ಶಿವ ಶಿವಾ.. ದಕ್ಷಿಣ ಕನ್ನಡದಲ್ಲಿ ಬಿಸಿಲ ಬೇಗೆ ತಡೆಯಲಾಗುತ್ತಿಲ್ಲ
ಸಾಮಾನ್ಯವಾಗಿ ಕಡಲತಡಿಯ ನಗರ ಮಂಗಳೂರಿನಲ್ಲಿ ಬಿಸಿಲ ಬೇಗೆ ಹೆಚ್ಚಾಗಿಯೇ ಇರುತ್ತದೆ. ಆದರೆ ಈ ಬಾರಿ ತಾಪಮಾನ ಎಂದಿಗಿಂತ ಹೆಚ್ಚಾಗಿದ್ದು 38.7 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇದು ಸಾಮಾನ್ಯ ಗರಿಷ್ಠ ತಾಪಮಾನಕ್ಕಿಂತ 7 ಡಿಗ್ರಿ ಹೆಚ್ಚಾಗಿದೆ.
ಮಂಗಳೂರು, ಫೆಬ್ರವರಿ 23: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲ ಕಾವು ಹೆಚ್ಚಾಗುತ್ತಿದೆ. ಇದರಿಂದ ಜನರು ಮನೆಯಿಂದ ಹೊರಗಡೆ ಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ನಿಂತಲ್ಲಿ, ಕೂತಲ್ಲಿ, ನಡೆದಾಡಿದಲ್ಲಿ ಬೆವರು ನೀರಿನಂತೆ ಮೈಯಿಂದ ಇಳಿಯುತ್ತಿದೆ.
ಸಾಮಾನ್ಯವಾಗಿ ಕಡಲತಡಿಯ ನಗರ ಮಂಗಳೂರಿನಲ್ಲಿ ಬಿಸಿಲ ಬೇಗೆ ಹೆಚ್ಚಾಗಿಯೇ ಇರುತ್ತದೆ. ಆದರೆ ಈ ಬಾರಿ ತಾಪಮಾನ ಎಂದಿಗಿಂತ ಹೆಚ್ಚಾಗಿದ್ದು 38.7 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇದು ಸಾಮಾನ್ಯ ಗರಿಷ್ಠ ತಾಪಮಾನಕ್ಕಿಂತ 7 ಡಿಗ್ರಿ ಹೆಚ್ಚು ಎಂದು ಪಣಂಬೂರು ತಾಪಮಾನ ವೀಕ್ಷಣಾಲಯ ಹೇಳಿದೆ.[ಮರದಿಂದ ಕೆಳಗೆ ಬಿದ್ದಿದ್ದ ದೈವ ಕೋಲಾಧಿಕಾರಿ ಸಾವು]
ಭಾರತೀಯ ಹವಾಮಾನ ಇಲಾಖೆ ಮಂಗಳೂರು ನಗರ ಪ್ರದೇಶದ ತಾಪಮಾನ ದಾಖಲಾತಿ ಆರಂಭಿಸಿದ ಬಳಿಕ ಇದೇ ಮೊದಲ ಬಾರಿಗೆ ಫೆಬ್ರುವರಿ ತಿಂಗಳಲ್ಲಿ ಸಾರ್ವಕಾಲಿಕ ದಾಖಲೆಯ ತಾಪಮಾನ ಹೆಚ್ಚಳವಾಗಿದೆ. ಸಾಮಾನ್ಯವಾಗಿ ಫೆಬ್ರವರಿಯಲ್ಲಿ ಗರಿಷ್ಟ ತಾಪಮಾನ 33.3 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದರೆ ಈ ಬಾರಿ 38.7 ಡಿಗ್ರಿ ಸೆಲ್ಸಿಯಸ್ ತಲುಪಿದೆ.
ಇನ್ನು ಕಳೆದ ವರ್ಷ ಫೆಬ್ರುವರಿ ತಿಂಗಳ ಗರಿಷ್ಠ ತಾಪಮಾನ ಫೆ. 19ರಂದು ದಾಖಲಾಗಿತ್ತು. ಅವತ್ತು ಗರಿಷ್ಟ 38.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಸವಿತ್ತು. ಆದರೆ ಈ ಬಾರಿ ಆ ದಾಖಲೆ ಮುರಿದಿದೆ.
ಮಂಗಳೂರಿನಲ್ಲಿ ಮಾತ್ರವಲ್ಲ ಸಮುದ್ರದ ಬದಿಯಲ್ಲಿರುವ ಹೊನ್ನಾವರ ಮತ್ತು ಕಾರವಾರಗಳಲ್ಲೂ ಇದೇ ರೀತಿಯ ತಾಪಮಾನ ಕಂಡುಬಂದಿದೆ.[ಕೆಆರೆಸ್ ನಲ್ಲಿ ಕಾಣುತ್ತಿದೆ ನೆಲ, ಬೆಂಗಳೂರಿಗರ ಪಾಲಿಗೆ ಕೆಟ್ಟಕಾಲ]
ಕಾರವಾರದಲ್ಲಿ ಬುಧವಾರ 38.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಸಾಮಾನ್ಯ ಗರಿಷ್ಟ ತಾಪಮಾನಕ್ಕಿಂತ 6 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಕಾರವಾರದಲ್ಲಿ ಸಾರ್ವಕಾಲಿಕ ಗರಿಷ್ಠ ತಾಪಮಾನ 39.1 ಡಿಗ್ರಿ ಸೆಲ್ಸಿಯಸ್ 2009 ರ ಫೆಬ್ರುವರಿ 21 ರಂದು ದಾಖಲಾಗಿತ್ತು.
ಹೊನ್ನಾವರದಲ್ಲಿ 37.2 ಡಿಗ್ರಿ ಸೆಲ್ಸಿಯಸ್ ತಾಪಮಾನದೊಂದಿಗೆ ಸಾಮಾನ್ಯ ಗರಿಷ್ಟ ತಾಪಮಾನಕ್ಕಿಂತ 5 ಡಿಗ್ರಿ ಸೆಲ್ಸಿಯಸ್ ಹೆಚ್ಚು ತಾಪಮಾನ ದಾಖಲಾಗಿದೆ.
ಒಟ್ಟಿನಲ್ಲಿ ಮಧ್ಯಾಹ್ನ ಯಾತಕ್ಕಾಗಿ ಬಂತು ಅಂತಾ ಜನರು ಮಾತಾಡಿಕೊಂಡರೆ ಬೀದಿ ಬದಿ ಹಾಗೂ ಪಾನೀಯಗಳನ್ನ ಮಾರುವ ವ್ಯಾಪಾರಿಗಳಿಗೆ ಮಾತ್ರ ಭರ್ಜರಿ ವ್ಯಾಪಾರವಾಗುತ್ತಿದೆ.