ಮಂಗಳೂರು-ಬೆಂಗಳೂರು ಕುಡ್ಲ ಎಕ್ಸ್ಪ್ರೆಸ್ ರೈಲಿಗೆ ಚಾಲನೆ
ಮಂಗಳೂರು, ಏಪ್ರಿಲ್ 09 : ಬಹುನಿರೀಕ್ಷಿತ ಮಂಗಳೂರು-ಬೆಂಗಳೂರು ಹಗಲು 'ಕುಡ್ಲ ಎಕ್ಸ್ಪ್ರೆಸ್' ರೈಲು ಓಡಾಟಕ್ಕೆ ಭಾನುವಾರ (ಏಪ್ರಿಲ್ 9) ಕೇಂದ್ರ ರೈಲ್ವೆ ಸಚಿವ ಸುರೇಶ ಪ್ರಭು ಅವರು ಗೋವಾದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.
ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಅಂಕಿ-ಅಂಶ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಜೆ.ಆರ್.ಲೋಬೊ, ವಿಪಕ್ಷ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್ ಕವಿತಾ ಸನಿಲ್ ಮತ್ತಿತರರು ಉಪಸ್ಥಿತರಿದ್ದರು.
ಉದ್ಘಾಟನೆಯ ಬಳಿಕ ಬೆಳಗ್ಗೆ 11 ಗಂಟೆಗೆ ಪ್ರಥಮ ರೈಲು ಮಂಗಳೂರು ಜಂಕ್ಷನ್ನಿಂದ ಸಂಚಾರ ಆರಂಭಿಸಿತು.
ವಾರಕ್ಕೆ ಮೂರು ದಿನ ಓಡಾಟ
ಮಂಗಳೂರು ಜಂಕ್ಷನ್ನಿಂದ ಬೆಂಗಳೂರಿನ ಯಶವಂತಪುರ ನಡುವೆ ಈ ನೂತನ ರೈಲು ಸಂಚರಿಸಲಿದೆ. ರೈಲುಗಾಡಿ ಸಂಖ್ಯೆ 16576 ಮತ್ತು 16575 ವಾರಕ್ಕೆ ಮೂರು ದಿನ ಓಡಾಟ ನಡೆಸಲಿದೆ.
ರೈಲು ಸಂಖ್ಯೆ. 16576 ಸಂಚಾರ
ರೈಲು ನಂ. 16576 ಮಂಗಳೂರು ಜಂಕ್ಷನ್ನಿಂದ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಪೂರ್ವಾಹ್ನ 11:30ಕ್ಕೆ ಹೊರಟು ರಾತ್ರಿ 8:30ಕ್ಕೆ ಯಶವಂತಪುರ ತಲುಪಲಿದೆ.
ರೈಲು ಸಂಖ್ಯೆ 16575 ಸಂಚಾರ
ರೈಲು ನಂ. 16575 ಯಶವಂತಪುರದಿಂದ ಪ್ರತೀ ಭಾನುವಾರ, ಮಂಗಳವಾರ ಹಾಗೂ ಗುರುವಾರ ಸಂಚರಿಸಲಿದೆ. ಯಶವಂತಪುರದಿಂದ ಬೆಳಗ್ಗೆ 7:50ಕ್ಕೆ ಹೊರಟು ಸಂಜೆ 5:30ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ಪಣಂಬೂರು-ಜೋಕಟ್ಟೆ3.5 ಕಿ.ಮೀ. ಜೋಡಿ ಹಳಿ
ಇನ್ನು ಇದೇ ಸಂದರ್ಭದಲ್ಲಿ ಮಂಗಳೂರು ಜಂಕ್ಷನ್, ಮಂಗಳೂರು ಸೆಂಟ್ರಲ್ ಹಾಗೂ ಚೆರ್ವತ್ತೂರು ರೈಲು ನಿಲ್ದಾಣಗಳ ನಡುವಿನ 82 ಕಿ.ಮೀ. ರೈಲ್ವೆ ವಿದ್ಯುದ್ದೀಕರಣ ಮತ್ತು ಪಣಂಬೂರು-ಜೋಕಟ್ಟೆ ನಡುವಿನ 3.5 ಕಿ.ಮೀ. ಜೋಡಿ ಹಳಿಯನ್ನು ರೈಲ್ವೆ ಸಚಿವ ಸುರೇಶ್ ಪ್ರಭು ವಿದ್ಯುಕ್ತವಾಗಿ ಲೋಕಾರ್ಪಣೆಗೊಳಿಸಿದರು.