ಬ್ರಹ್ಮಾವರದ ಯಕ್ಷಗಾನ ಮಂಡಳಿಗೆ ಸುವರ್ಣ ಮಹೋತ್ಸವ ಸಂಭ್ರಮ
ಉಡುಪಿ, ಜು. 31: ಬ್ರಹ್ಮಾವರದ ಜನಪ್ರಿಯ ಮಟಪಾಡಿ ಶ್ರೀನಂದಿಕೇಶ್ವರ ಯಕ್ಷಗಾನ ಕಲಾಮಂಡಳಿಗೆ ಸುವರ್ಣ ಮಹೋತ್ಸವ ಸಂಭ್ರಮ. ಈ ಸಂಭ್ರಮವನ್ನು ಹಬ್ಬದ ರೀತಿಯಲ್ಲಿ ಆಚರಿಸಲು ಕಲಾ ಮಂಡಳಿ ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಲಾ ಮಂಡಳಿ ಪ್ರಧಾನ ಕಾರ್ಯದರ್ಶಿ ತೋನ್ಸೆ ಜಯಂತ್ ಕುಮಾರ್ , ಸಮುದಾಯ ಭವನ ನಿರ್ಮಾಣ ಸೇರಿದಂತೆ ಸುಮಾರು 30ಲಕ್ಷ ರು.. ವೆಚ್ಚದ ವಿವಿಧ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.[ನಿಜ ಯಕ್ಷ ಪ್ರೇಕ್ಷಕರ ತಲುಪಿದ 'ಪದ ಕೇಳ್ವಾ ಬನ್ನಿ']
ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಕ್ರೀಡೋ ತ್ಸವ, ವೈದ್ಯಕೀಯ ಶಿಬಿರ, ತಾಳಮದ್ದಳೆ, ಯಕ್ಷಗಾನಗೋಷ್ಠಿ, ವೇಷಭೂಷಣ- ಮುಖವರ್ಣಿಕೆ ಕಮ್ಮಟ, ಯಕ್ಷಗಾನ ಬಯಲಾಟ, ಹಿರಿಯ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಆ.2ರಂದು ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಅಂಬಲಪಾಡಿ ದೇವಳದ ಧರ್ಮ ದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ನೆರವೇರಿಸಲಿರುವರು. ಅಧ್ಯಕ್ಷತೆಯನ್ನು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ವಹಿಸಲಿರುವರು ಎಂದು ಮಾಹಿತಿ ನೀಡಿದರು.[ಸುವರ್ಣ ಸುಯೋಧನನಿಗೆ ತಲೆದೂಗಿದ ಪ್ರಬುದ್ಧ ಪ್ರೇಕ್ಷಕ]
ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಗುರು ದಿ.ತೋನ್ಸೆ ಕಾಂತಪ್ಪ ಮಾಸ್ತರ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ, ಯಕ್ಷಗಾನ ಕಲಾವಿದ ಮಟಪಾಡಿ ಗುರು ವೀರಭದ್ರ ನಾಯಕ್ ಸಂಸ್ಮರಣೆ- ಪ್ರಶಸ್ತಿ ಪ್ರದಾನ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಕಲ್ಕೂರ, ಕಾರ್ಯಾಧ್ಯಕ್ಷ ಎಂ. ಸೂರ್ಯನಾರಾಯಣ ಗಾಣಿಗ, ಕಾರ್ಯದರ್ಶಿ ಮಟಪಾಡಿ ಸ್ಯಾಂಸನ್ ಸಿಕ್ವೇರ ಹಾಗೂ ಸರ್ಪು ಸದಾನಂದ ಪಾಟೀಲ್ ಮುಂತಾದವರು ಹಾಜರಿದ್ದರು.