ಇಸ್ಮಾಯಿಲ್ ಕೊಲೆ ನಾಲ್ವರಿಗೆ ಸುಪಾರಿ, 7 ಮಂದಿ ಬಂಧನ
ಸುಳ್ಯ, ಅಕ್ಟೋಬರ್ 03: ಸುಳ್ಯ ತಾಲೂಕು ಪಂಚಾಯಿತಿಯ ಮಾಜಿ ಸದಸ್ಯೆ ವಹೀದಾ ಇಸ್ಮಾಯಿಲ್ ಅವರ ಪತಿ ಕರಾವಳಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸ್ಮಾಯಿಲ್ ನೇಲ್ಯಮಜಲು (52 ವರ್ಷ) ಹತ್ಯೆಗೆ ಸಂಬಂಧಿಸಿದಂತೆ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಮಸೀದಿಯಲ್ಲಿ ನಮಾಜು ಮಾಡಿ ಹಿಂತಿರುಗುತ್ತಿದ್ದ ಇಸ್ಮಾಯಿಲ್ ಅವರನ್ನು ತಲವಾರಿನಿಂದ ಕಡಿದು ಕೊಲೆ ಮಾಡಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಬೆಚ್ಚಿ ಬೀಳುವಂತೆ ಮಾಡಿತ್ತು. ಸೆಪ್ಟೆಂಬರ್ 23ರಂದು ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ.[ಇಸ್ಮಾಯಿಲ್ ರನ್ನು ಕೊಂದಿದ್ದು ಸುಪಾರಿ ಕಿಲ್ಲರ್ಸ್!]
ಇಸ್ಮಾಯಿಲ್ರವರನ್ನು ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ತಲವಾರಿನಿಂದ ಕಡಿದು ಕೊಲೆಗೈಯ್ಯಲಾಗಿತ್ತು. ಇಸ್ಮಾಯಿಲ್ ಅವರು ಮಸೀದಿಯಲ್ಲಿ ಜುಮಾ ಪ್ರಾರ್ಥನೆ ಮುಗಿಸಿ ಹೊರಬಂದು ತಮ್ಮ ವಾಹನದತ್ತ ಬಂದಾಗ ಕಾರಿನಲ್ಲಿ ಬಂದ ಹಂತಕರ ತಂಡ ಇವರ ಮುಖ ಸಹಿತ ದೇಹದ ವಿವಿಧ ಭಾಗಗಳಿಗೆ ತಲವಾರಿನಿಂದ ಕಡಿದಾಗ ಗಂಭೀರ ಗಾಯಗೊಂಡ ಇಸ್ಮಾಯಿಲ್ ಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದರು.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿಯನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ. ಈ ಪೈಕಿ ನಾಲ್ವರು ಹತ್ಯೆಗೆ ಸುಪಾರಿ ನೀಡಿದವರು ಮತ್ತು ಮೂವರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಎಂದು ಮೂಲಗಳಿಂದ ತಿಳಿದು ಬಂದಿದೆ.