ಮಂಗಳೂರಿನಲ್ಲಿ ಕಳ್ಳತನ: ಲ್ಯಾಪ್ ಟಾಪ್ ಸಮೇತ ಸಿಕ್ಕ ಇಬ್ಬರು
ಮಂಗಳೂರು, ಫೆಬ್ರವರಿ 7: ನಗರದ ಹಿಲ್ ಸೆಂಟರ್ ಕಚೇರಿಯ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಕನಾಡಿ ಪೋಲಿಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅಸ್ಸಾಂ ರಾಜ್ಯದ ರಂಜನ್ ಕಲಿಟಾ (22) ಮತ್ತು ಶಿವಶಂಕರ್ ದಾಸ ಅಲಿಯಾಸ್ ಅಶೋಕ್ ಕಬೀರ್ (23) ಎಂದು ಗುರುತಿಸಲಾಗಿದೆ. ಬಂಧಿತರಿಂದ ಪೋಲಿಸರು ಕಳವು ಮಾಡಿದ ನಾಲ್ಕು ಲ್ಯಾಪ್ ಟಾಪ್, ಐದು ಐಪಾಡ್, ಒಂದು ಕ್ಯಾಮರಾ, ಒಂದು ವಾಚ್ ಸೇರಿದಂತೆ ರು.2,87,500 ಮೊತ್ತದ ಮಾಲನ್ನು ವಶಪಡಿಸಿಕೊಂಡಿದ್ದಾರೆ.[ನೊಬೆಲ್ ಪುರಸ್ಕೃತ ಕೈಲಾಸ್ ಸತ್ಯಾರ್ಥಿ ಮನೆಯಲ್ಲಿ ಕಳ್ಳತನ]
ಫೆಬ್ರವರಿ 6ರ ಸಂಜೆ ಆರೋಪಿಗಳಾದ ರಜನಿ ಕ್ಯಾಲಿಟಾ ಮತ್ತು ಶಿವಶಂಕರ್ ಕಳುವಾದ ವಸ್ತುಗಳೊಂದಿಗೆ ತಮ್ಮ ಹುಟ್ಟೂರಾದ ಅಸ್ಸಾಂಗೆ ಹೋಗಲು ಕಂಕನಾಡಿ ರೈಲ್ವೆ ನಿಲ್ದಾಣದಲ್ಲಿ ಕಾಯುತಿದ್ದಾರೆನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಕಂಕನಾಡಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನಗರ ಪೋಲಿಸ್ ಆಯುಕ್ತ ಚಂದ್ರಶೇಖರ್,ಸೇರಿದಂತೆ ಐವರು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.