ಮಂಗಳೂರಲ್ಲಿ ಲೋಕಾರ್ಪಣೆಗೊಂಡ ತುಳು ಅಕಾಡೆಮಿ ಕಚೇರಿ
ಮಂಗಳೂರು, ಆಗಸ್ಟ್, 31 : ಹಿರಿಯರು ಉಳಿಸಿ ಹೋಗಿರುವ ಸಾಮರಸ್ಯ, ವಿಶ್ವಾಸದಂತಹ ಸೊತ್ತುಗಳನ್ನು ರಕ್ಷಿಸಿಕೊಂಡು ತುಳುನಾಡಿನ ಸೌಹಾರ್ದ ಉಳಿಸುವ ಕೆಲಸ ಆಗಬೇಕು ಎಂದು ರಾಜ್ಯ ಅರಣ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಮಹಾಗಣಪತಿ ದೇವಸ್ಥಾನ ಬಳಿ ನಿರ್ಮಾಣಗೊಂಡಿದ್ದ ತುಳು ಅಕಾಡೆಮಿ ಕಚೇರಿಯನ್ನು ಇದೀಗ ತುಳು ಭವನದ ನೆಲ ಅಂತಸ್ತಿಗೆ ಸ್ಥಳಾಂತರಿಸಲಾಗಿದೆ. ಈ ತುಳು ಅಕಾಡೆಮಿ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.[ಎಂ.ಎಂ. ಕಲಬುರ್ಗಿ ಹತ್ಯೆ, ಟ್ವಿಟ್ ಮಾಡಿದ ಭವಿತ್ ವಿರುದ್ಧ ಕೇಸ್]
ವಿಶಾಲ ತುಳು ಭವನ ನಿರ್ಮಾಣಗೊಳ್ಳುತ್ತಿರುವುದು ಸಂತಸ. ಸಾಮಾಜಿಕ ಬದಲಾವಣೆಯೊಂದಿಗೆ ಸ್ಪಂದಿಸುತ್ತಾ ಮುನ್ನಡೆಯುವ ವಿಶಾಲ ಮನೋಭಾವ ತುಳುವರಿಗಿದೆ. ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವಂತೆ ಹಲವು ತುಳುವರು ಹೋರಾಟ ನಡೆಸಿದ್ದಾರೆ. ಇಂದು ಸಿನೆಮಾಗಳ ಮೂಲಕವೂ ತುಳು ಭಾಷಾ ಕೀರ್ತಿ ರಾರಾಜಿಸುತ್ತಿದೆ ಎಂದು ನುಡಿದರು.
ಶಾಸಕ ಜೆ.ಆರ್. ಲೋಬೊ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಬಿ.ಎ. ಮೊದಿನ್ ಬಾವಾ, ಐವನ್ ಡಿಸೋಜಾ, ಮಂಗಳೂರು ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮಹಮ್ಮದ್ ಹನೀಫ್, ಕೊಂಕಣಿ ಅಕಾಡೆಮಿ ಸದಸ್ಯ ರೋಯ್ ಕ್ಯಾಸ್ಟಲಿನೊ, ಮನಪಾ ಸದಸ್ಯೆ ನಾಗವೇಣಿ, ತುಳು ಅಕಾಡೆಮಿ ಮಾಜಿ ಅಧ್ಯಕ್ಷರಾದ ಡಾ| ವಾಮನ ನಂದಾವರ, ಎಂ.ಕೆ. ಸೀತಾರಾಮ ಕುಲಾಲ್, ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್, ಉಮಾನಾಥ ಕೋಟ್ಯಾನ್, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್ ಬಿ.ಟಿ. ಕಾಂತಧಿರಾಜ್, ತುಳು ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಉಪಸ್ಥಿತರಿದ್ದರು.