ಕಡಲತಡಿಯಲ್ಲಿ ಶ್ರೀಕೃಷ್ಣ ಪ್ರಿಯ ನೇರಳೆ ಹಣ್ಣಿನ ದರ್ಬಾರ್
ಮಂಗಳೂರಿನ ಪ್ರಮುಖ ಬೀದಿಗಳಾದ ಪಂಪ್ವೆಲ್, ಉರ್ವಾಸ್ಟೋರ್, ಕಂಕನಾಡಿ, ಬಿಜೈ, ಕದ್ರಿಯಲ್ಲಿ ನೇರಳೆ ಹಣ್ಣುಗಳೇ ಜನರ ಕಣ್ಣುಸೆಳೆಯುತ್ತಿವೆ. ಪ್ರತೀ ಕೆ.ಜಿಗೆ 240 ರಿಂದ 260 ದರವಿದ್ದರೂ ಜನರು ಈ ಹಣ್ಣುಗಳನ್ನೇ ಮುಗಿಬಿದ್ದು ಕೊಳ್ಳುತ್ತಿದ್ದಾರೆ.
ಮಂಗಳೂರು, ಏಪ್ರಿಲ್ 28: ಕಡಲತಡಿಯ ಊರಾದ ಮಂಗಳೂರು ನಗರದ ಸುತ್ತೆಲ್ಲಾ ಈಗ ನೇರಳೆ ಹಣ್ಣಿನದ್ದೇ ದರ್ಬಾರ್. ನಗರದ ಪ್ರಮುಖ ಬೀದಿಗಳಾದ ಪಂಪ್ವೆಲ್, ಉರ್ವಾಸ್ಟೋರ್, ಕಂಕನಾಡಿ, ಬಿಜೈ, ಕದ್ರಿಯಲ್ಲಿ ಈ ಹಣ್ಣುಗಳೇ ಜನರ ಕಣ್ಣುಸೆಳೆಯುತ್ತಿವೆ.
ಆರೋಗ್ಯಕ್ಕೆ ಬಹುಪಕಾರಿಯಾದ ಈ ಹಣ್ಣುಗಳು ಮಾರ್ಚ್ ಎಪ್ರಿಲ್ ಸಮಯದಲ್ಲಿ ಸಿಗುವುದರಿಂದ ಹಿಂದೆ ಮಕ್ಕಳೆಲ್ಲಾ ಬೇಸಿಗೆಯ ರಜೆಯಲ್ಲಿ ಕಾಡಿಗೆ ಹೋಗಿ ತರುತ್ತಿದ್ದರು. ಆದರೆ ಜನರ ಆಧುನಿಕ ಜೀವನಶೈಲಿಯಿಂದ ಯಾರಿಗೂ ಪುರುಸೊತ್ತಿಲ್ಲದಂತಾಗಿದೆ. ಈಗ ಸ್ಥಳೀಯವಾಗಿ ದೊರಕದ ಈ ಹೈಬ್ರಿಡ್ ನೇರಳೆ ಹಣ್ಣುಗಳನ್ನು ತಮಿಳುನಾಡಿನ ವ್ಯಾಪಾರಿಗಳು ಮಂಗಳೂರು ನಗರದ ಬೀದಿಗಳಲ್ಲಿ ಮಾರುತ್ತಿದ್ದಾರೆ.[ಡಿಜಿಟಲ್ ಇಂಡಿಯಾ: ಕರಾವಳಿಯ ಆಟೋ ರಿಕ್ಷಾಗಳಿಗೆ ಬಂತು ಟ್ಯಾಬ್!]
ಪ್ರಸ್ತುತವಾಗಿ ಪ್ರತೀ ಕೆ.ಜಿಗೆ 240 ರಿಂದ 260 ದರ ಇದ್ದರೂ ಜನರು ಇತರ ಹಣ್ಣುಗಳಿಗಿಂತ ಈ ಹಣ್ಣುಗಳನ್ನೇ ಮುಗಿಬಿದ್ದು ಕೊಳ್ಳುತ್ತಿದ್ದಾರೆ.
