ಬಂಟ್ವಾಳದಲ್ಲಿ ಯುವಕರ ಮೇಲೆ ಮಾರಣಾಂತಿಕ ಹಲ್ಲೆ
ಮಂಗಳೂರು, ಡಿಸೆಂಬರ್, 19 : ಇಬ್ಬರು ಯುವಕರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿ ಸೋಮವಾರ ಸಂಜೆ ನಡೆದಿದೆ.
ಮದುವೆ ಕಾರ್ಯಕ್ರಮ ಮುಗಿಸಿ ಸಿನಾನ್ ಪೆರ್ಲ ಹಾಗೂ ಮುಹಮ್ಮದ್ ಜುನೈದ್ ಎಂಬುವವರು ಮನೆಗೆ ಹೋಗುತ್ತಿದ್ದರು. ಈ ವೇಳೆ ಕಲ್ಪನೆ ಎಂಬಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾರೆ. [ಮಂಗಳೂರಲ್ಲಿ ಮುಸ್ಲಿಂ ಮಹಿಳೆಯರ ಬೃಹತ್ ಸಮಾವೇಶ]
ಗಂಭೀರವಾಗಿ ಗಾಯಗೊಂಡ ಈ ಇಬ್ಬರು ಯುವಕರನ್ನ ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಠಳಕ್ಕೆ ಪಾಪ್ಯುಲರ್ ಫ್ರಂಟ್ ಬಂಟ್ವಾಳ ಪ್ರಧಾನ ಕಾರ್ಯದರ್ಶಿ ಸಲೀಮ್ ಫರಂಗಿಪೇಟೆ ಭೇಟಿ ನೀಡಿ ಘಟನೆಯ ಬಗ್ಗೆ ಪೊಲೀಸರೊಂದಿಗೆ ಚರ್ಚಿಸಿದರು.
ಕೈದಿಯಿಂದ 25 ಗ್ರಾಂ ಗಾಂಜಾ ವಶ : ಗದಗ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ವಾಪಸಾದ ವಿಚಾರಣಾಧೀನ ಕೈದಿಯಿಂದ 25 ಗ್ರಾಂ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. [ಯುವರಾಜ್ ಸಿಂಗ್ ಗಾಂಜಾ ಸೇವಿಸುತ್ತಿದ್ದ: ಆಕಾಂಕ್ಷ ಶರ್ಮ]
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೊಲೆ ಪ್ರಕರಣವೊಂದರಲ್ಲಿ ಬಂಧಿಸಲ್ಪಟ್ಟು ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ರಾಜು ಎಂಬಾತನ ವಿರುದ್ಧ ಗದಗ ಜಿಲ್ಲೆಯ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಐದು ಪ್ರಕರಣಗಳಿವೆ.
ಈ ಪ್ರಕರಣಗಳ ವಿಚಾರಣೆಗಾಗಿ ಬೆಟಗೇರಿ ಪೊಲೀಸ್ ಠಾಣೆಯ ಸಿಬ್ಬಂದಿ ಆತನನ್ನು ಇಲ್ಲಿಂದ ಬೆಟಗೇರಿಗೆ ಕರೆದೊಯ್ದು ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದರು. ಡಿಸೆಂಬರ್ 19ರಂದು ಆತನನ್ನು ಮಂಗಳೂರು ಕಾರಾಗೃಹಕ್ಕೆ ವಾಪಸ್ ಕರೆತರಲಾಗಿದ್ದು, ಮುಖ್ಯದ್ವಾರದಲ್ಲಿ ಜೈಲಿನ ಸಿಬ್ಬಂದಿ ರಾಜುವನ್ನು ತಪಾಸಣೆಗೆಗೊಳಪಡಿಸಿದಾಗ ಆತನ ಬಳಿ 25 ಗ್ರಾಂ. ಗಾಂಜಾ ಪತ್ತೆಯಾಗಿದೆ.