ವೈರಿಗಳ ಸದೆಬಡಿದ ಮಂಗಳೂರಿನ ಯೋಧನ ದುರಂತ ಕಥೆ
ಮಂಗಳೂರು, ಏಪ್ರಿಲ್ 15 : ಅಪರಿಚಿತ ಪ್ರದೇಶ, ವಿಪರೀತ ಚಳಿ, ವೈರಿಗಳ ದಾಳಿಯ ಅತೀ ದುಸ್ತರವಾದ ಪರಿಸ್ಥಿತಿಯಲ್ಲೂ ಭಾರತದ ಸೈನಿಕರು ಜೀವದ ಹಂಗುತೊರೆದು ದೇಶದ ರಕ್ಷಣೆ ಮಾಡುತ್ತಾರೆ. ನಾವು ಇವತ್ತು ನಮ್ಮ ಮನೆಗಳಲ್ಲಿ ಸುರಕ್ಷಿತವಾಗಿರಲು ನಮ್ಮ ದೇಶದ ಸೈನಿಕರೇ ಕಾರಣ.
ದೇಶಪ್ರೇಮ, ದೇಶ ರಕ್ಷಣೆಗಾಗಿ ಎಂಥ ಅಪಾಯ ಎದುರಿಸಲು ರೆಡಿ. ಈ ಸಾಲಿಗೆ ನಮ್ಮ ಮಂಗಳೂರಿನ ವೀರ ಯೋಧ ಕೂಡಾ ಸೇರುತ್ತಾರೆ. ಹೌದು ನಾವು ಇವತ್ತು ಹೇಳ ಹೊರಟಿರುವುದು ಭಾರತದ ಸರ್ಜಿಕಲ್ ಸ್ಟ್ರೈಕ್ ನಲ್ಲಿ ತನ್ನ ಜೀವ ಲೆಕ್ಕಿಸದೆ ವೈರಿಗಳ ಸದೆ ಬಡಿದ ವೀರ ಯೋಧನ ಕಥೆ. [ಶತ್ರು ಪಾಳಯದಿಂದ ವಾಪಸ್ ಬಂದ ಸೈನಿಕರಿಗೆ ಸಿಗುವ ಸ್ವಾಗತ ಎಂಥದ್ದು?]
ಭಾರತ ದೇಶವು ಪಾಕಿಸ್ತಾನದ ನೆಲದಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ಗೆ ಪ್ರತಿಯಾಗಿ ಕಳೆದ ಅಕ್ಟೋಬರ್ 12ರಂದು ಜಮ್ಮುವಿನ ಕುಪ್ವಾರಾದಲ್ಲಿ ಪ್ಯಾಟ್ರೋಲಿಂಗಲ್ಲಿ ಇದ್ದ ಭಾರತೀಯ ಯೋಧರ ಮೇಲೆ ಪಾಕ್ ಪ್ರೇರಿತ 7 ಉಗ್ರರು ನಡೆಸಿದ ಏಕಾಏಕಿ ದಾಳಿ ಅದು. ಕೈಗಳಲ್ಲಿ ಸೂಕ್ತ ಶಸ್ತಾಸ್ತ್ರಗಳಿಲ್ಲದೆ ವೈರಿಗಳ ನಾಲ್ಕು ಗುಂಡುಗಳಿಗೆ ಎದೆಕೊಟ್ಟು, ತನ್ನಲ್ಲಿದ್ದ ರೈಫಲ್ ನಲ್ಲೇ ಉಗ್ರರನ್ನು ಕೊಂದು ಮುಗಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪುವಿನ ವೀರಜವಾನನ ಮೈನವಿರೇಳಿಸುವ ಕಥೆ.