ಡಿಮ್ಯಾಂಡಪ್ಪೋ ಡಿಮ್ಯಾಂಡು
"ನಾವು ಊರಿನಲ್ಲಿ ಈ ಹೈಬ್ರೀಡ್ ಹಣ್ಣುಗಳನ್ನು ಬೆಳೆದು, ರಾಜ್ಯ ಹಾಗೂ ಅಂತರಾಜ್ಯಗಳಲ್ಲಿ ಇದನ್ನು ಮಾರಾಟ ಮಾಡುತ್ತೇವೆ. ಮಂಗಳೂರಿನಲ್ಲಿ ಇದಕ್ಕೆ ಈಗ ಬಹು ಬೇಡಿಕೆ ಇದೆ. ಔಷಧೀಯ ಗುಣ ಹೊಂದಿರುವುದರಿಂದ ಜನರು ಕೊಳ್ಳುತ್ತಿದ್ದಾರೆ" ಎನ್ನುತ್ತಾರೆ ತಮಿಳುನಾಡಿನ ವ್ಯಾಪಾರಿ ಷಣ್ಮುಗಂ.
ವೈನ್ ತಯಾರಿಕೆ
ಫಿಲಿಪ್ಪೀನ್ಸ್ ಮತ್ತು ಸುರಿನಾಮ್ ದೇಶಗಳಲ್ಲಿ ನೇರಳೆ ಹಣ್ಣಿನಿಂದ ವೈನ್ ತಯಾರಿಸುತ್ತಾರೆ. ಸುರಿನಾಮ್ ದೇಶದಲ್ಲಿ ಮಗುವಿಗೆ ಜನ್ಮ ನೀಡಿದ ನಂತರ ಮತ್ತು ತಿಂಗಳ ಋತುಸ್ರಾವದ ನಂತರ ಇದರ ಎಲೆಯಿಂದ ಸ್ನಾನ ಮಾಡಿಸುತ್ತಾರೆ. ಇದರಿಂದ ದೇಹ ಸುವಾಸನೆ ಭರಿತವಾಗುತ್ತದೆ.[ಅಂಥಿಂಥ ಉಪ್ಪಿನಕಾಯಿ ನೀನಲ್ಲ, ನಿನ್ನಂಥ ಉಪ್ಪಿನಕಾಯಿ ಇನ್ನಿಲ್ಲ!]
ಹಣ್ಣಿನಲ್ಲಿ ಗ್ಲೂಕೋಸ್, ಫ್ರಕ್ಟೋಸ್ ಸಮೃದ್ಧವಾಗಿದೆ. ಜತೆಗೆ ಈ ಹಣ್ಣು ತಿನ್ನುವುದರಿಂದ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಬಹುದು.
ಡಯಾಬಿಟೀಸ್ಗೆ ರಾಮಬಾಣ
ನೇರಳೆ ಮರದ ಎಲ್ಲಾ ಭಾಗಗಳೂ ಔಷಧೀಯ ಗುಣಗಳನ್ನು ಹೊಂದಿದೆ. ಹಿಂದಿನಿಂದಲೂ ಇದು ಪರ್ಯಾಯ ಔಷಧಿಯಾಗಿ ಉಪಯೋಗಿಸಲ್ಪಡುತ್ತಿದೆ.
ಪ್ರಸ್ತುತ ಡಯಾಬಿಟಿಸ್ (ಸಕ್ಕರೆ ಖಾಯಿಲೆ) ಬಹುಪಾಲು ಜನರನ್ನು ಭಾದಿಸುತ್ತಿರುವ ಖಾಯಿಲೆ. ರಕ್ತದಲ್ಲಿನ ಸಕ್ಕರೆ ಅಂಶವನ್ನು ತ್ವರಿತವಾಗಿ ಕಡಿಮೆ ಮಾಡಲು, ತೊಗಟೆ, ಬೀಜ, ಎಲೆ, ಹೂ, ಎಲ್ಲವನ್ನೂ ಉಪಯೋಗಿಸಲಾಗುತ್ತದೆ. ಹಾಗಾಗಿ ನೇರಳೆ ಮರಕ್ಕೆ ಅದರಲ್ಲೂ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದೆ. ಆರ್ಯುವೇದಿಕ್ ಔಷಧಗಳ ಸಿರಪ್ಗಳಲ್ಲಿ ಇದನ್ನು ಬಳಸುತ್ತಾರೆ. ನಮ್ಮ ದೇಹದ ಜೀರ್ಣಶಕ್ತಿಗೂ ಇದು ಬಹುಪಕಾರಿ.
