ಅತ್ತ ಬಿರುಬಿಸಿಲು, ಇತ್ತ ಬರಸಿಡಿಲು: ಮೂವರ ಸಾವು
ಈ ದುರ್ಘಟನೆಯಲ್ಲಿ, ಜಯಮ್ಮ, ಹನುಮಕ್ಕ ಜತೆಗೆ ಒಂದು ಮಗು ಸಾವಿಗೀಡಾಗಿದ್ದಾರೆ. ಇವರೆಲ್ಲರೂ ತುಮಕೂರು ಮೂಲದವರೆಂದು ಹೇಳಲಾಗಿದೆ.
ಮಂಗಳೂರು, ಏಪ್ರಿಲ್ 12: ಮಂಗಳೂರು ಸೇರಿದಂತೆ ಇಡೀ ಕರಾವಳಿ ತೀರದೆಲ್ಲೆಡೆ ಉರಿ ಬಿಸಿಲು ಜನರನ್ನು ಕಂಗೆಡಿಸಿದ್ದರೆ, ಅದೇ ದಕ್ಷಿಣ ಕನ್ನಡ ಜಿಲ್ಲೆಯ ಮತ್ತೊಂದೆಡೆ ಬರಸಿಡಿಲಿಗೆ ಮೂವರ ಸಾವು ಉಂಟಾಗಿದೆ.
ನದಿಯೊಂದರ ದಡದಲ್ಲಿ ಬಟ್ಟೆ ತೊಳೆಯುತ್ತಿದ್ದಾಗ ಸಿಡಿಲು ಬಡಿದ ಪರಿಣಾಮ ಒಂದು ಮಗು ಸೇರಿ ಮೂವರು ಸ್ಥಳದಲ್ಲೇ ಅಸುನೀಗಿದ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮದ ಜಕ್ರಿಬೆಟ್ಟು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ತುಮಕೂರು ಜಿಲ್ಲೆಯ ಡ್ಯಾಗೇರ ಹಳ್ಳಿ, ಶಿರಾ ತಾಲ್ಲೂಕಿನ ಜಯ್ಯಮ್ಮ (28), ಕಣಕಮ್ಮ (29), ಶಶಿಕಲಾ (7) ಎಂದು ಗುರುತಿಸಲಾಗಿದೆ. ಹೊಳೆಯ ಬಳಿ ಇಬ್ಬರು ಮಕ್ಕಳೊಂದಿಗೆ ಈ ಇಬ್ಬರೂ ಬಟ್ಟೆ ತೊಳೆಯುತ್ತಿದ್ದರು.
ಇವರು ಕೂಲಿ ಕಾರ್ಮಿಕರಾಗಿದ್ದು, ಇವರು ಬಂಟ್ವಾಳದಲ್ಲಿ ಕೈಗೊಳ್ಳಲಾಗಿದ್ದ ಸಮಗ್ರ ಕುಡಿಯುವ ನೀರಿನ ಯೋಜನೆ ಕಾಮಗಾರಿಯಲ್ಲಿ ಕೂಲಿ ಕಾರ್ಮಿಕರಾಗಿ ತುಮಕೂರಿನಿಂದ ಆಗಮಿಸಿದ್ದರು.
ಅಪಘಾತದಲ್ಲಿ ಮಹಿಳೆ ಸಾವು: ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ನಡೆದ ಮತ್ತೊಂದು ಅಪಘಾತದಲ್ಲಿ ಬೈಕಿಗೆ ಬಸ್ ಡಿಕ್ಕಿ ಹೊಡೆದು ಮಹಿಳೆ ಸಾವಿಗೀಡಾಗಿದ್ದಾರೆ. ಮಂಗಳೂರಿನ ಕದ್ರಿಯ ಕೆಪಿಟಿ ಸರ್ಕಲ್ ಬಳಿ ಬುಧವಾರ ಈ ಘಟನೆ ನಡೆದಿದೆ.
ಮೃತರನ್ನು ಗುರುಪುರ ನಿವಾಸಿ ಕಮರುನ್ನೀಸಾ(26) ಎಂದು ಗುರುತಿಸಲಾಗಿದೆ. ಇವರು ಚಿಕಿತ್ಸೆಗೆಂದು ಸಂಬಂಧಿ ಜೊತೆಗೆ ಬೈಕ್ ನಲ್ಲಿ ಹೋಗುತ್ತಿದ್ದರು. ಬಸ್ ಡಿಕ್ಕಿ ಹೊಡೆದಿದ್ದರಿಂದ ಬೈಕ್ ಹಿಂಬದಿಯಲ್ಲಿದ್ದ ಮಹಿಳೆ ರಸ್ತೆಗೆ ಬಿದ್ದಾಗ ಬಸ್ ಹರಿದಿದೆ.