ಇಳಿವಯಸ್ಸೇ ತಲೆತಗ್ಗಿಸುತ್ತೆ ಕಬ್ಬಿನ ಜೂಸ್ ಮಾಮನ ಎದುರು
ಸ್ವಲ್ಪ ವಯಸ್ಸಾದರೂ ಸಾಕು ಶಕ್ತಿಯೆಲ್ಲಾ ಕುಗ್ಗಿ ಹೋಯಿತೆಂದು ಇತರರ ಆಶ್ರಯ ಬಯಸುವವರೇ ಹೆಚ್ಚು. ಆದರೆ ತಮ್ಮ ಇಳಿವಯಸ್ಸಿನಲ್ಲೂ ಯುವಕರಿಗೆ ತಾವೇನು ಕಮ್ಮಿ ಇಲ್ಲ ಎನ್ನುವಂತೆ ಕಷ್ಟಪಟ್ಟು ದುಡಿದು ಜೀವನ ಸಾಗಿಸುತ್ತಿದ್ದಾರೆ. ತಿರುಗಿ ತಿನ್ನುವ ಸೋಮಾರಿಗಳಿಗೆ ಆದರ್ಶರಾಗಿರುವ, ಕೂತು ಉಂಡರೆ ಕುಡಿಕೆ ಹೊನ್ನು ಸಾಲದು ಎಂದು ಅರಿತಿರುವ 74ರ ಹರೆಯದ, ಕಾಯಕವೇ ಕೈಲಾಸ ಎನ್ನುವ ವ್ಯಕ್ತಿಯೇ ಮಂಗಳೂರಿನ ಶೆಣೈ ಮಾಮ.
ಬೀದಿ ಬದಿಯ ಪುಟ್ಟ ಅಂಗಡಿಯಲ್ಲಿ ಕಬ್ಬಿನ ಜ್ಯೂಸ್ ಮಾಡುವ ಇವರ ಪೂರ್ಣನಾಮ ಅನಂತ್ ಶೆಣೈ. ಎಲ್ಲರೂ ಇವರನ್ನು ಪ್ರೀತಿಯಿಂದ 'ಶೆಣೈ ಮಾಮ್' ಎಂದು ಕರೆಯುತ್ತಾರೆ. 74 ವರ್ಷ ಪೂರ್ತಿಯಾಗಿದ್ದರೂ ಯುವಕರಂತೆ ತಮ್ಮ ಜೀವನ ನಿರ್ವಹಣೆಗಾಗಿ ಕಬ್ಬಿನ ಜ್ಯೂಸ್ ಮಾರುತ್ತಿದ್ದಾರೆ. ಮಂಗಳೂರಿನ ಕಾಪಿಕಾಡ್ ನಿವಾಸಿಯಾದ ಅನಂತ್ ಶೆಣೈ ತಮ್ಮ 20ನೇ ವಯಸ್ಸಿನಲ್ಲಿ ಅಂದರೆ 54 ವರ್ಷದ ಹಿಂದೆ ಈ ಕಬ್ಬಿನ ಜ್ಯೂಸ್ ಅಂಗಡಿ ತೆರೆದರು.
ಅಂದಿನಿಂದ ಇಂದಿನವರೆಗೂ ಯಾರ ಹಂಗಿನಲ್ಲೂ ಇರದೆ ಕಷ್ಟಪಟ್ಟು ದುಡಿಯುತ್ತಿದ್ದಾರೆ. ಪ್ರಸ್ತುತ ಮಂಗಳೂರಿನ ಉರ್ವಾ ಸಮೀಪದ ಕೆನರಾ ಹೈಸ್ಕೂಲ್ ಮುಂಭಾಗದಲ್ಲಿ ವ್ಯಾಪಾರ ಮಾಡುತ್ತಿದ್ದು, ಮುಂಜಾನೆ ನಾಲ್ಕು ಗಂಟೆಯಿಂದಲೇ ಕೆಲಸ ಆರಂಭಿಸುತ್ತಾರೆ. ಸಂಜೆಯವರೆಗೆ ದುಡಿಯುವ ಅನಂತ್ ಶೆಣೈ ತಮ್ಮ ಜೀವನ ನಿರ್ವಹಣೆಗೆ ಬೇಕಾದಷ್ಟು ಸಂಪಾದನೆ ಮಾಡುತ್ತಾರೆ.[ಲಾಭದ ಹಂಗಿಲ್ಲದೆ ಹೊಟ್ಟೆ ತುಂಬಿಸುವ ಪಡ್ಡು ಸ್ಟಾಲ್ ಅಜ್ಜಿ!]
