹಗಳಾಗಲಿ ವಿಮಾನದ ಕುರುಹುಗಳಾಗಲಿ ಇದುವರೆಗೆ ಕಂಡು ಬಂದಿಲ್ಲ. ಈ ಕಾರಣದಿಂದ ಯೋಧರು ಮೃತಪಟ್ಟಿದ್ದಾರೆ ಎಂದು ಸೇನೆ ಘೋಷಿಸಿದೆ.
ಇಂದು ಬೆಳಿಗ್ಗೆ ಯೋಧ ಏಕನಾಥ ಶೆಟ್ಟರ ಸಮವಸ್ತ್ರ , ಶೂ, ಟವೆಲ್ ಹಾಗೂ ಇತರ ಸಂಬಂಧಪಟ್ಟ ಸ್ವತ್ತುಗಳನ್ನು ಒಂದು ಬಾಕ್ಸ್ನಲ್ಲಿ ಪ್ಯಾಕ್ ಮಾಡಿ ಬೆಳಿಗ್ಗೆ 8.೦೦ ಗಂಟೆಯ ವೇಳೆಗೆ ಮಂಗಳೂರು ರೈಲು ನಿಲ್ದಾಣಕ್ಕೆ ತರಲಾಗಿದೆ.
ನಂತರ ಆ ಬಾಕ್ಸನ್ನು ಎಸ್ಪಿ ಕಚೇರಿಗೆ ತರಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಎಸ್ಪಿ ಭೂಷಣ್ ಬೋರಸೆ, ಎಸಿಪಿ ಉದಯ ನಾಯಕ್ ಯೋಧರಿಗೆ ತಮ್ಮ ಗೌರವ ಅರ್ಪಿಸಲು ಎಸ್ಪಿ ಕಚೇರಿಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ''ಅನೇಕ ಸೈನಿಕರು ದೇಶಕ್ಕಾಗಿ ತಮ್ಮ ಜೀವನವನ್ನು ಅರ್ಪಿಸಿಕೊಂಡಿದ್ದಾರೆ ಅವರಲ್ಲಿ ಏಕನಾಥ ಶೆಟ್ಟಿ ಕೂಡಾ ಒಬ್ಬರಾಗಿದ್ದಾರೆ.
ಯೋಧ ಏಕನಾಥ ಶೆಟ್ಟಿ ನಿವೃತ್ತರಾದ ಬಳಿಕವೂ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಮರಣ ಹೊಂದಿದ್ದಾರೆ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ ಆದರೆ ಅವರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ '' ಎಂದು ಹೇಳಿದರು.
ಪೊಲೀಸ್ ಮೈದಾನದಲ್ಲಿ ಸಕಲ ಗೌರವಗಳನ್ನು ಅರ್ಪಿಸಿದ ಬಳಿಕ ಯೋಧ ಏಕನಾಥ ಶೆಟ್ಟರ ಸೇನಾ ಸಮಸ್ತ್ರವನ್ನು ಅವರ ಹುಟ್ಟೂರು ಗುರುವಾಯನಕೆರೆಗೆ ಕಳುಹಿಸಲಾಗಿದೆ. ನಂತರ ಯೋಧ ಏಕನಾಥ ಶೆಟ್ಟರ ಸಮವಸ್ತ್ರವನ್ನು ಅವರ ಮನೆಯವರಿಗೆ ಹಸ್ತಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
1985 ರಲ್ಲಿ ಭಾರತೀಯ ಭೂ ಸೇನೆಗೆ ಸೇರ್ಪಡೆಯಾದ ಏಕನಾಥ ಶೆಟ್ಟಿ (48) ಅವರು ಎಮ್ಆರ್ ಸಿಗೆ ಸೇರಿಕೊಂಡಿದ್ದರು. ಸೇನೆಯಲ್ಲಿ ಸುಬೇದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. 1986ರಲ್ಲಿ ಶ್ರೀಲಂಕಾದಲ್ಲಿ ಭಾರತೀಯ ಶಾಂತಿ ಪಾಲನಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅದಲ್ಲದೆ ಜಮ್ಮು ಕಾಶ್ಮೀರ, ಪಂಜಾಬ್ , ಅರುಣಾಚಲ ಮುಂತಾದೆಡೆ ಸೇವೆ ಸಲ್ಲಿಸಿದ್ದರು. 2009 ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.
ಯೋಧ ಏಕನಾಥ ಶೆಟ್ಟಿ ನಿವೃತ್ತರಾದ ಬಳಿಕವೂ ಮೂರೇ ತಿಂಗಳಲ್ಲಿ ಅವರು ವಾಯುಸೇನೆಯ ಡಿಫೆನ್ಸ್ ಸೆಕ್ಯೂರಿಟಿ ಫೋರ್ಸ್ಗೆ ಸೇರಿಕೊಂಡರು. ಕಣ್ಣೂರಿನಲ್ಲಿ ತರಬೇತಿ ಮುಗಿಸಿ ಕಾನ್ಪುರ, ಗೋವಾದಲ್ಲಿ ಸೇವೆ ಸಲ್ಲಿಸಿ ಇದೀಗ ಕಳೆದ 2 ವರ್ಷಗಳಿಂದ ಪೋರ್ಟ ಬ್ಲೇರ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
2017ರ ಜನವರಿಯಲ್ಲಿ ಬೆಂಗಳೂರಿಗೆ ವರ್ಗಾವಣೆಯಾಗುವವರಿದ್ದರು. ಆದರೆ ಸುಳಿವೇ ಸಿಗದೆ ಹೋದ ಕಾರಣದಿಂದ ಯೋಧರು ಮೃತಪಟ್ಟಿದ್ದಾರೆ ಎಂದು ಸೇನೆ ಘೋಷಿಸಿದೆ.