ಉಳ್ಳಾಲ ಪೌರಾಯುಕ್ತರೇ ಏನಿದು ಕಚೇರಿಯಲ್ಲೇ ಬರ್ತ್ ಡೇ ಪಾರ್ಟಿ!
ಉಳ್ಳಾಲ ನಗರಸಭೆ ಸಿಬ್ಬಂದಿಗಳು ಕಚೇರಿ ಸಮಯದಲ್ಲಿ ಪೌರಯುಕ್ತೆ ವಾಣಿ ಅಳ್ವ ಅವರ ಹುಟ್ಟು ಹಬ್ಬ ಆಚರಣೆ ಮಾಡಿದ್ದಾರೆ. ಇಂತಹ ಖಾಸಗಿ ಕಾರ್ಯಕ್ರಮಗಳನ್ನು ಕಚೇರಿಯಲ್ಲಿ ಆಚರಿಸುವುದು ಎಷ್ಟು ಸರಿ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಉಳ್ಳಾಲ, ಜನವರಿ. 04 : ಅನೇಕ ವಿರೋಧಗಳ ನಡುವೆಯೂ ಸಚಿವ ಯು.ಟಿ ಖಾದರ್ ಕೃಪಕಟಾಕ್ಷದಿಂದ 'ಏನಾಗಲಿ ಮುಂದೆ ಸಾಗು ನೀ' ಎಂಬಂತೆ ಉಳ್ಳಾಲ ನಗರಸಭೆಗೆ ನಿಯೋಜನೆಗೊಂಡ ಕಳಂಕಿತೆ ಪೌರಾಯುಕ್ತೆ ವಾಣಿ ಆಳ್ವ ಅವರು ಇದೀಗ ಮತ್ತೊಂದು ಯಡವಟ್ಟು ಮಾಡಿದ್ದಾರೆ.
ಹೌದು. ಜನಸಾಮಾನ್ಯರ ಸೇವೆಗೆಂದು ನಿಯೋಜನೆಗೊಂಡ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಕರ್ತವ್ಯ ಸಮಯವನ್ನು ಹರಣ ಮಾಡಿ ಸೋಮವಾರದಂದು ವಾಣಿ ಆಳ್ವರು ತಮ್ಮ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ನಗರಸಭೆಯ ಕೌನ್ಸಿಲ್ ಮೀಟಿಂಗ್ ಸಭಾಂಗಣದಲ್ಲಿ ಆಚರಿಸಿಕೊಂಡಿದ್ದಾರೆ.
ಈಗ ಆ ಕಾರ್ಯಕ್ರಮದ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ವೈರಲ್ ಆಗಿದೆ. ಬರ್ತ್ ಡೇಯಂತಹ ಖಾಸಗಿ ಕಾರ್ಯಕ್ರಮವನ್ನು ಅಧಿಕಾರಿಯೋರ್ವರು ಅವರ ಮನೆಯಲ್ಲೋ, ಸಭಾಂಗಣದಲ್ಲೋ ಆಚರಿಸಿದರೆ ಯಾರಿಗೇನೂ ನಷ್ಟವಿಲ್ಲ. [ಉಳ್ಳಾಲ ಪೌರಾಯುಕ್ತೆಯ ಮಗ ಸರಗಳ್ಳತನ ಕೇಸಲ್ಲಿ ಕಂಬಿ ಹಿಂದೆ]
ಆದರೆ, ಅಧಿಕಾರ ದುರುಪಯೋಗಪಡಿಸಿ ಕರ್ತವ್ಯದ ಸಮಯದಲ್ಲೇ ಮೇಲಾಗಿ ಸರಕಾರಿ ಕಚೇರಿಯಲ್ಲಿ ಬರ್ತ್ ಡೇ ಆಚರಿಸಿದ್ದು ಎಷ್ಟು ಸರಿ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಇನ್ನು ಜನರ ಸೇವೆ ಮಾಡುತ್ತೇನೆಂದು ಆಯ್ಕೆಯಾಗಿರುವ ನಗರಸಭೆ ವಿರೋಧ ಪಕ್ಷದ ನಾಯಕಿ ಮಹಾಲಕ್ಷ್ಮೀ ಅವರೂ ತಮ್ಮ ಜವಬ್ದಾರಿ ಮರೆತು ಈ ಬರ್ತ್ ಡೇ ಆಚರಣೆಯಲ್ಲಿ ಕೇಕ್ ತಿಂದು ಸಂಭ್ರಮ ಆಚರಿಸಿದ್ದಾರೆ.
ಹುಬ್ಬ ಹಬ್ಬ ಕಾರ್ಯಕ್ರಮ ಮಾಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿ ಮುಂದಿನ ದಿವಸಗಳಲ್ಲಿ ಇಲ್ಲಿ ಮದುವೆ, ನಿಶ್ಚಿತಾರ್ಥಗಳನ್ನು ಮಾಡಿದರೂ ಆಶ್ಚರ್ಯ ಪಡಬೇಕಿಲ್ಲ.
ಈ ಹಿಂದೆ ಉಳ್ಳಾಲದಲ್ಲಿ ಅಧಿಕಾರದಲ್ಲಿದ್ದ ಸಂಧರ್ಭದಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪ ಹೊತ್ತ ಕಳಂಕಿತ ಪೌರಾಯುಕ್ತೆಯನ್ನೇ ಮತ್ತೆ ನಿಯೋಜಿಸಿದ ಸಚಿವ ಖಾದರ್ ಅವರೇ ವಾಣಿ ಅವರ ಈ ಎಲ್ಲಾ ಅಡ್ಡ ಕಸುಬುಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ಜಿಲ್ಲೆಯ ಜಿಲ್ಲಾಧಿಕಾರಿ ರಬ್ಬರ್ ಸ್ಟಾಂಪ್ ತರ ವರ್ತಿಸುತ್ತಿದ್ದು, ಪೌರಾಯುಕ್ತೆ ವಿರುದ್ಧ ನೀಡಿರುವ ಎಲ್ಲಾ ದೂರುಗಳನ್ನು ಅಲ್ಲಗಳೆದು ಸಮ್ಮನೆ ಕೈಕಟ್ಟಿ ಕುಳಿತಿದ್ದಾರೆ.