ಬೆಳಿಗ್ಗೆ 4 ಗಂಟೆಗೆ ಕಬ್ಬಿನ ಜ್ಯೂಸ್ ಮಿಷನ್ ಆನ್ ಮಾಡಿ, ಕಬ್ಬನ್ನು ಅದರೊಳಗಿಟ್ಟು ಗಾಲಿ ತಿರುಗಿಸುತ್ತಾ, ಕಬ್ಬಿನ ರಸ ತೆಗೆದು ಗ್ರಾಹಕರಿಗೆ ನೀಡುವ ಕಬ್ಬಿನ ರಸದಂತೆ ಸದಾ ಉತ್ಸುಕರಾಗಿರುವ ಇವರು 'ಶ್ರಮಕ್ಕೆ ವಯಸ್ಸಿನ ಹಂಗಿಲ್ಲ' ಎನ್ನುವ ಭಾವ ಹೊಂದಿದ್ದಾರೆ.
ಅನಂತ್ ಶೆಣೈ
ತಮ್ಮ ಕಾಯಕವನ್ನು ಈ ಕಬ್ಬಿನ ಜ್ಯೂಸ್ ನಿಂದಲೇ ಆರಂಭಿಸಿದ ಶೆಣೈ ಮಾಮ್ ಇದ್ದ ಓರ್ವಳೇ ಮಗಳನ್ನು ಮದುವೆ ಮಾಡಿದ್ದಾರೆ. ಕಳೆದ 19 ವರ್ಷದ ಹಿಂದೆ ಪತ್ನಿಯನ್ನು ಕಳೆದುಕೊಂಡ ಶೆಣೈ ಮಾಮ್ ಬಳಿಕ ಒಬ್ಬರೇ ವಾಸಿಸುತ್ತಿದ್ದಾರೆ.ಪರರ ಸಹಾಯ ಹಸ್ತ ಚಾಚದ ಶೆಣೈ ಮಾಮ್ ಅವರು, 'ನನ್ನ ಕೈ ಕಾಲು ಗಟ್ಟಿ ಇರುವವರೆಗೂ ದುಡಿದು ತಿನ್ನುತ್ತೇನೆ' ಎನ್ನುತ್ತಾರೆ.
ಇಳಿವಯಸ್ಸಿನಲ್ಲೂ ಕಷ್ಟ ಪಟ್ಟು ದುಡಿಯುವ ಇವರು ಗ್ರಾಹಕರಿಗೂ ಅಚ್ಚುಮೆಚ್ಚು. ಜೂಸ್ ಅಂಗಡಿಯ ದಾರಿಯಲ್ಲಿ ಹೋಗುವವರು ಬಾಯಾರಿಕೆ ಇಲ್ಲದಿದ್ದರೂ ಶೆಣೈ ಮಾಮ್ ನ ಮೇಲಿನ ಪ್ರೀತಿಯಿಂದ ಒಂದು ಕಪ್ ಜ್ಯೂಸ್ ಕುಡಿದೇ ಮುಂದೆ ಸಾಗುತ್ತಾರೆ.[ಕಷ್ಟದ ಸೂಜಿಯಿಂದ ಸುಂದರ ಬದುಕು ಹೊಲಿಯುತ್ತಿರುವ ಯಲ್ಲಮ್ಮ]
ಪ್ರತಿ ದಿನ ಬೆಳಗ್ಗೆ 4 ಗಂಟೆಗೆ ಅಂಗಡಿಗೆ ಆಗಮಿಸುವ ಶೆಣೈ ಮಾಮ್ ಮೊದಲು ಕಬ್ಬನ್ನು ಶುಚಿಗೊಳಿಸಿ ವ್ಯಾಪಾರಕ್ಕೆ ನಿಲ್ಲುವ ಇವರಿಗೆ ಬೆಳಕಿನ ವಾಕ್ ದಾರರೇ ಮೊದಲ ಗ್ರಾಹಕರು. ಮನೆಯಲ್ಲಿ ಓರ್ವರೇ ಇರುವುದರಿಂದ ತಮಗೆ ಬೇಕಾದ ಅಡುಗೆಯನ್ನು ತಾವೇ ಮಾಡಿಕೊಳ್ಳುತ್ತಾರೆ.
'ಇವರ ಬಡತನ ಕಂಡ ಸಂಬಂಧಿಕರು ಇವರಿಂದ ದೂರ ಉಳಿದಿದ್ದಾರೆ. ಇವರ ಮನಸ್ಸು ಸಂಬಂಧಿಕರ ಒಡನಾಟ ಬಯಸುತ್ತಿದೆ. ಮಗಳು ಸಾಕಲು ಸಿದ್ಧರಿದ್ದರೂ ಮಗಳಿಂದ ಪ್ರೀತಿ ಸಾಕು. ಆಕೆಯ ಮನೆ ಬೇಡ ಎನ್ನುವ ಸ್ವಾಭಿಮಾನದ ಶೆಣೈ ಮಾಮ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಗ್ರಾಹಕ ಮಹೇಶ್ ಭಟ್ ಶೆಣೈ ಮಾಮನ ಕುರಿತು ಅಭಿಮಾನದ ಮಾತುಗಳಾಡುತ್ತಾರೆ.