ಚಪ್ಪಲಿಯಲ್ಲಿ ಹೊಡೆಯಬೇಕು, ಖಾದರ್ ಹೇಳಿಕೆ ವಿರುದ್ದ ತಿರುಗಿ ಬಿದ್ದ ಹಿಂದೂ ಸಂಘಟನೆಗಳು
ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಖಾದರ್ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರು ತಿರುಗಿ ಬಿದ್ದಿದ್ದು, ಕೊಲ್ಯದಲ್ಲಿ ಕಾರ್ಯಕ್ರಮಕ್ಕೆ ಭೇಟಿ ನೀಡಲಿದ್ದ ಸಚಿವರ ವಿರುದ್ಧ ಘೋಷಣೆ ಕೂಗಿ, ಕರಿಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭೇಟಿ ವಿರೋಧಿಸಿದವರು, ಪಿಣರಾಯಿಯವರ ಚಪ್ಪಲಿಗೂ ಸಮಾನರಲ್ಲ. ದೇಶಕ್ಕೆ ಅಂಬೇಡ್ಕರ್ ನೀಡಿರುವ ಸಂವಿಧಾನವನ್ನು ಗೌರವಿಸದವರನ್ನು ಚಪ್ಪಲಿಯಲ್ಲಿ ಹೊಡೆಯಬೇಕು ಅಂತ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು. ಟಿ. ಖಾದರ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಇದೀಗ ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಖಾದರ್ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರು ತಿರುಗಿ ಬಿದ್ದಿದ್ದಾರೆ. ಭಾನುವಾರ ಕೊಲ್ಯದಲ್ಲಿ ಕಾರ್ಯಕ್ರಮಕ್ಕೆ ಭೇಟಿ ನೀಡಲಿದ್ದ ಸಚಿವರ ವಿರುದ್ಧ ಘೋಷಣೆ ಕೂಗಿ, ಕರಿಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.[ಸಾರ್ವಜನಿಕ ಆಸ್ತಿ ನಷ್ಟವನ್ನು ಬಂದ್ ಕರೆ ಕೊಟ್ಟವರಿಂದಲೇ ವಸೂಲಿ: ರೈ]
ಕೊಲ್ಯ ಶಾರದಾ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಸಚಿವ ಯು.ಟಿ.ಖಾದರ್ ಮುಖ್ಯ ಅತಿಥಿಯಾಗಿದ್ದರು. ಈ ವಿಚಾರ ತಿಳಿದ ಹಿಂದೂ ಸಂಘಟನೆಯ 100 ಕ್ಕೂ ಅಧಿಕ ಕಾರ್ಯಕರ್ತರು ಸಂಜೆ 5.30ರಿಂದ ಕಪ್ಪು ಬಾವುಟ ಹಿಡಿದು ಜಮಾಯಿಸಿದ್ದರು.[ಗಾಂಧಿ ಹತ್ಯೆಯನ್ನು ಸಂಭ್ರಮಿಸಿದವರಿಂದ ದೇಶಭಕ್ತಿ ಕಲಿಯಬೇಕಿಲ್ಲ: ಕೇರಳ ಸಿಎಂ]
ಎರಡು ಗಂಟೆಗಳವರೆಗೆ ರಸ್ತೆಬದಿಯೇ ಸಚಿವರ ಆಗಮನಕ್ಕಾಗಿ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡರು ಕಾದಿದ್ದಾರೆ. ಈ ವೇಳೆ ಸಚಿವ ಖಾದರ್ ಬೆಂಗಳೂರಿಗೆ ತೆರಳಿದ ವಿಚಾರ ತಿಳಿದು ಅವರ ವಿರುದ್ಧ ಘೋಷಣೆ ಕೂಗಿ ಬಂದ ದಾರಿಗೆ ಸುಂಕವಿಲ್ಲವೆಂದು ಸ್ಥಳದಿಂದ ತೆರಳಿದ್ದಾರೆ. ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಬಂದೋಬಸ್ತ್ ಏರ್ಪಡಿಸಿದ್ದರು.[ಸಂವಿಧಾನ ಗೌರವಿಸದವರನ್ನು ಚಪ್ಪಲಿಯಲ್ಲಿ ಹೊಡೆಯಬೇಕು -ಖಾದರ್]
ಇನ್ನು ಒನ್ ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯು ಟಿ ಖಾದರ್ , ಸಂವಿಧಾನಾತ್ಮಕವಾಗಿ ಆಯ್ಕೆಯಾದ ನೆರೆ ರಾಜ್ಯದ ಮುಖ್ಯಮಂತ್ರಿಗಳು, ಅದರಲ್ಲೂ 70 ವರ್ಷದ ಹಿರಿಯರು ಗೌರವಾನ್ವಿತ ಸ್ಥಾನದಲ್ಲಿರುವವರು ಜಿಲ್ಲೆಗೆ ಬರುವ ಸಂದರ್ಭದಲ್ಲಿ, ಗೊಂದಲ ಸೃಷ್ಟಿಸಿ ಜಿಲ್ಲೆಯ ಗೌರವ ಮತ್ತು ಸಂಸ್ಕೃತಿಗೆ ಧಕ್ಕೆಯಾದ ನೋವಿನಿಂದ ನನ್ನ ಭಾವನೆಗಳನ್ನು ಸ್ವಯಂ ಆಗಿ ವ್ಯಕ್ತಪಡಿಸಿದ್ದೇನೆ. ಇದು ಯಾರನ್ನೂ ಅವಮಾನ ಮಾಡುವ ಉದ್ದೇಶದಿಂದ ಮಾತನಾಡಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.