ತತ್ಕಾಲ್ ಟಿಕೆಟ್ ಪಡೆದು, ಹೆಚ್ಚು ಹಣಕ್ಕೆ ಮಾರುತ್ತಿದ್ದವರ ಬಂಧನ
ಮಂಗಳೂರು, ಮೇ 23 : ಸೆಂಟ್ರಲ್ ರೈಲು ನಿಲ್ದಾಣದ ಮುಂಗಡ ಟಿಕೆಟ್ ಕೌಂಟರ್ನಲ್ಲಿ ತತ್ಕಾಲ್ ಟಿಕೆಟ್ ಖರೀದಿಸಿ, ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಸುಮಾರು 20 ಸಾವಿರ ರೂ. ಮೌಲ್ಯದ ಟಿಕೆಟ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಗಳನ್ನು ಮಂಗಳೂರು ಚಿಲಿಂಬಿಯ ಕಿರಣ್ ಜೆ. ಭಟ್ (35), ವೇಲೆನ್ಸಿಯಾದ ಉಮೇಶ್ (41) ಮತ್ತು ಕೆಂಜಾರು ಗುಂಡೊಟ್ಟು ಹೌಸ್ನ ರವಿ ರಾಜೇಂದ್ರ ಶೆಟ್ಟಿ (30) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. [ಕೋಟ್ಯಂತರ ರೈಲ್ವೆ ಪ್ರಯಾಣಿಕರಿಗೆ ನಿರಾಳದ ಸಂಗತಿ ಇಲ್ಲಿದೆ]
ಟಿಕೆಟ್ ಖರೀದಿ ಮಾಡಿ ಮಾರಾಟ : ಮುಂಗಡ ಟಿಕೆಟ್ ಬುಕ್ಕಿಂಗ್ ಕೌಂಟರ್ನಲ್ಲಿ ನಿಲ್ಲುತ್ತಿದ್ದ ಆರೋಪಿಗಳು ತತ್ಕಾಲ್ ಟಿಕೆಟ್ ಪಡೆಯುತ್ತಿದ್ದರು. ನಂತರ ಅದನ್ನು 200 ರಿಂದ 400 ರೂ. ಹೆಚ್ಚುವರಿ ದರಕ್ಕೆ ಮಾರಾಟ ಮಾಡುತ್ತಿದ್ದರು. ಇದರಿಂದ ಪ್ರಯಾಣಿಕರಿಗೆ ಅನ್ಯಾಯವಾಗುತ್ತಿತ್ತು.[ರೈಲ್ವೆ ಟಿಕೆಟ್ ಕ್ಯಾನ್ಸಲ್ ಮಾಡಲು 139ಕ್ಕೆ ಡಯಲ್ ಮಾಡಿ]
ಕಿರಣ್ನಿಂದ 8,655 ರೂ., ಉಮೇಶ್ನಿಂದ 4,960 ರೂ. ಮತ್ತು ರವಿ ರಾಜೇಂದ್ರ ಶೆಟ್ಟಿ ಅವರ ಬಳಿ 7,320 ರೂ ಮೊತ್ತದ ಟಿಕೆಟ್ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಎಸಿ ರಿಸರ್ವೇಷನ್ ತತ್ಕಾಲ್ ಟಿಕೆಟ್ ಹಾಗೂ ಭರ್ತಿ ಮಾಡದ ರಿಸರ್ವೇಷನ್ ಫಾರಂಗಳನ್ನು ವಶಪಡಿಸಿಕೊಳ್ಳಲಾಗಿದೆ. [ರೈಲ್ವೆ ಬಜೆಟ್ : ಕರ್ನಾಟಕಕ್ಕೆ ಸಿಕ್ಕಿದ್ದೇನು?]
ರೈಲು ನಿಲ್ದಾಣದಲ್ಲಿಯೂ ಹಿಂದೆಯೂ ಇಂತಹ ಘಟನೆಗಳು ನಡೆದಿತ್ತು. ಆಗ ಆರೋಪಿಗಳಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೂ ಈ ದಂಧೆ ಕೆಲವೆಡೆ ನಡೆಯುತ್ತಿದೆ ಎನ್ನುತ್ತಾರೆ ರೈಲ್ವೆ ಪೊಲೀಸರು.