ಹೆಚ್ಚು ತಿನ್ನಬೇಡಿ
ಈ ಹಣ್ಣುಗಳ ಬಗ್ಗೆ ನಗರದ ವೈದ್ಯ ಡಾ. ವೆಂಕಟೇಶ್ ಹೇಳುವಂತೆ "ಈ ಹಣ್ಣುಗಳನ್ನು ಹೆಚ್ಚು ಸೇವಿಸಬಾರದು ಇದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುತ್ತದೆ. ಹಾಗೂ ಬೀದಿ ಬದಿಯಲ್ಲಿ ಇದನ್ನು ಮಾರುವುದರಿಂದ ಇದರ ಮೇಲೆ ಧೂಳು ಹಾಗೂ ಕ್ರಿಮಿಕೀಟಗಳು ಅಂಟಿಕೊಂಡಿರುವುದರಿಂದ ರೋಗಗಳು ಬೇಗ ಬಾಧಿಸಬಹುದು. ಆದುದರಿಂದ ಹಣ್ಣಿಗೆ ಉಪ್ಪು ಹಾಕಿ ತೊಳೆಯಬೇಕು," ಎನ್ನುವುದು ವೈದ್ಯರ ಸಲಹೆ.
ತಿಂದು ಹಾಲು ಕುಡಿಯಬೇಡಿ
ನೇರಳೆ ಹಣ್ಣನ್ನು ಊಟದ ಮುಂಚೆ ತಿಂದರೆ ಒಳ್ಳೆಯದು. ಈ ಹಣ್ಣುಗಳನ್ನು ತಿಂದ ನಂತರ ಕೆಲವರಿಗೆ ತಲೆಸುತ್ತು, ಕಣ್ಣು ಮಂಜಾಗುವುದು ಉಂಟಾಗುವುದು ಸಾಮಾನ್ಯ. ಹೀಗಾದಾಗ ಮೊಸರು ಅಥವಾ ಲಸ್ಸಿಗೆ ಉಪ್ಪು ಹಾಕಿ ಕುಡಿಯಬೇಕಂತೆ. ಶುಂಠಿ ತಿನ್ನುವುದರಿಂದಲೂ ಈ ಸಮಸ್ಯೆ ದೂರವಾಗುತ್ತದೆ. ಪ್ರಮುಖವಾಗಿ ಈ ಹಣ್ಣನ್ನು ತಿಂದ ನಂತರ ಯಾವುದೇ ಕಾರಣಕ್ಕೂ ಹಾಲು ಕುಡಿಯಬಾರದು ಎನ್ನುತ್ತಾರೆ ವೈದ್ಯರು.
ಶ್ರೀಕೃಷ್ಣನಿಗೆ ಇದು ಪ್ರಿಯ
ಹಿಂದೂ ಸಂಪ್ರದಾಯದ ಪ್ರಕಾರ ನೇರಳೆ ಹಣ್ಣು ಕಪ್ಪಾಗಿರುವುದರಿಂದ ಇದು ಶ್ರೀಕೃಷ್ಣನಿಗೆ ಪ್ರಿಯವೆಂದು ಪರಗಣಿಸಲ್ಪಡುತ್ತದೆ. ಈ ಕಾರಣಕ್ಕೆ ಹೆಚ್ಚಾಗಿ ಹಿಂದೂ ದೇವಾಲಯಗಳ ಬಳಿ ಬೆಳೆಸಲಾಗುತ್ತದೆ. ಗುಜರಾತ್ ನಲ್ಲಿ ಇದನ್ನು ದೇವರುಗಳ ಹಣ್ಣು ಎಂದು ಪರಿಗಣಿಸುತ್ತಾರೆ.