ದ.ಕ. ಜಿಲ್ಲಾ ನೂತನ ಎಸ್ಪಿಯಾಗಿ ಸುಧೀರ್ ರೆಡ್ಡಿ ಅಧಿಕಾರ ಸ್ವೀಕಾರ
ಮಂಗಳೂರು, ಜೂನ್ 22: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಎಸ್ಪಿಯಾಗಿ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ ಅಧಿಕಾರ ಸ್ವೀಕಾರಿಸಿದ್ದಾರೆ. ಭೂಷಣ್ ಗುಲಾಬ್ ರಾವ್ ಬೋರಸೆಯವರಿಂದ ಅಧಿಕಾರ ಸ್ವೀಕರಿಸಿದ ಸುಧೀರ್ ಕುಮಾರ್ ರೆಡ್ಡಿ ತಕ್ಷಣ ಬಂಟ್ವಾಳಕ್ಕೆ ತೆರಳಿ ಗಲಭೆ ಪರಿಸ್ಥಿತಿ ಅವಲೋಕಿಸಿದರು.
ಮಂಡ್ಯದಲ್ಲಿ ಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುಧೀರ್ ಕುಮಾರ್ ರೆಡ್ಡಿ 2010ನೆ ಸಾಲಿನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಮೂಲತ: ಆಂಧ್ರ ಪ್ರದೇಶದ ಗುಂಟೂರಿನವರಾದ ರೆಡ್ಡಿ ಈ ಹಿಂದೆ ಭಟ್ಕಳದಲ್ಲಿ ಎಎಸ್ಪಿಯಾಗಿ, ಚಿಕ್ಕಬಳ್ಳಾಪುರ, ಬೀದರ್ ಜಿಲ್ಲೆಗಳಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ, ಪ್ರಸ್ತುತ ಬೆಂಗಳೂರಿನ ನಗರ ಪೊಲೀಸ್ ಆಡಳಿತ ವಿಭಾಗಕ್ಕೆ ವರ್ಗಾವಣೆಗೊಂಡಿರುವ ಭೂಷಣ್ ಗುಲಾಬ್ ರಾವ್ ಬೋರಸೆ ನೂತನ ಎಸ್ಪಿಗೆ ಅಧಿಕಾರ ಹಸ್ತಾಂತರಿಸಿದರು.
ಕಲ್ಲಡ್ಕ ಘಟನೆಯನ್ನು ನಿಭಾಯಿಸುವಲ್ಲಿ ಎಸ್ಪಿ ಭೂಷಣ್ ವಿಫಲವಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಆರೆಸ್ಸೆಸ್ ಮುಖಂಡ ಡಾ.ಪ್ರಭಾಕರ ಭಟ್ ಮೇಲೆ ಕೇಸು ದಾಖಲಿಸಿ ಬಂಧಿಸುವಂತೆ ರೈ ಎಸ್ಪಿಗೆ ತಾಕೀತು ಮಾಡಿದ್ದರು. ಈ ವಿಚಾರ ಸಾಕಷ್ಟು ವಿವಾದಕ್ಕೆ ಎಡೆಮಾಡಿತ್ತಲ್ಲದೆ, ವಿಧಾನಸಭಾ ಅಧಿವೇಶನದಲ್ಲೂ ಚರ್ಚೆಗೆ ಕಾರಣವಾಗಿತ್ತು.