ಸೌದಿಯ ಕುರಿಮಂದೆಯಲ್ಲಿ ಸಿಕ್ಕಿಕೊಂಡ ಇಬ್ಬರು ಮಂಗಳೂರಿಗರು!
ಉತ್ತಮ ಉದ್ಯೋಗದ ಕನಸು ಹೊತ್ತು ಸೌದಿ ಅರೇಬಿಯಾಗೆ ತೆರಳಿದ್ದ ಮಂಗಳೂರಿನ ದಾಮೋದರ ಶೆಟ್ಟಿಗಾರ್ ಹಾಗೂ ಪುನೀತ್ ಜಯರಾಜ್ ಮೋಸಹೋಗಿ ಕುರಿ ಫಾರ್ಮ್ ಒಂದರಲ್ಲಿ ಕೆಲಸ ನಿರ್ವಹಿಸುವಂತಾಗಿದೆ!
ಮಂಗಳೂರು : ಆಟೋ ಸ್ಪ್ರೇ ಪೈಂಟರುಗಳಾಗಿ ಕೆಲಸ ನಿರ್ವಹಿಸಲು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಸೌದಿ ಅರೇಬಿಯಾಗೆ ಹಲವು ಕನಸುಗಳನ್ನು ಹೊತ್ತು ತೆರಳಿದ್ದ ಗಂಜಿಮಠದ ಗಾಂಧಿನಗರ ನಿವಾಸಿ ದಾಮೋದರ ಶೆಟ್ಟಿಗಾರ್ (31) ಹಾಗೂ ಮುಲ್ಕಿಯ ಪುನೀತ್ ಜಯರಾಜ್ (25) ಮೋಸಹೋಗಿ ಕುರಿ ಫಾರ್ಮ್ ಒಂದರಲ್ಲಿ ಕೆಲಸ ನಿರ್ವಹಿಸುವಂತಾಗಿದೆ!
ಮೋಸ ಹೋಗಿರುವ ಈ ಇಬ್ಬರೂ ಈಗ ತಮ್ಮ ತವರು ದೇಶಕ್ಕೆ ಮರಳಲು ಸಹಾಯ ಮಾಡುವಂತೆ ಅಲ್ಲಿನ ಭಾರತೀಯ ದೂತಾವಾಸ ಕಚೇರಿಗೆ ಮನವಿ ಮಾಡಿದ್ದಾರೆ.[ಅಪರಿಚಿತರಿಂದ 40,000 ರೂ. ಡ್ರಾ, ಪ್ರಧಾನಿಗೆ ಮಂಗಳೂರಿಗನ ಮೊರೆ]
ಇಬ್ಬರೂ ಕುರಿ ಫಾರ್ಮಿನಲ್ಲಿ ಬಿಸಿಲಿನ ತಾಪಕ್ಕೆ ಬಸವಳಿದಿರುವ ಹೊರತಾಗಿ ಉಪಾಯವಿಲ್ಲದೆ ದುಡಿಯುತ್ತಿದ್ದಾರೆ. ಅಲ್ಲಿ ಅವರಿಗೆ ಆಹಾರ ಒದಗಿಸಲಾಗುತ್ತಿದೆಯಾದರೂ ಇಲ್ಲಿಯ ತನಕ ವೇತನ ನೀಡಲಾಗಿಲ್ಲವೆಂದೂ ದೂರಲಾಗಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಆನ್ಲೈನ್ ದೂರು ಸಲ್ಲಿಕೆ ವ್ಯವಸ್ಥೆಯ ಮೂಲಕ ಭಾರತೀಯ ದೂತಾವಾಸಕ್ಕೆ ಎಪ್ರಿಲ್ 4ರಂದು ಇಬ್ಬರೂ ದೂರು ದಾಖಲಿಸಿ ತಮ್ಮ ಬವಣೆಯನ್ನು ವಿವರಿಸಿದ್ದಾರೆ. ಉದ್ಯೋಗ, ವೀಸಾ ಮುಂತಾದವುಗಳಿಗೆ ಇಬ್ಬರೂ ತಮ್ಮ ಏಜಂಟರಿಗೆ ತಲಾ ರೂ 78,000 ನೀಡಿದ್ದರೆಂದೂ ತಿಳಿದುಬಂದಿದೆ.
ಈ ಬಗ್ಗೆ ಏಜನ್ಸಿಗೆ ದೂರಿದ್ದರೂ ಬೇಗನೇ ಸೂಕ್ತ ಉದ್ಯೋಗ ಒದಗಿಸಲಾಗುವುದು ಎಂದು ಹೇಳುತ್ತಿದ್ದಾರೆಯೇ ವಿನಹ ಏನೂ ಮಾಡುತ್ತಿಲ್ಲ ಎಂದು ಇಬ್ಬರು ಯುವಕರೂ ಹೇಳುತ್ತಾರೆ. ಸಮಸ್ಯೆ ಸಾಲದೆಂಬಂತೆ ಅವರ ಪಾಸ್ ಪೋರ್ಟುಗಳನ್ನು ಅವರ ವೀಸಾ ಸ್ಪಾನ್ಸರ್ ವಶಪಡಿಸಿಕೊಂಡಿದ್ದಾರೆನ್ನಲಾಗಿದೆ.