ಉಳ್ಳಾಲ ಪೌರಾಯುಕ್ತೆಯ ಮಗ ಸರಗಳ್ಳತನ ಕೇಸಲ್ಲಿ ಕಂಬಿ ಹಿಂದೆ
ಮಂಗಳೂರಿನ ಉಳ್ಳಾಲ ಪೊಲೀಸರು ಸರಗಳ್ಳತನ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಆ ಪೈಕಿ ಹೀರೋ ಥರ ಕಾಣುವ ವಿಮರ್ಶ ಆಳ್ವಾ ಉಳ್ಳಾಲದ ಪೌರಾಯುಕ್ತೆ ವಾಣಿ ಆಳ್ವಾ ಮಗ. ಮರೋಳಿಯ ವಾಸಿ.
ಮಂಗಳೂರು, ಡಿಸೆಂಬರ್ 28: ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಉತ್ತರ ಠಾಣೆ ಪೊಲೀಸರು ಉಳ್ಳಾಲ ನಗರ ಪೌರಾಯುಕ್ತೆ ಪುತ್ರನ ಸಹಿತ ಇಬ್ಬರನ್ನು ಬಂಧಿಸಿದ್ದಾರೆ. ಮರೋಳಿಯ ವಿಮರ್ಶ ಆಳ್ವ (21) ಹಾಗೂ ಪಾಂಡೇಶ್ವರ ಶಿವನಗರದ ಸಾಹಿಲ್ ಹುಸೇನ್ (21) ಬಂಧಿತರು.
ಉಳ್ಳಾಲ ಮತ್ತು ಮೂಡಬಿದ್ರೆ ಪರಿಸರದಲ್ಲಿ ಮಹಿಳೆಯರ ಸರಗಳ್ಳತನ ನಡೆಸಿದ ಇಬ್ಬರು ಆರೋಪಿಗಳನ್ನು ಉತ್ತರ ಠಾಣೆ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ. ಬಂಧಿತ ವಿಮರ್ಶ ಆಳ್ವ, ಉಳ್ಳಾಲ ನಗರ ಪೌರಾಯುಕ್ತೆ ವಾಣಿ ಆಳ್ವಾರ ಮಗ. ಈ ಹಿಂದೆ ವಾಣಿ ಆಳ್ವರ ವಿರುದ್ಧವೂ ಲೋಕಾಯುಕ್ತದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಇವರು ಮರೋಳಿಯಲ್ಲಿ ವಾಸಿಸುತ್ತಿದ್ದಾರೆ.[ಹುಬ್ಬಳ್ಳಿಯಲ್ಲಿ ಹುಡುಗಿಗಾಗಿ ಚಾಕು ಇರಿತ, ಇನ್ನಿತರ ಕ್ರೈಂ ಸುದ್ದಿಗಳು]
ಆರೋಪಿಗಳಿಂದ ಚಿನ್ನದ ಸರ, ಕೃತ್ಯಕ್ಕೆ ಬಳಸಿದ ಹೋಂಡಾ ಆಕ್ಟಿವಾ ಸ್ಕೂಟರ್ ಸಹಿತ 2.26 ಲಕ್ಷ ಮೊತ್ತ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಉತ್ತರ ಠಾಣೆ ಇನ್ ಸ್ಪೆಕ್ಟರ್ ಶಾಂತಾರಾಮ್, ಎಸ್ ಐ ಮದನ್, ಪ್ರೊಬೇಷನರಿ ಎಸ್ ಐ ಗಳಾದ ಶೀತಲ್ ಅಲಗೂರು, ರವಿ ಪವಾರ್, ಸಿಬ್ಬಂದಿ ಪದ್ಮನಾಭ, ಹರಿಯಪ್ಪ, ಗೋವರ್ಧನ್ , ವಿನಾಯಕ್, ಮಲ್ಲಿಕಾರ್ಜುನ್ ಭಾಗವಹಿಸಿದ್ದರು.