ಬರೋಬ್ಬರಿ 5 ತಿಂಗಳ ನಂತರ ಕಮರಿದ ಕನಸಿನೊಂದಿಗೆ ಮನೆಗೆ ಮರಳಿದ್ದಾರೆ. ಇದು ಅಕ್ಟೋಬರ್ ತಿಂಗಳಲ್ಲಿ ಜಮ್ಮುವಿನ ಕುಪ್ವಾರಾ ಪ್ರದೇಶದಲ್ಲಿ ನಡೆದಿದ್ದ ಉಗ್ರರ ದಾಳಿಯಲ್ಲಿ ನಾಲ್ಕು ಗುಂಡುಗಳನ್ನು ತಿಂದಿದ್ದರೂ ವೈರಿಗಳನ್ನು ಸಂಹರಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪು ಕೊಡಕ್ಕಲ್ಲಿನ ವೀರಯೋಧ ಸಂತೋಷ್ ಕುಮಾರ್(33) ಯಶೋಗಾಥೆಯ ಫ್ಲ್ಯಾಶ್ ಬ್ಯಾಕ್ ಕಥೆ. [ಸರ್ಜಿಕಲ್ ಸ್ಟ್ರೈಕ್: ಏನ್ ದೇವೇಗೌಡ್ರೇ ಹೀಗೆ ಹೇಳ್ ಬಿಟ್ರಿ?]
ಸರ್ಜಿಕಲ್ ಸ್ಟ್ರೈಕ್ ಪರಿಣಾಮ
ಸೆಪ್ಟೆಂಬರ್ 29ರಂದು ಭಾರತದ ಸೈನಿಕರು ವೈರಿ ಪಾಕಿಸ್ತಾನದ ನೆಲದಲ್ಲೇ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರನ್ನು ಸದೆಬಡಿದಿದ್ದರು. ಇದರ ಪ್ರತೀಕಾರ ತೀರಿಸಲು ಪಾಕಿಸ್ತಾನ ಬೆಂಬಲಿತ 7 ಉಗ್ರರು 2016ನೇ ಅಕ್ಟೋಬರ್ 12ರಂದು ಜಮ್ಮುವಿನ ಕುಪ್ವಾರಾ ಗಡಿಭಾಗದ ವಿದ್ಯಾರ್ಥಿಗಳ ಹಾಸ್ಟೆಲ್ನ ಬಹುಮಹಡಿ ಕಟ್ಟಡವನ್ನು ಆಕ್ರಮಿಸಿ ಅವಿತು ಕುಳಿತಿದ್ದರು. ಪ್ರತೀಕಾರ ತೀರಿಸಲು ಉಗ್ರರು ಆಕ್ರಮಣ ನಡೆಸುವ ಮಾಹಿತಿ ಇದ್ದುದರಿಂದ ಹಾಸ್ಟೆಲಿನ ವಿದ್ಯಾರ್ಥಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಅದಾಗಲೇ ರಜೆ ಮುಗಿಸಿ ಕರ್ತವ್ಯಕ್ಕೆ ಹಾಜರಾಗಿದ್ದ ಸಂತೋಷ್ ತನ್ನ ಸಹೋದ್ಯೋಗಿ ಇತರ ಆರು ಸೈನಿಕರ ಜೊತೆಗೂಡಿ ಕುಪ್ವಾರಾ ಪ್ರದೇಶಕ್ಕೆ ಪ್ಯಾಟ್ರೋಲಿಂಗ್ ನಡೆಸಲು ಹೋಗಿದ್ದಾರೆ.
