ಉಪ್ಪಿನಂಗಡಿ: ಯುವತಿಯೊಂದಿಗೆ ಮಾತನಾಡಿದಕ್ಕೆ ಯುವಕನ ಮೇಲೆ ಹಲ್ಲೆ
ಮಂಗಳೂರು, ಜನವರಿ. 05 : ಕಾಲೇಜು ವಿದ್ಯಾರ್ಥಿಯೊಬ್ಬ ಅದೇ ಕಾಲೇಜಿನ ಹುಡುಗಿಯೊಂದಿಗೆ ಸಲುಗೆಯಿಂದ ಮಾತನಾಡುತ್ತಿರುವುದನ್ನು ಕಂಡ ಇತರೆ ವಿದ್ಯಾರ್ಥಿಗಳ ಗುಂಪೊಂದು ಯುವಕನ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಬುಧವಾರ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
ಈ ವೇಳೆ ಎರಡೂ ಕಡೆಯ ವಿದ್ಯಾರ್ಥಿಗಳು ಜಮಾಯಿಸಿ ಪರಸ್ಪರ ಮಾತಿನ ಚಕಮಕಿ ನಡೆಸಿದರಲ್ಲದೆ, ಹೊಕೈ ನಡೆಸಿದರೆನ್ನಲಾಗಿದೆ.
ಈ ನಡುವೆ ಮಧ್ಯ ಪ್ರವೇಶಿಸಿದ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಯತ್ನಿಸಿದರಾದರೂ, ಪರಿಸ್ಥಿತಿ ನಿಯಂತ್ರಣ ಬಾರದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಉಪನ್ಯಾಸಕರ ಬಳಿ ಘಟನೆಯ ಮಾಹಿತಿ ಪಡೆದುಕೊಂಡರು. ಬೆಳಗ್ಗೆ ಕಾಲೇಜಿಗೆ ಬಂದಿದ್ದ ಕಾಲೇಜಿನ ಪ್ರಾಂಶುಪಾಲೆ ವಿದ್ಯಾರ್ಥಿಗಳ ಸಂಘರ್ಷದ ವೇಳೆ ಕಾಲೇಜಿನಲ್ಲಿ ಕಾಣಿಸದೆ ನಾಪತ್ತೆಯಾಗಿದ್ದರು.
ಈ ಬಗ್ಗೆ ಕಾಲೇಜಿನ ಉಪನ್ಯಾಸಕರನ್ನು ವಿಚಾರಿಸಿದರೆ, ಬೆಳಗ್ಗೆ ಬಂದಿದ್ದ ಪ್ರಾಂಶುಪಾಲರು ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಶಾಸಕರನ್ನು ಆಮಂತ್ರಿಸಲು ಹೋಗಿರಬೇಕೆಂದು ಹೇಳಿದರು.