ವಿರಾಸತ್ ನಲ್ಲಿ ಮನಸೂರೆಗೊಂಡ ನಾದ ಮಾಧುರ್ಯ
ಪ್ರತಿಷ್ಠಿತ ಕಾರ್ಯಕ್ರಮವಾದ ವಿರಾಸತ್ ಸಾಂಸ್ಕೃತಿಕ ಉತ್ಸವದ ಎರಡನೇ ದಿನವಾದ ಶನಿವಾರ ಶ್ರೀಮತಿ ವನಜಾಕ್ಷಿಯವರ ಟ್ರಿನಿಟಿ ಸಂಗೀತ ಎಲ್ಲರನ್ನು ಆಕರ್ಷಿಸಿತು.
ಮಂಗಳೂರು, ಜನವರಿ 15 : ಅದ್ದೂರಿಯಾಗಿ ಚಾಲನೆಗೊಂಡ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ನ ಎರಡನೆ ದಿನವಾದ ಶನಿವಾರ ಸಂಜೆ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಮೊದಲ ಕಾರ್ಯಕ್ರಮವಾಗಿ ನಡೆದ ಟ್ರಿನಿಟಿ ನಾದ ಮಾಧುರ್ಯ ಗಮನ ಸೆಳೆಯಿತು.
ಸಿತಾರ್ನಲ್ಲಿ ಪುರ್ಬಯಾನ್ ಚಟರ್ಜಿ, ಯು.ರಾಜೇಶ್ , ಮ್ಯಾಂಡೋಲಿನ್, ರಂಜಿತ್ ಬೇರಟ್, ಗುಲ್ರಾಜ್ ಸಿಂಗ್, ಮೋಹಿನಿ ಡೆ , ಬೇಸ್ ಗಿಟಾರ್ ಹಾಗೂ ಭೂಷಣ್ ಪರ್ಚುರೆ ಅವರು ನಾದ ಮಾದುರ್ಯಕ್ಕೆ ಸಾಥ್ ನೀಡುವ ಮೂಲಕ ಸೇರಿರುವ ಸಂಗೀತಾಸಕ್ತರ ಗಮನ ಸೆಳೆದರು.
ಉದ್ಯಮಿ ನಾರಾಯಣ ಪಿ.ಎಂ ದೀಪ ಪ್ರಜ್ವಲನಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಚ್ಚಿದಾನಂದ ಶೆಟ್ಟಿ, ಆಳ್ವಾಸ್ ವಿರಾಸತ್ನ ರೂವಾರಿ ಡಾ.ಎಂ.ಮೋಹನ ಆಳ್ವ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಬೆಂಗಳೂರಿನ ಮಾಸ್ಟರ್ ರಾಹುಲ್ ವೆಲ್ಲಾಲ್ ದೇವರನಾಮ ಹಾಡಿದರು. ಭುವನೇಶ್ವರದ ಆರಾಧನಾ ಡ್ಯಾನ್ಸ್ ಅಕಾಡಮಿಯ ಕಲಾವಿದರು ಒಡಿಸ್ಸಿ- ಗೋಟಿಪುವಾ ನೃತ್ಯರೂಪಕ ಅಂಗರಾಗವನ್ನು ಪ್ರಸ್ತುತಪಡಿಸಿದರು.
ಬಳಿಕ ಯೋಗೇಶ್ ಮಾಳವಿಯಾ, ಉಜ್ಜಯಿನಿ ಮತ್ತು ಬಸವರಾಜ್ ಬಂಡಿವಾಡ್ ನಿರ್ದೇಶನದಲ್ಲಿ 80 ವಿದ್ಯಾರ್ಥಿ ಕಲಾವಿದರಿಂದ ಸಾಹಸಮಯ ರೋಪ್ ಮತ್ತು ಮಲ್ಲಕಂಬ, ಕಲ್ಕತ್ತಾದ ಅಶಿಂಬಂಧು ಭಟ್ಟಾಚಾರ್ಜಿ ನಿರ್ದೇಶನದಲ್ಲಿ 35 ವಿದ್ಯಾರ್ಥಿ ಕಲಾವಿದರಿಂದ ಕಥಕ್ ನೃತ್ಯ ಆನಂದಮಂಗಳಂ ದೇಶ್ ಅನಾವರಣಗೊಂಡಿತು.
ಸೂಪರ್ ಸಿಂಗ್ ನಿರ್ದೇಶನದಲ್ಲಿ 35 ವಿದ್ಯಾರ್ಥಿ ಕಲಾವಿದರಿಂದ ಮಣಿಪುರದ ಧೋಲ್ ಚಲೋಮ್ ಹಾಗೂ ಕೊಲಂಬೋದ ಜಯಂಪತಿ ಭಂಡಾರ ನಿರ್ದೇಶನದಲ್ಲಿ 60 ವಿದ್ಯಾರ್ಥಿ ಕಲಾವಿದರಿಂದ ಶ್ರೀಲಂಕಾದ ನೃತ್ಯ ವೈಭವ ನೃತ್ಯೋತ್ಸವ ಸಾದರಪಡಿಸಲಾಯಿತು. ವಿದ್ಯಾರ್ಥಿ ಕಲಾವಿದರೆಲ್ಲಾ ಆಳ್ವಾಸ್ ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳು.
ಇಂದು ಶಾನ್-ಪಾಯಲ್ ಸಂಗೀತ ರಸಧಾರೆ: ಬಾಲಿವುಡ್ ಗಾಯಕ ಶಾನ್ ಹಾಗೂ ಪಾಯಲ್ ದೇವ್ ಆಳ್ವಾಸ್ ವಿರಾಸತ್-2017 ರಾಷ್ಟ್ರೀಯ ಸಮ್ಮೇಳನದ ಕೊನೆಯ ದಿನವಾದ ಜ.15ರಂದು ಸಂಜೆ 6:05ರಿಂದ ರಾತ್ರಿ 8:50ರವರೆಗೆ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.