ಯೋಧರ ಬರುವಿಕೆಯ ಗೌಪ್ಯತೆ ಸೋರಿಕೆಯಾಗಿ ಹಾಸ್ಟೆಲ್ನಲ್ಲಿ ಅವಿತು ಕುಳಿತಿದ್ದ 7 ಉಗ್ರರು ದಿಢೀರನೆ ಪ್ಯಾಟ್ರೋಲಿಂಗ್ ನಡೆಸುತ್ತಿದ್ದ ಸಂತೋಷ್ ನೇತೃತ್ವದ ಭಾರತೀಯ ಯೋಧರ ತಂಡದ ಮೇಲೆ ಗುಂಡಿನ ಮಳೆಗೈದಿದ್ದಾರೆ. ಪ್ರತಿದಾಳಿಗೆ ಸೂಕ್ತವಾದ ಶಶ್ತ್ರಾಸ್ತ್ರಗಳು ಇಲ್ಲದೆ ಅವಕ್ಕಾದ ಸಂತೋಷ್ ಅವರ ತಂಡ ಕೊನೆಗೆ 'ಮಾಡು ಇಲ್ಲವೆ ಮಡಿ' ಎಂಬ ನಿರ್ಣಯ ತಳೆದು ತಮ್ಮಲ್ಲಿದ್ದ ರೈಫಲ್ಗಳಿಂದಲೆ ಉಗ್ರರ ಮೇಲೆ ಪ್ರತಿದಾಳಿ ನಡೆಸಿದ್ದಾರೆ. [ಭಾರತ-ಪಾಕ್ ಮಧ್ಯೆ ಯುದ್ಧ ನಡೆಯುತ್ತೆ: ಮಾತಾ ಮಾಣಿಕೇಶ್ವರಿ ಭವಿಷ್ಯ]
ಈ ಸಂದರ್ಭ ಸಂತೋಷ್ ನ ಕಾಲು, ಎದೆಭಾಗಕ್ಕೆ ನಾಲ್ಕು ಗುಂಡುಗಳು ಹೊಕ್ಕಿದ್ದು ನೋವು ಸಹಿಸಲಾರದೆ ಪ್ರಜ್ಞೆ ತಪ್ಪಿದ ಅವರನ್ನು ಸೈನಿಕರು ಆಸ್ಪತ್ರೆಗೆ ಸೇರಿಸಿದ್ದರು. ನಂತರ ಕಟ್ಟಡವನ್ನು ಪೂರ್ಣಪ್ರಮಾಣದಲ್ಲಿ ವಶಕ್ಕೆ ತೆಗೆದುಕೊಂಡ ಭಾರತೀಯ ಶಸ್ತ್ರಸಜ್ಜಿತ ಸೈನಿಕರು ಅಕ್ಟೋಬರ್ 14ರ ತನಕ ಕಾರ್ಯಾಚರಣೆ ನಡೆಸಿ ಮೂರು ಉಗ್ರರನ್ನು ಹೊಡೆದುರುಳಿಸಿದ್ದು ಹಾಸ್ಟೆಲ್ ಕಟ್ಟಡಕ್ಕೆ ಆರ್ಎಲ್ ರಾಕೆಟ್ ಲಾಂಚರ್ ಸಿಡಿಸಿ ಉಳಿದ ಮೂವರು ಉಗ್ರರನ್ನು ಕೊಂದಿದ್ದಾರೆ. [ಸರ್ಜಿಕಲ್ ಸ್ಟ್ರೈಕ್ ನಡೆದದ್ದು ಹೇಗೆ? 10 ಬೆಳವಣಿಗೆಗಳು]
ಸೇನೆ ಸೇರಲು ಪ್ರೇರಣೆ
ಬೆಳ್ತಂಗಡಿ, ಕಾರಿಂಜದ ಕಕ್ಕೆಪದವಿನ ರಾಮಣ್ಣ ಸಾಲಿಯಾನ್ ಮತ್ತು ವಿಮಲಾ ಅವರ ಏಕೈಕ ಪುತ್ರನಾಗಿರುವ ಸಂತೋಷ್ ಕುಮಾರ್, ಮುಡಿಪು ಸರಕಾರಿ ಕಾಲೇಜಿನಲ್ಲೇ ಪದವಿ ಪೂರ್ವ ಶಿಕ್ಷಣ ಮುಗಿಸಿದ್ದಾರೆ. ಚಿಕ್ಕಮ್ಮನ ಮಗ(ಅಣ್ಣ)ಕಿಶೋರ್ ಅದಾಗಲೇ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದು ಸಂತೋಷ್ ಅವರೂ ಸೇನೆ ಸೇರಲು ಪ್ರೇರೇಪಣೆಯಾಯಿತು. 2003ರಲ್ಲಿ ಸಂತೋಷ್ ಸೇನೆಗೆ ಭರ್ತಿಯಾದರು.
