ಉಳ್ಳಾಲದಲ್ಲಿ ತುಮಕೂರಿನ ಇಬ್ಬರು ಯುವಕರು ಸಮುದ್ರಪಾಲು
ಉಳ್ಳಾಲ, ಜೂನ್ 28: ಆಟವಾಡಲೆಂದು ಸಮುದ್ದಕ್ಕಿಳಿದಿದ್ದ ತುಮಕೂರು ಮೂಲದ ಇಬ್ಬರು ಯುವಕರು ಸಮುದ್ರಪಾಲಾದ ಘಟನೆ ಮಂಗಳೂರಿನ ಉಳ್ಳಾಲದ ಮೊಗವೀರ ಪಟ್ಣ ಬೀಚಿನಲ್ಲಿ ನಡೆದಿದೆ.
ಒಬ್ಬರು ಸಾವನ್ನಪ್ಪಿದ್ದು ಇನ್ನೊಬ್ಬರು ನೀರು ಪಾಲಾಗಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿವಾಸಿಗಳಾದ ಅಯಾಝ್ ಯಾನೆ ಚೋಟು(19) ಹಾಗೂ ಶಾರೂಕ್ (19) ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾದವರಾಗಿದ್ದಾರೆ.
ಸುಮಾರು 10 ಮಂದಿ ಸಂಬಂಧಿಕರು ಇಂದು ಬೆಳಗ್ಗೆ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದ್ದರು. ಬಳಿಕ ಇವರು ಮೊಗವೀರಪಟ್ನದ ಸಮುದ್ರ ಕಿನಾರೆಗೆ ತೆರಳಿದ್ದರು. ಈ ವೇಳೆ ಸಮುದ್ರದಲ್ಲಿ ಸ್ನಾನಕ್ಕಿಳಿದಿದ್ದ ಕೆಲವರ ಪೈಕಿ ಅಯಾಝ್ ಮತ್ತು ಶಾರೂಕ್ ಬೃಹತ್ ಅಲೆಗಳ ಅಬ್ಬರಕ್ಕೆ ಸಿಲುಕಿದ್ದರು.
ಇದೇ ವೇಳೆ ಸಮುದ್ರಪಾಲಾಗುತ್ತಿದ್ದ ಇನ್ನಿಬ್ಬರನ್ನು ಸ್ಥಳೀಯರು ರಕ್ಷಿಸಿದ್ದು, ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಪತ್ತೆಯಾದ ಓರ್ವನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಕಳೆದ ಕೆಲವು ದಿನಗಳಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಬೃಹತ್ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ.