ಮಂಗ್ಳೂರು: ಸಿಬ್ಬಂದಿಗೆ ಚೆಳ್ಳೆ ಹಣ್ಣು ತಿನ್ನಿಸಿ ಜೈಲಿನಿಂದ ಪರಾರಿಯಾಗಿದ್ದ ಕೈದಿ ಸೆರೆ
ಮಂಗಳೂರು, ಮಾರ್ಚ್. 14 : ಇತ್ತೀಚೆಗೆ ಮಂಗಳೂರು ಕೇಂದ್ರ ಕಾರಗೃಹದ ಸಿಬ್ಬಂದಿಗೆ ಚೆಳ್ಳೆ ಹಣ್ಣು ತಿನ್ನಿಸಿ ಜೈಲಿನಿಂದ ಪರಾರಿಯಾಗಿದ್ದ ಕೈದಿಯನ್ನು ಸುಳ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಬೆಳ್ತಂಗಡಿ ತಾಲ್ಲೂಕಿನ ಗರ್ಡಾಡಿ ಗ್ರಾಮದ ಬೋಳ್ಕಲ್ ನ ಜಿನ್ನಪ್ಪ ಪರವ (43) ಮಾರ್ಚ್ 10 ರಂದು ಶುಕ್ರವಾರ ಬೆಳಗ್ಗೆ ವಿಚಾರಣಾಧೀನ ಮಂಗಳೂರು ಕಾರಗೃಹದಿಂದ ಪರಾರಿಯಾಗಿದ್ದ.[ವಿಚಾರಣಾಧೀನ ಮಂಗಳೂರು ಕೇಂದ್ರ ಕಾರಾಗೃಹದಿಂದ ಕೈದಿ ಎಸ್ಕೇಪ್!]
ಏಳು ದಿನಗಳ ಬಳಿಕ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶ್ವಿಯಾಗಿದ್ದಾರೆ. ಆರೋಪಿಯನ್ನು ಮುಂದಿನ ತನಿಖೆಗಾಗಿ ಬರ್ಕೆ ಪೊಲೀಸರಿಗೆ ವರ್ಗಾಯಿಸಲಾಗಿದೆ.
ಬೆಳಗಾವಿ ಡಿಐಜಿ ಟಿ ಪಿ ಶೇಷ ನೇತೃತ್ವದ ತಂಡ ಭಾನುವಾರ ಜೈಲಿಗೆ ಭೇಟಿ ನೀಡಿ ತನಿಖೆ ನಡೆಸಿತು. ಇದರಂತೆ ಸತತ ಹುಡುಕಾಟ ನಡೆಸಿದ ಇನ್ಸ್ ಪೆಕ್ಟರ್ ಸತೀಶ್ ಕುಮಾರ್ ನೇತೃತ್ವದ ತಂಡ ಕೈದಿಯನ್ನು ಸುಳ್ಯದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬೆಳ್ತಂಗಡಿ ತಾಲ್ಲೂಕಿನ ಗರ್ಡಾಡಿ ಗ್ರಾಮದ ಬೋಳ್ಕಲ್ ನ ಜಿನ್ನಪ್ಪ ಪರವ ಪೋಕ್ಸೊ ಪ್ರಕರಣ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪದ ಮೇಲೆ ಈತನನ್ನು ಬಂಧಿಸಿ, 2015ರಿಂದ ಕಾರಾಗೃಹದಲ್ಲಿ ಇರಿಸಲಾಗಿತ್ತು.