15 ವರುಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ ಅವರು ದೇಶದ ವಿವಿಧೆಡೆ ಉಗ್ರರ ವಿರುದ್ಧ ನಡೆದ 10ಕ್ಕೂ ಹೆಚ್ಚು ಕಾರ್ಯಾಚರಣೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇದೀಗ ಅವರ ಬಲಗಾಲು ಮತ್ತು ಎದೆಭಾಗಕ್ಕೆ ಗುಂಡುಗಳು ಹೊಕ್ಕಿರುವುದರಿಂದ ದೇಹವೆಲ್ಲವು ಜರ್ಜರಿತವಾಗಿ ಮತ್ತೆ ಸೇನೆಯಲ್ಲಿ ಕಾರ್ಯನಿರ್ವಹಿಸುವುದು ಕಷ್ಟ ಸಾಧ್ಯವಾಗಿದ್ದು, ಭಾರತ ಮಾತೆಯ ಸೇವೆಗೈಯಲು ಅವರು ಕಂಡಂತಹ ಕನಸುಗಳೆಲ್ಲವೂ ಕುಪ್ವಾರಾ ಸಂಘರ್ಷದಲ್ಲೇ ಕಮರಿ ಹೋದಂತಾಗಿದೆ.
ಸೇವೆ ಮುಂದುವರಿಸದಿದ್ದಕ್ಕೆ ವಿಷಾದ
ಈ ಬಗ್ಗೆ ಪ್ರತಿಕ್ರಿಯಿಸಿದ ವೀರಯೋಧ ಸಂತೋಷ್, ತೋಳಲ್ಲಿ ಶಕ್ತಿ ಇರೋವರೆಗೂ ಭಾರತ ಮಾತೆಯ ಸೇವೆಗೈಯುವ ನಿರ್ಧಾರ ತಳೆದಿದ್ದೆ. ಅದಕ್ಕಾಗಿ ಸೇನಾ ಕ್ಯಾಂಪಿನಲ್ಲೇ ಪದವಿ ಶಿಕ್ಷಣವನ್ನೂ ಮುಗಿಸಿದ್ದೆ. ಮುಂದೆ ಸೇನೆಯಲ್ಲಿ ಕರ್ತವ್ಯ ಮುಂದುವರಿಸಲು ವೈದ್ಯಕೀಯ ಪ್ರಮಾಣ ಪತ್ರವೇ ಪ್ರಮುಖವೆನಿಸುತ್ತದೆ. ದೇಹದ ಪರಿಸ್ಥಿತಿ ನೋಡಿದರೆ ತನಗೆ ಮತ್ತೆ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವುದು ಅಸಾಧ್ಯವೆನಿಸಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಸಂತೋಷ್ ತಾಯಿ ವಿಮಲಾ, ಇರುವ ಓರ್ವ ಮಗನನ್ನು ಕಷ್ಟಪಟ್ಟು ಬೀಡಿ ಕಟ್ಟಿ ಸಾಕಿದ್ದೇನೆ. ಉಗ್ರರ ಜೊತೆಗಿನ ಸೆಣಸಾಟದಲ್ಲಿ ದೇವರು ನನ್ನ ಮಗನನ್ನು ಬದುಕುಳಿಸಿದ್ದೇ ದೊಡ್ಡದು. ನನ್ನ ತಾಯ್ತನದ ಮನಸಿನ ವಿರೋಧದಲ್ಲೂ ಸೇನೆಗೆ ಸೇರಿ ದೇಶದ ವೈರಿಗಳನ್ನು ಕೊಂದ ಮಗನ ಪರಾಕ್ರಮದ ಬಗ್ಗೆ ನಿಜಕ್ಕೂ ಹೆಮ್ಮೆ ಅನಿಸುತ್ತಿದೆ ಎಂದು ಮನದಾಳದ ಮಾತುಗಳನ್ನಾಡಿದರು.