ಗಾಂಜಾ ಸಾಗಿಸಿ, ಸಿಕ್ಕಿಬಿದ್ದ ಮಂಗಳೂರಿನ ಖದೀಮರು
ಒಡಿಶಾದಿಂದ ಮಂಗಳೂರಿಗೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಇಂದು ಮಂಗಳೂರಿನಲ್ಲಿ ಬಂಧಿಸಲಾಗಿದ್ದು, ಇವರಿಂದ ನಾಲ್ಕು ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು, ಮೇ 25: ಒಡಿಶಾದಿಂದ ಮಂಗಳೂರಿಗೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ಕೇಂದ್ರ ಉಪ ವಿಭಾಗದ ಎಸಿಪಿ ಉದಯ ನಾಯಕ್ ನೇತೃತ್ವದ ಪೊಲೀಸ್ ತಂಡ ಇಂದು ಬಂಧಿಸಿದೆ. ಆರೋಪಿಗಳಿಂದ ಮೊಬೈಲ್ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.
ಒಡಿಶಾದ ಶಾಂತನು ಕುಮಾರ್ ಶಾಹು (20) ಹಾಗೂ ಪಣಂಬೂರು ಮೀನಕಳಿಯದ ವಿಕ್ರಮ್ ಯಾನೆ ವಿಕ್ರಮ್ ಯಾನೆ ಜಯರಾಮ್ (27) ಬಂಧಿತ ಆರೋಪಿಗಳು.[ಮಂಗಳೂರು ಆಕ್ಸಿಸ್ ಬ್ಯಾಂಕ್ ಹಣ ದರೋಡೆ: ಮತ್ತಿಬ್ಬರ ಬಂಧನ]
ಆರೋಪಿಗಳನ್ನು ಬುಧವಾರ ನಗರದ ಮಂಗಳಾ ಕ್ರೀಡಾಂಗಣದ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಸಂದರ್ಭ ಸೆರೆ ಹಿಡಿಯಲಾಗಿದ್ದು, ಬಂಧಿತರಿಂದ 2.5 ಲಕ್ಷ ರೂ. ಮೌಲ್ಯದ 5 ಕೆಜಿ ಗಾಂಜಾ, 12 ಸಾವಿರ ಮೌಲ್ಯದ ಎರಡು ಮೊಬೈಲ್, ಗಾಂಜಾ ತೂಕ ಮಾಡುವ ಮಾಪಕ, ರೂ.500 ನಗದು ಹಣ ಹಾಗೂ ಗಾಂಜಾ ಸಾಗಾಟಕ್ಕೆ ಬಳಸಿದ್ದ ರಿಕ್ಷಾ (KA 19 AB 4458) ಸೇರಿದಂತೆ ಸುಮಾರು 4,37,500 ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಉದಯ ನಾಯಕ್ ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬರ್ಕೆ ಠಾಣೆಯ ಇನ್ಸ್ಪೆಕ್ಟರ್ ರಾಜೇಶ್ ಎ.ಕೆ. ಹಾಗೂ ಬರ್ಕೆ ಠಾಣೆಯ ಅಪರಾಧ ವಿಭಾಗದ ಪಿ.ಎಸ್.ಐ ನರೇಂದ್ರ ಮತ್ತು ಎ.ಎಸ್.ಐ ಪ್ರಕಾಶ್, ಸಿಬ್ಬಂದಿಗಳಾದ ಗಣೇಶ್, ರಾಜೇಶ್ ಅತ್ತಾವರ, ಕಿಸೋರ್ ಕೋಟ್ಯಾನ್, ಕಿಶೋರ್ ಪೂಜಾರಿ, ನಾಗರಾಜ, ಮಹೇಶ್ ಪಾಟೀಲ್ ಮುಂತಾದವರು ಪಾಲ್ಗೊಂಡಿದ್ದರು.